ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಭಾರತ ತಂಡವನ್ನು ಪ್ರಿಯಮ್ ಗಾರ್ಗ್ ಮುನ್ನಡೆಸಲಿದ್ದಾರೆ. ಭಾರತ ಸಿ ತಂಡದ ಸದಸ್ಯನಾಗಿದ್ದ ಪ್ರಿಯಮ್ ಮೇಲೆ ಮಹತ್ವದ ಜವಾಬ್ಧಾರಿಯನ್ನು ಹೊರಿಸಲಾಗಿದೆ.
ನಾಯಕನ ಸ್ಥಾನಕ್ಕೇರಿದ ಪ್ರಿಯಮ್ ಗಾರ್ಗ್ ಹಾದಿ ಬಹಳ ಕಠಿಣವಾಗಿತ್ತು. ತಾನು ನಡೆದು ಬಂದ ಹಾದಿ ಹೇಗಿತ್ತು ಅನ್ನೋದನ್ನು ಸ್ವತಃ ಗಾರ್ಗ್ ಹೇಳಿಕೊಂಡಿದ್ದಾರೆ. ತನ್ನ ತಂದೆ ಕುಟುಂಬವನ್ನು ಪೊರೆಯಲು ಹಾಲು ಮಾರಿ ಹಣ ಸಂಪಾದಿಸುತ್ತಿದ್ದರು. ಅದರಿಂದ ಬಂದ ಹಣದಲ್ಲಿ ನಿತ್ಯವೂ 10ರೂಪಾಯಿಯನ್ನು ಕ್ರಿಕೆಟ್ಗಾಗಿ ಮೀರತ್ ಗೆ ಪ್ರಯಾಣಿಸುವ ನಿಟ್ಟಿನಲ್ಲಿ ನೀಡುತ್ತಿದ್ದರು ಎಂದು ಹೇಳಿದ್ದಾರೆ.
ಅಂಡರ್-19 ವಿಶ್ವಕಪ್ 2020: 15 ಜನರ ತಂಡದಲ್ಲಿ ಕರ್ನಾಟಕದ ಇಬ್ಬರು ಆಯ್ಕೆ
ಹಣಕಾಸಿಗೆ ಬಹಳ ಕಷ್ಟದ ದಿನಗಳು ಅದಾಗಿತ್ತು. ಹಣಕಾಸಿನ ಕೊರತೆಯಿದ್ದಿದ್ದರಿಂದ ಬಸ್ನ ಮೇಲ್ಛಾವಣಿ ಮೂಲಕ ಪ್ರಯಾಣಿಸುವ ಸಂದರ್ಭವಿತ್ತು. ಕನಸನ್ನು ಬೆನ್ನಟ್ಟುವ ದೃಷ್ಟಿಯಿಂದ ಈ ರೀತಿಯ ಸಾಹಸಗಳು ಅನಿವಾರ್ಯವಾಗಿತ್ತು ಎಂದಿದ್ದಾರೆ.
ತನ್ನ ತಂದೆ ಜೀವನ ನಿರ್ವಹಣೆಗಾಗಿ ಏನೆಲ್ಲಾ ಸಾಧ್ಯವಿತ್ತೋ ಅದೆಲ್ಲವನ್ನೂ ಮಾಡಿದರು. ಹಾಲು ಮಾರಾಟ, ವಾಹನ ಚಾಲನೆ, ಗೂಡ್ಸ್ ಸಾಮಾನುಗಳನ್ನು ಹೊತ್ತು ಕುಟುಂಬವನ್ನು ಸಾಕಿದ್ದಲ್ಲದೆ ತನ್ನ ಕ್ರಿಕೆಟ್ ಜೀವನಕ್ಕೂ ದಾರಿ ತೋರಿಸಿದರು ಎಂದು ಹೇಳಿಕೊಂಡಿದ್ದಾರೆ. ಹನ್ನೊಂದನೇ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡ ಗಾರ್ಗ್ ಬಳಿಕ ತಂದೆ ಹಾಗೂ ಸೋದರಿಯರ ಆಸರೆಯಲ್ಲೆ ಬೆಳೆದಿದ್ದಾರೆ.
ಐಪಿಎಲ್ ಮೂಲಕ ಟೀಮ್ ಇಂಡಿಯಾ ಪ್ರವೇಶಿಸಿದ 5 ಆಟಗಾರರು ಇವರೆ!
ಸಂಜಯ್ ರಸ್ತೋಗಿ ಅಕಾಡೆಮಿಯಲ್ಲಿ ತರಬೇತಿ ಪಡೆದ ಪ್ರಿಯಮ್ ಗಾರ್ಗ್ ಬಳಿಕ ಉತ್ತರ ಪ್ರದೇಶ ಅಂಡರ್-14 ತಂಡಕ್ಕೆ ಆಯ್ಕೆಯಾದರು. ಬಳಿಕ ಅಂಡರ್-16 ತಂಡದಲ್ಲೂ ಪ್ರಿಯಮ್ ಗಾರ್ಗ್ ಸ್ಥಾನವನ್ನು ಪಡೆದುಕೊಂಡರು. ಇದೀಗ ಅಂಡರ್-19 ರಂಡದ ನಾಯಕರಾಗಿದ್ದಾರೆ. ತನಗೆ ದೊರಕಿರುವ ಈ ಅವಕಾಶ ತನ್ನ ತಂದೆಯ ಟೀಮ್ ಇಂಡಿಯಾವನ್ನು ಪ್ರತಿನಿಧಿಸುವ ಕನಸಿಗೆ ನಾಂದಿಯಾಗಲಿದೆ ಎಂಬ ಭರವಸೆಯನ್ನು ಹೊಂದಿದ್ದಾರೆ. ಪ್ರಿಯಮ್ ಗಾರ್ಗ್ ಈ ಕನಸು ಸಾಕಾರಗೊಳ್ಳುವುದು ಮಾತ್ರವಲ್ಲ ಇದೇ ರೀತಿಯ ಇನ್ನಷ್ಟು ಪ್ರತಿಭೆಗಳಿಗೆ ಸ್ಪೂರ್ತಿಯಾಗಲಿ.