ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿ ಇಂದು ಅಂತ್ಯವಾಗಲಿದ್ದು ಫೆಬ್ರವರಿ ಮೊದಲ ವಾರದಿಂದ ಭಾರತ ತವರಿನಲ್ಲೇ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಈ ಸರಣಿಗೆ ಮುಂದಿನ ಎರಡ್ಮೂರು ದಿನಗಳಲ್ಲಿ ಟೀಮ್ ಇಂಡಿಯಾ ಆಯ್ಕೆ ಸಮಿತಿ ಸಭೆ ಸೇರಲಿದ್ದು ತಂಡವನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ ಗಾಯಗೊಂಡು ಐಪಿಎಲ್ ಹಾಗೂ ಆಸಿಸ್ ಪ್ರವಾಸವನ್ನು ತಪ್ಪಿಸಿಕೊಂಡಿದ್ದ ಭಾರತ ತಂಡದ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಅಪ್ಡೇಟ್ ನೀಡಿದ್ದಾರೆ.
"ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿಯಲು ನಾನು ಉತ್ಸಾಹಿತನಾಗಿದ್ದೇನೆ. ಗಾಯದಿಂದ ನಾನು ವಾಪಾಸಾಗಿದ್ದು ಫಿಟ್ ಆಗಿದ್ದೇನೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಉತ್ತಮವಾಗಿ ರಿಹ್ಯಾಬ್ ಪೂರ್ಣಗೊಳಿಸಿದ್ದು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಫಿಟ್ನೆಸ್ ಸಾಭೀತುಪಡಿಸುವ ಸಲುವಾಗಿ ಆಡುತ್ತಿದ್ದೇನೆ".
ಭಾರತ vs ಆಸ್ಟ್ರೇಲಿಯಾ: 91 ರನ್ ಗಳಿಸಿ ವಿಕೆಟ್ ಒಪ್ಪಿಸಿದ ಶುಬ್ಮನ್ ಗಿಲ್
" ಐಪಿಎಲ್ಗೂ ಮುನ್ನ ಇಂಗ್ಲೆಂಡ್ ವಿರುದ್ಧ ಉತ್ತಮ ಪ್ರದರ್ಶನ ನೀಡುವ ಗುರಿ ಹೊಂದಿದ್ದೇನೆ. ಆದರೆ ಅವಕಾಶಕ್ಕಾಗಿ ಕಾಯುತ್ತಿದ್ದೇನೆ. ಈ ವರ್ಷ ಸಾಕಷ್ಟು ಅವಕಾಶಗಳ ನಿರೀಕ್ಷೆಯಲ್ಲಿದ್ದು ಒಂದರ ಬಳಿಕ ಮತ್ತೊಂದರಂತೆ ಎದುರು ನೋಡುತ್ತಿದ್ದೇನೆ" ಎಂದಿದ್ದಾರೆ ಭುವನೇಶ್ವರ್ ಕುಮಾರ್.
ಭುವನೇಶ್ವರ್ ಕುಮಾರ್ ಸದ್ಯ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಪಾಲ್ಗೊಂಡಿದ್ದು ಉತ್ತರ ಪ್ರದೇಶ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಪಂಜಾಬ್ ವಿರುದ್ಧ ಆಲೂರಿನಲ್ಲಿ ನಡೆದ ಪಂದ್ಯದಲ್ಲಿ 3 ವಿಕೆಟ್ ಕಿತ್ತು ಮಿಂಚಿದ್ದಲ್ಲದೆ ಬ್ಯಾಟಿಂಗ್ನಲ್ಲೂ ಅಜೇಯ 24 ರನ್ ಬಾರಿಸಿ ಮಿಂಚಿದ್ದರು.
ಭಾರತ vs ಆಸ್ಟ್ರೇಲಿಯಾ 4ನೇ ಟೆಸ್ಟ್ ಬ್ರಿಸ್ಬೇನ್, ಅಂತಿಮ ದಿನದಾಟ Live ಸ್ಕೋರ್
2018ರ ದಕ್ಷಿಣ ಆಫ್ರಿಕಾ ವಿರುದ್ಧದ ಪ್ರವಾಸದ ಬಳಿಕ ಭುವನೇಶ್ವರ್ ಕುಮಾರ್ ಟೆಸ್ಟ್ ತಂಡವನ್ನು ಪ್ರತಿನಿಧಿಸಿಲ್ಲ. ಈಗ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕಣಕ್ಕಿಳಿಯುವ ನಿರೀಕ್ಷೆಯಲ್ಲಿದ್ದಾರೆ. 21 ಟೆಸ್ಟ್, 114 ಏಕದಿನ ಹಾಗೂ 43 ಟಿ20 ಕ್ರಿಕೆಟ್ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದು ಕ್ರಮವಾಗಿ 63, 132 ಹಾಗೂ 41 ವಿಕೆಟ್ ಪಡೆದಿದ್ದಾರೆ.