ನವದೆಹಲಿ, ಫೆ 7: ಭಾರತೀಯ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಆಟಗಾರ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಜಿ ನಾಯಕ, ಗೌತಂ ಗಂಭೀರ್, ದೆಹಲಿಯ ಯಾವುದಾದರೂ ಒಂದು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಬಹುದು ಎನ್ನುವ ಸುದ್ದಿಯ ನಡುವೆ, ಇನ್ನೊಬ್ಬ ಸ್ಪೋಟಕ ಆರಂಭಿಕ ಆಟಗಾರ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ.
ಆಂಗ್ಲ ಮಾಧ್ಯಮವೊಂದು ವರದಿ ಮಾಡಿದ ಪ್ರಕಾರ, ವೀರೇಂದ್ರ ಸೆಹ್ವಾಗ್ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವ ಸಂಬಂಧ ಬಿಜೆಪಿಯ ಉನ್ನತ ಮಟ್ಟದಲ್ಲಿ ಮಾತುಕತೆ ನಡೆದಿದೆ. ಹರ್ಯಾಣದ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆಯ ವಿಚಾರದಲ್ಲಿ ನಡೆದ ಸಭೆಯಲ್ಲಿ ಸೆಹ್ವಾಗ್ ಹೆಸರು ಪ್ರಸ್ತಾವನೆಗೆ ಬಂದಿದೆ.
ಹರ್ಯಾಣದ ರೋಹ್ಟಕ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆಯ ವಿಚಾರ ಬಂದಾಗ, ಸೆಹ್ವಾಗ್ ಹೆಸರು ಚರ್ಚೆಗೆ ಬಂದಿದೆ. ಮೂರು ಬಾರಿಯ ಸಂಸದರಾಗಿರುವ, ಹಾಲಿ ಎಂಪಿ, ಕಾಂಗ್ರೆಸ್ಸಿನ ದೀಪೇಂದರ್ ಸಿಂಗ್ ಹೂಡಾ ಅವರನ್ನು ಸೋಲಿಸಲು, ಸೆಹ್ವಾಗ್ ಉತ್ತಮ ಅಭ್ಯರ್ಥಿಯಾಗ ಬಲ್ಲರು ಎನ್ನುವ ಒತ್ತಾಯ ಸಭೆಯಲ್ಲಿ ಕೇಳಿಬಂದಿದೆ.
ಆದರೆ, ಹರ್ಯಾಣ ಬಿಜೆಪಿ ಘಟಕದ ರಾಜ್ಯಾಧ್ಯಕ್ಷ ಸುಭಾಶ್ ಬರ್ಲಾ ಈ ವಿಚಾರವನ್ನು ಅಲ್ಲಗಳೆದಿದ್ದಾರೆ. ಸೆಹ್ವಾಗ್ ಇನ್ನೂ ಬಿಜೆಪಿಯ ಪ್ರಾಥಮಿಕ ಸದಸ್ಯತ್ವವನ್ನು ಪಡೆದುಕೊಂಡಿಲ್ಲ, ಅವರು ಹೇಗೆ ಅಭ್ಯರ್ಥಿಯಾಗಲು ಸಾಧ್ಯ ಎಂದು ಹೇಳಿದ್ದಾರೆ.
ಬಿಜೆಪಿಯ ಆಂತರಿಕ ಮೂಲಗಳ ಪ್ರಕಾರ, ಸೆಹ್ವಾಗ್ ಅವರನ್ನು ಭೇಟಿಯಾಗಿ, ಅವರ ಮನವೊಲಿಸುವ ಕೆಲಸವನ್ನು ಹರ್ಯಾಣದ ಹಿರಿಯ ಮುಖಂಡರೊಬ್ಬರಿಗೆ ವಹಿಸಲಾಗಿದೆ. ರೋಹ್ಟಕ್ ನಿಂದ ಸೆಹ್ವಾಗ್ ಅವರೇ ನಮ್ಮ ಅಭ್ಯರ್ಥಿ, ಇನ್ನು ಅವರೇ ಈ ವಿಚಾರದಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆಂದು ಆಂಗ್ಲ ಮಾಧ್ಯಮ ವರದಿ ಮಾಡಿದೆ.
2014ರ ಲೋಕಸಭಾ ಚುನಾವಣೆಯಲ್ಲಿ, ಹರ್ಯಾಣದ ಹತ್ತು ಕ್ಷೇತ್ರಗಳ ಪೈಕಿ, ಬಿಜೆಪಿ ಏಳರಲ್ಲಿ ಗೆದ್ದಿತ್ತು. ಇನ್ನೆರಡು ಕ್ಷೇತ್ರವನ್ನು ಐಎನ್ ಎಲ್ಡಿ ಮತ್ತು ಕಾಂಗ್ರೆಸ್ ಗೆದ್ದಿದ್ದ ಒಂದೇ ಕ್ಷೇತ್ರ, ಅದು ರೋಹ್ಟಕ್.