ನವದೆಹಲಿ, ಸೆ. 30: ಬಿಜೆಪಿ ಸಂಸದ, ಟೀಂ ಇಂಡಿಯಾದ ಮಾಜಿ ನಾಯಕ ಗಂಭೀರ್ ವಿರುದ್ಧ ದಾಖಲಾಗಿದ್ದ ಹಳೆ ವಂಚನೆ ಪ್ರಕರಣಕ್ಕೆ ಮತ್ತೆ ಜೀವ ಬಂದಿದೆ. ಸಿಟಿ ಕೋರ್ಟಿಗೆ ದೆಹಲಿ ಪೊಲೀಸರು ಹೆಚ್ಚುವರಿ ದೋಷರೋಪಣ ಪಟ್ಟಿ ಸಲ್ಲಿಸಿದ್ದಾರೆ. ಫ್ಲಾಟ್ ಖರೀದಿಗೆ ಸಂಬಂಧಿಸಿದಂತೆ ಗಂಭೀರ್ ವಿರುದ್ಧ ದೂರು ನೀಡಲಾಗಿತ್ತು.
ಗಾಜಿಯಾಬಾದಿನ ಇಂದಿರಾಪುರಂನಲ್ಲಿ 2011ರಲ್ಲಿ ಫ್ಲಾಟ್ ಖರೀದಿಗಾಗಿ ಅನೇಕ ಮಂದಿ ಹಣ ನೀಡಿದ್ದರು. ಆದರೆ, ಆ ಯೋಜನೆಯನ್ನು ರಿಯಲ್ ಎಸ್ಟೇಟ್ ಕಂಪನಿ ಸ್ಥಗಿತಗೊಳಿಸಿತ್ತು. ಅದೇ ಕಂಪನಿಗೆ ಬ್ರಾಂಡ್ ಅಂಬಾಸಿದರ್ ಹಾಗೂ ನಿರ್ದೇಶಕರಾಗಿ ಗೌತಮ್ ಗಂಭೀರ್ ಕಾರ್ಯ ನಿರ್ವಹಿಸಿದ್ದರು.
ರುದ್ರ ಬಿಲ್ಡ್ ವೆಲ್ ರಿಯಾಲ್ಟಿ ಪ್ರೈ ಲಿಮಿಟೆಡ್ ಹಾಗೂ ಎಚ್ ಆರ್ ಇನ್ಫ್ರಾ ಸಿಟಿ ಪ್ರೈ ಲಿಮಿಟೆಡ್ ಸಹಯೋಗದೊಂದಿಗೆ ನಿರ್ಮಾಣವಾಗಬೇಕಿದ್ದ ವಸತಿ ಸಮುಚ್ಚಯ ಯೋಜನೆ ಸ್ಥಗಿತಗೊಂಡಿತ್ತು. ಈ ಕುರಿತಂತೆ 2016ರಲ್ಲಿ ರಿಯಲ್ ಎಸ್ಟೇಟ್ ಕಂಪನಿ ವಿರುದ್ಧ ವಂಚನೆ ಪ್ರಕರಣ ದಾಖಲಾಗಿತ್ತು.
"ಕೋಟ್ಯಂತರ ರುಪಾಯಿ ಗುಳಂ ಮಾಡಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. 2014ರಲ್ಲೇ ಪ್ರಕರಣ ದಾಖಲಾಗಿ ಬಿಲ್ಡರ್ ಖರೀದಿದಾರರ ಡೀಡ್ ಪ್ರಕಾರ ಸಂತ್ರಸ್ತರ ದೂರನ್ನು ಪರಿಶೀಲಿಸಲಾಗಿದೆ. ಕಟ್ಟಡ ನಿರ್ಮಾಣ ಯೋಜನೆ ಜೂನ್ 06, 2013ರಂದೇ ರದ್ದಾಗಿದೆ. ಆದರೆ ಮನೆ ಖರೀದಿದಾರರಿಂದ ಡೆವಲಪರ್ಸ್ ಅವಧಿ ಮುಗಿದರೂ ಹಣ ಪಡೆದುಕೊಂಡಿರುವುದು ಕಂಡು ಬಂದಿದೆ" ಎಂದು ಚಾರ್ಜ್ ಶೀಟ್ ನಲ್ಲಿ ಹೇಳಲಾಗಿದೆ.
ಗೌತಮ್ ಗಂಭೀರ್ ಅಲ್ಲದೆ, ಮುಕೇಶ್ ಖುರಾನಾ, ಗೌತಮ್ ಮೆಹ್ರಾ ಹಾಗೂ ಬಬಿತಾ ಖುರಾನಾ ಎಂಬುವವರನ್ನು ಆರೋಪಿಗಳು ಎಂದು ಹೆಸರಿಸಲಾಗಿದ್ದು, ಗಂಭೀರ್ ಅವರನ್ನು ರಾಯಭಾರಿಯನ್ನಾಗಿಸಿಕೊಂಡು ಹೆಚ್ಚೆಚ್ಚು ಖರೀದಿದಾರರನ್ನು ಈ ಸಂಸ್ಥೆ ಆಕರ್ಷಿಸಿದೆ ಎಂದು ದೋಷರೋಪಣ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.