ಕೋಲ್ಕತಾ, ನವೆಂಬರ್ 20: ಪ್ರವಾಸಿ ಶ್ರೀಲಂಕಾ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳ ಸರಣಿಯ ಎರಡನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾವನ್ನು ಸೋಮವಾರ ರಾತ್ರಿ ಪ್ರಕಟಿಸಲಾಗಿದೆ. ವೇಗಿ ಭುವನೇಶ್ವರ್ ಕುಮಾರ್ ಹಾಗೂ ಬ್ಯಾಟ್ಸ್ ಮನ್ ಶಿಖರ್ ಧವನ್ ಅವರು 2ನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.
ಕೋಲ್ಕತಾದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಐದನೇ ದಿನವಾದ ಇಂದು ಪ್ರವಾಸಿ ಶ್ರೀಲಂಕಾ ತಂಡದ ವಿರುದ್ಧ ಟೀಂ ಇಂಡಿಯಾ ನಾಯಕ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಶ್ರೀಲಂಕಾಕ್ಕೆ ಗೆಲ್ಲಲು 231ರನ್ ಟಾರ್ಗೆಟ್ ನೀಡಲಾಗಿತ್ತು. ಅಂತಿಮವಾಗಿ ಶ್ರೀಲಂಕಾ ತಂಡ 75/7 ಸ್ಕೋರ್ ಮಾಡಿತು.
ಭುವನೇಶ್ವರ್ ಕುಮಾರ್ ಹಾಗೂ ಶಿಖರ್ ಧವನ್ ಇಬ್ಬರೂ ಕೂಡಾ ವೈಯಕ್ತಿಕ ಕಾರಣಗಳಿಗಾಗಿ ಮುಂದಿನ ಪಂದ್ಯವನ್ನು ಆಡಲು ಬಯಸುತ್ತಿಲ್ಲ. ಭುವನೇಶ್ವರ್ ಕುಮಾರ್ ಅವರು ಪೂರ್ತಿ ಸರಣಿಗೆ ಅಲಭ್ಯರಾಗಿದ್ದರೆ, ಶಿಖರ್ ಧವನ್ ಅವರನ್ನು ಮೂರನೇ ಟೆಸ್ಟ್ ಪಂದ್ಯಕ್ಕೆ ಆಯ್ಕೆ ಮಾಡಬಹುದಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ.
ಆರಂಭಿಕ ಆಟಗಾರರಾಗಿ ಮುರಳಿ ವಿಜಯ್ ಅವರು ತಂಡಕ್ಕೆ ಮರಳಿದ್ದರೆ, ವೇಗಿ ವಿಜಯ್ ಶಂಕರ್ ಅವರು ಭುವನೇಶ್ವರ್ ಬದಲಿಗೆ ತಂಡ ಸೇರುತ್ತಿದ್ದಾರೆ.
ತಂಡ ಇಂತಿದೆ: ವಿರಾಟ್ ಕೊಹ್ಲಿ(ನಾಯಕ), ಕೆಎಲ್ ರಾಹುಲ್, ಎಂ ವಿಜಯ್, ಚೇತೇಶ್ವರ್ ಪೂಜಾರಾ, ಅಜಿಂಕ್ಯ ರಹಾನೆ (ಉಪ ನಾಯಕ), ರೋಹಿತ್ ಶರ್ಮ, ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೇಜ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಇಶಾಂತ್ ಶರ್ಮ, ವಿಜಯ್ ಶಂಕರ್.