ಲಂಡನ್, ಜೂನ್ 26: ಅಫಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ತಿಣುಕಾಡಿ ಸಾಕಷ್ಟು ಟೀಕೆಗೆ ಗುರಿಯಾದ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಕುರಿತಾಗಿ ಭಾರತ ತಂಡದ ಬೌಲಿಂಗ್ ಕೋಚ್ ಭರತ್ ಅರುಣ್ ಮಾತನಾಡಿದ್ದಾರೆ.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
ಗುರುವಾರ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ವಿಶ್ವಕಪ್ ಪಂದ್ಯಕ್ಕೂ ಮುನ್ನಾದಿನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭರತ್ ಅರುಣ್, ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳು ಸ್ಥಿತಿಗತಿಗೆ ತಕ್ಕಂತೆ ಬ್ಯಾಟಿಂಗ್ ನಡೆಸಿದ್ದಾರೆ ಇದರಲ್ಲಿ ತಲೆ ಕೆಟಿಸಿಕೊಳ್ಳುವ ಅಗತ್ಯವಿಲ್ಲ ಎಂದಿದ್ದಾರೆ.
"ಖಂಡಿತವಾಗಿಯೂ ಚಿಂತಿಸುವ ಅಗತ್ಯವಿಲ್ಲ. ಪಿಚ್ ಮತ್ತು ಸ್ಥಿತಿಗತಿಗೆ ಹೊಂದಿಕೊಂಡು ಅದಕ್ಕೆ ತಕ್ಕಂತೆ ಆಡಬೇಕಿದೆ. ಇದರಿಂದಲೇ ಆಫ್ಘನ್ ವಿರುದ್ಧ ಕಡಿಮೆ ಮೊತ್ತವನ್ನು ಯಶಸ್ವಿಯಾಗಿ ಕಾಯ್ದುಕೊಳ್ಳಲು ಸಾಧ್ಯವಾಯಿತು. ಒಂದು ವೇಳೆ ಮಧ್ಯದಲ್ಲಿ ಮತ್ತೊಂದು ವಿಕೆಟ್ ಕಳೆದುಕೊಂಡಿದ್ದರೂ, ಪರಿಸ್ಥಿತಿಗಳು ಮತ್ತಷ್ಟು ಹದಗೆಡುತ್ತಿತ್ತು. ಹೀಗಾಗಿ ಈ ಕುರಿತಾಗಿ ಹೆಚ್ಚೇನು ತೆಲೆಕೆಡಿಸಿಕೊಳ್ಳುವ ಅಗತ್ಯ ಸದ್ಯಕ್ಕಿಲ್ಲ,'' ಎಂದು ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಹೇಳಿದ್ದಾರೆ.
ಟೀಮ್ ಇಂಡಿಯಾ ವಿರುದ್ದದ ಸರಣಿ ಬಳಿಕ ಕ್ರಿಸ್ ಗೇಲ್ ನಿವೃತ್ತಿ!
ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ಕೀಪರ್ ಬ್ಯಾಟ್ಸ್ಮನ್ ಎಂ.ಎಸ್ ಧೋನಿ 52 ಎಸೆತಗಳಲ್ಲಿ 28 ರನ್ಗಳನ್ನು ಗಳಿಸುವ ಮೂಲಕ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಧೋನಿ ಅವರ ಮಂದಗತಿಯ ಇನಿಂಗ್ಸ್ ಪರಿಣಾಮ ಭಾರತ ತಂಡ 224 ರನ್ಗಳ ಸಾಧಾರಣ ಮೊತ್ತವನ್ನಷ್ಟೇ ದಾಖಲಿಸಲು ಸಾಧ್ಯವಾಯಿತು. ಆದರೂ, ಬೌಲರ್ಗಳ ಭರ್ಜರಿ ಪ್ರದರ್ಶನದಿಂದ ಆಫ್ಘನ್ ಪಡೆಯನ್ನು 213 ರನ್ಗಳಿಗೆ ಆಲ್ಔಟ್ ಮಾಡಿ ಜಯ ದಕ್ಕಿಸಿಕೊಂಡಿತು. ಮೊಹಮ್ಮದ್ ಶಮಿ ಕೊನೆಯ ಓವರ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ದರು.
ಇದೇ ವೇಳೆ ಸ್ನಾಯು ಸೆಳೆತದ ಸಮಸ್ಯೆಯಿಂದ ಚೇತರಿಸಿರುವ ಭುವನೇಶ್ವರ್ ಕುಮಾರ್ ಆಡುವ 11ರ ಬಳಗಕ್ಕೆ ಮರಳಲು ಸಜ್ಜಾಗಿದ್ದಾರೆ. ಭುವಿ ಆಗಮನವಾದರೆ ಶಮಿ ಹೊರಗುಳಿಯಬೇಕಾಗುತ್ತದೆ. ಹೀಗಾಗಿ ಇಬ್ಬರಲ್ಲಿ ಯಾರನ್ನು ಆಯ್ಕೆ ಮಾಡುವುದು ಎಂಬ ಗೊಂದಲ ಕೂಡ ಟೀಮ್ ಇಂಡಿಯಾಗೆ ಎದುರಾಗಿದೆ. ಈ ಕುರಿತಾಗಿಯೂ ಮಾತನಾಡಿದ ಭರತ್, ಪರಿಸ್ಥಿತಿಗಳಿಗೆ ಅಗತ್ಯವಿರುವ ಬೌಲರ್ ಆಯ್ಕೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಆಸೀಸ್ ವಿರುದ್ಧದ ಹೀನಾಯ ಸೋಲಿನ ನಂತರ ಮಾರ್ಗನ್ ಹೇಳಿದ್ದೇನು?
"ಭುವನೇಶ್ವರ್ ಅವರ ಗಾಯದ ಸಮಸ್ಯೆ ಅಷ್ಟೇನು ಗಂಭೀರ ಸ್ವರೂಪದ್ದಲ್ಲ. ಹೀಗಾಗಿ ಅವರಿಗೆ ವಿಶ್ರಾಂತಿ ನೀಡಿ ಶಮಿಗೆ ಪಂದ್ಯವನ್ನಾಡುವ ಅವಕಾಶ ಮಾಡಲಾಗಿತ್ತು. ಇದೀಗ ಸ್ಥಿತಿಗತಿಗಳಿಗೆ ತಕ್ಕಂತೆ ಯಾವ ಬೌಲರ್ ಆಡಿಸಬೇಕೆಂಬುದನ್ನು ನಿರ್ಧರಿಸಲಿದ್ದೇವೆ. ಈ ರೀತಿಯ ಸ್ಪರ್ಧಾತ್ಮಕ ಗೊಂದಲಗಳು ತಂಡದ ಮಟ್ಟಿಗೆ ಒಳ್ಳೆಯದೆ,'' ಎಂದಿದ್ದಾರೆ.