ಕೊರೊನಾವೈರಸ್ ಎರಡನೇ ಅಲೆಯಿಂದ ಇಡೀ ದೇಶವೇ ಅಕ್ಷರಶಃ ನಲುಗಿಹೋಗಿದೆ. ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಏರುತ್ತಲೇ ಇದ್ದು ಎಲ್ಲೆಡೆ ಬೆಡ್ ಮತ್ತು ಆಮ್ಲಜನಕದ ಕೊರತೆ ಉಂಟಾಗುತ್ತಿದೆ. ಇತ್ತೀಚೆಗಷ್ಟೇ ಐಪಿಎಲ್ ಬಯೋ ಬಬಲ್ಗೂ ಕೊರೊನಾವೈರಸ್ ಪ್ರವೇಶಿಸಿ ವಿವಿಧ ತಂಡಗಳ ಕೆಲ ಆಟಗಾರರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಪ್ರಸ್ತುತ ಐಪಿಎಲ್ ಟೂರ್ನಿಯನ್ನು ಮುಂದೂಡಲಾಗಿದೆ.
ದೇಶದಲ್ಲಿನ ಕೊರೊನಾವೈರಸ್ ತೀವ್ರತೆಯನ್ನು ಮನಗಂಡ ಕೆಲ ಆಟಗಾರರು ಮತ್ತು ಫ್ರಾಂಚೈಸಿಗಳು ಕೊರೊನಾ ವಿರುದ್ಧದ ಹೋರಾಟಕ್ಕೆ ಆರ್ಥಿಕ ನೆರವನ್ನು ನೀಡಿದ್ದಾರೆ. ವಿರಾಟ್ ಕೊಹ್ಲಿ, ರಿಷಭ್ ಪಂತ್, ಪ್ಯಾಟ್ ಕಮಿನ್ಸ್, ಶಿಖರ್ ಧವನ್, ಯುಜ್ವೇಂದ್ರ ಚಹಾಲ್, ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊರೊನಾ ವಿರುದ್ಧದ ಹೋರಾಟಕ್ಕೆ ಈಗಾಗಲೇ ಆರ್ಥಿಕ ನೆರವನ್ನು ನೀಡಿದ್ದಾರೆ. ಇದೀಗ ಈ ಸಾಲಿಗೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸ್ ಕೂಡ ಸೇರಿಕೊಂಡಿದೆ.
ತಮ್ಮ ತಂಡವನ್ನು ಸದಾ ಬೆಂಬಲಿಸುವ ಹಾಗೂ ಪ್ರೀತಿಸುವ ತಮಿಳುನಾಡಿನ ಜನತೆಯ ಜೊತೆ ಅವಿನಾಭಾವ ಸಂಬಂಧವನ್ನು ಹೊಂದಿರುವ ಚೆನ್ನೈ ಸೂಪರ್ ಕಿಂಗ್ಸ್ ಇದೀಗ ಕೊರೊನಾವೈರಸ್ ವಿರುದ್ಧದ ತಮಿಳುನಾಡಿನ ಹೋರಾಟಕ್ಕೆ ತನ್ನ ಬೆಂಬಲವನ್ನು ವ್ಯಕ್ತಪಡಿಸಿದೆ. ಶನಿವಾರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಿರ್ದೇಶಕ ಎನ್ ಶ್ರೀನಿವಾಸನ್ ತಮಿಳುನಾಡಿನ ಮುಖ್ಯಮಂತ್ರಿಗಳಾದ ಎಂಕೆ ಸ್ಟಾಲಿನ್ ಅವರನ್ನು ಭೇಟಿಯಾಗಿ 450 ಆಮ್ಲಜನಕ ಸಾಂದ್ರಕಗಳನ್ನು ತಮಿಳುನಾಡು ಸರ್ಕಾರಕ್ಕೆ ದೇಣಿಗೆಯಾಗಿ ನೀಡಿದ್ದಾರೆ. ಈ ಮೂಲಕ ಆಮ್ಲಜನಕದ ಕೊರತೆಯನ್ನು ಎದುರಿಸುತ್ತಿದ್ದ ತಮಿಳುನಾಡಿಗೆ ಸಹಾಯವನ್ನು ಮಾಡಿದೆ ಚೆನ್ನೈ ಸೂಪರ್ ಕಿಂಗ್ಸ್.