ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಆಯ್ಕೆ ಬಗ್ಗೆ ಭಾರತ ಕೊಂಚ ತಲೆಕೆಡಿಸಿಕೊಂಡಿದೆ
ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಯುಎಇ ಚರಣದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಆಟಗಾರರಾದ ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಅಕ್ಷರಶಃ ಮಂಕಾಗಿದ್ದಾರೆ. ಈ ಇಬ್ಬರ ಪ್ರದರ್ಶನದ ಕುರಿತು ಮಾತನಾಡಿರುವ ಅಜಿತ್ ಅಗರ್ಕರ್ 'ಸದ್ಯ ಯುಎಇಯಲ್ಲಿ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಈ ಇಬ್ಬರು ಆಟಗಾರರು ರನ್ ಗಳಿಸಲು ಪರದಾಡುತ್ತಿದ್ದಾರೆ. ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳದೇ ರನ್ ಗಳಿಸಲು ಪರದಾಡುತ್ತಿರುವ ಈ ಇಬ್ಬರನ್ನು ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಆಯ್ಕೆ ಮಾಡಿಕೊಂಡಿರುವ ಟೀಮ್ ಇಂಡಿಯಾ ಕೊಂಚ ತಲೆಬಿಸಿ ಮಾಡಿಕೊಂಡಿದೆ' ಎಂದು ಅಜಿತ್ ಅಗರ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಸೂರ್ಯಕುಮಾರ್ ಯಾದವ್ ಪಿಚ್ನಲ್ಲಿ ಹೆಚ್ಚು ಹೊತ್ತು ಕಾಲ ಕಳೆಯಬೇಕಿದೆ
ಹೀಗೆ ಈ ಇಬ್ಬರೂ ಆಟಗಾರರ ಕಳಪೆ ಪ್ರದರ್ಶನ ಟೀಂ ಇಂಡಿಯಾಗೆ ಕೊಂಚ ತಲೆನೋವಾಗಿ ಪರಿಣಮಿಸಿದೆ ಎಂದು ಹೇಳಿಕೆ ನೀಡಿರುವ ಅಜಿತ್ ಅಗರ್ಕರ್ ಸೂರ್ಯಕುಮಾರ್ ಯಾದವ್ ಕುರಿತು ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. 'ಸೂರ್ಯಕುಮಾರ್ ಯಾದವ್ ವಿಶ್ವಾಸವನ್ನು ಕಳೆದುಕೊಂಡು ಬ್ಯಾಟ್ ಬೀಸುತ್ತಿದ್ದಾರೆ ಎನಿಸುತ್ತಿದೆ. ಹೀಗಾಗಿ ಸೂರ್ಯಕುಮಾರ್ ಯಾದವ್ ಇನ್ನೂ ಕೊಂಚ ಹೆಚ್ಚು ಸಮಯದ ಕಾಲ ಪಿಚ್ನಲ್ಲಿ ನಿಂತು, ಪಿಚ್ನ್ನು ಅರ್ಥ ಮಾಡಿಕೊಂಡು ಆಟವನ್ನಾಡಬೇಕಿದೆ. ಹೀಗೆ ಮಾಡುವುದರಿಂದ ಸೂರ್ಯಕುಮಾರ್ ಯಾದವ್ ಲಯ ಕಂಡುಕೊಳ್ಳಬಹುದು' ಎಂದು ಅಜಿತ್ ಅಗರ್ಕರ್ ಸಲಹೆ ನೀಡಿದ್ದಾರೆ.
ಕಳಪೆ ಫಾರ್ಮ್ನಿಂದ ಮೈದಾನದಲ್ಲಿಯೇ ಕಣ್ಣೀರಿಟ್ಟಿದ್ದ ಇಶಾನ್ ಕಿಶನ್
ಕಳೆದ ಭಾನುವಾರದಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಹೀನಾಯವಾದ ಸೋಲನ್ನು ಕಂಡಿತ್ತು. ಈ ಪಂದ್ಯದಲ್ಲಿಯೂ ಕಳಪೆ ಆಟವನ್ನಾಡಿ ಮತ್ತೊಮ್ಮೆ ವಿಫಲವಾಗಿದ್ದ ಇಶಾನ್ ಕಿಶನ್ ಕಣ್ಣೀರಿಡುತ್ತಾ ಕುಳಿತಿದ್ದರು. ಹೀಗೆ ಕಳಪೆ ಫಾರ್ಮ್ ಕುರಿತು ಚಿಂತಿಸುತ್ತಿದ್ದ ಇಶಾನ್ ಕಿಶನ್ ಬಳಿ ಬಂದ ವಿರಾಟ್ ಕೊಹ್ಲಿ ಆತನನ್ನು ಸಮಾಧಾನಪಡಿಸಿ ಧೈರ್ಯ ತುಂಬುವ ಕೆಲಸವನ್ನು ಮಾಡಿದ್ದರು.