ನವದೆಹಲಿ, ಅಕ್ಟೋಬರ್ 26: ಲೈಂಗಿಕ ಕಿರುಕುಳ ಆರೋಪದಲ್ಲಿ ಸಿಲುಕಿರುವ ಬಿಸಿಸಿಐನ ಮುಖ್ಯ ಕಾರ್ಯನಿರ್ವಾಹಕ ರಾಹುಲ್ ಜೊಹ್ರಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಸೇರಿದಂತೆ ಏಳು ಸಂಸ್ಥೆಗಳು ಸುಪ್ರೀಂಕೋರ್ಟ್ನಿಂದ ನೇಮಕವಾದ ಆಡಳಿತ ಸಮಿತಿಗೆ (ಸಿಒಎ) ಪತ್ರ ಬರೆದಿವೆ.
ಬಿಸಿಸಿಐ ಸಿಇಒ ರಾಹುಲ್ ಜೋಹ್ರಿಗೂ ತಟ್ಟಿದ '#ಮೀಟೂ' ಅಭಿಯಾನದ ಬಿಸಿ
ಜೊಹ್ರಿ ಅವರನ್ನು ತಮ್ಮ ಸಂಸ್ಥೆಯ ಆವರಣದೊಳಗೆ ಬಿಟ್ಟುಕೊಡುವುದಿಲ್ಲ ಎಂದು ಈ ಸಂಸ್ಥೆಗಳು ಸಿಒಎಗೆ ತಿಳಿಸಿವೆ.
ಪತ್ರ ರವಾನಿಸಿದ ಕೆಲವೇ ಗಂಟೆಗಳಲ್ಲಿ ಜೊಹ್ರಿ ವಿರುದ್ಧದ ಆರೋಪದ ವಿರುದ್ಧ ಸ್ವತಂತ್ರ ಸಮಿತಿಯೊಂದು ತನಿಖೆ ನಡೆಸಲಿದೆ ಎಂದು ಸಿಒಎ ಪ್ರಕಟಿಸಿದೆ.
ಎರಡು ವಾರಗಳ ಹಿಂದೆ ಅನಾಮಿಕ ಮಹಿಳೆಯೊಬ್ಬರಿಂದ ರಾಹುಲ್ ಜೊಹ್ರಿ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿದೆ. ಕರ್ನಾಟಕ, ತಮಿಳುನಾಡು, ಹರಿಯಾಣ, ಗುಜರಾತ್, ಸೌರಾಷ್ಟ್ರ, ಮಧ್ಯಪ್ರದೇಶ ಮತ್ತು ಗೋವಾ ರಾಜ್ಯಗಳ ಕ್ರಿಕೆಟ್ ಸಂಸ್ಥೆಗಳು ಸಿಒಎಗೆ ಪ್ರತ್ಯೇಕ ಪತ್ರಗಳನ್ನು ಬರೆದಿದ್ದವು.
ಈ ವಿಚಾರವನ್ನು ನಿರ್ವಹಿಸುವ ವಿಚಾರದಲ್ಲಿ ಪಾರದರ್ಶಕತೆಯ ಕೊರತೆ ಇದೆ. ಅಲ್ಲದೆ, ಬಿಸಿಸಿಐ ಅಧಿಕಾರಿಗಳಿಂದ ಸಂವಹನ ನಡೆದಿಲ್ಲ ಎಂದು ಸಿಒಎ ಈ ವಿವಾದವನ್ನು ನಿಭಾಯಿಸುತ್ತಿರುವ ಕ್ರಮದ ಬಗ್ಗೆ ಕಳವಳ ವ್ಯಕ್ತಪಡಿಸಿವೆ.
ಆದರೆ, ಸಮಿತಿ ರಚನೆ ವಿಚಾರದಲ್ಲಿ ಸಿಒಎದಲ್ಲಿಯೇ ಭಿನ್ನಾಭಿಪ್ರಾಯ ಉಂಟಾಗಿದೆ. ಸಿಒಎ ಅಧ್ಯಕ್ಷ ವಿನೋದ್ ರಾಯ್ ಮೂವರು ಸದಸ್ಯರ ಸ್ವತಂತ್ರ ಸಮಿತಿಯು ಈ ಆರೋಪಗಳ ಕುರಿತು ತನಿಖೆ ನಡೆಸಲಿದೆ ಎಂದು ಪ್ರಕಟಿಸಿದ್ದರು.
ಮೀಟೂ ಅಭಿಯಾನ: ಲಸಿತ್ ಮಾಲಿಂಗ ವಿರುದ್ಧ ಲೈಂಗಿಕ ಕಿರುಕುಳ ಆರೋಪ
ಸಿಒಎದ ಸದಸ್ಯೆ, ಮಾಜಿ ಆಟಗಾರ್ತಿ ಡಯಾನಾ ಎಡುಲ್ಜಿ, ಜೊಹ್ರಿ ಅವರ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ. ಲೈಂಗಿಕ ದೌರ್ಜನ್ಯದಂತಹ ಗಂಭೀರ ಆರೋಪ ಇರುವಾಗ ಅವರು ರಾಜೀನಾಮೆ ನೀಡಬೇಕು ಇಲ್ಲವೇ, ಅವರ ಒಪ್ಪಂದವನ್ನು ರದ್ದುಗೊಳಿಸಬೇಕು. ಅವರು ಬಿಸಿಸಿಐಅನ್ನು ಪ್ರತಿನಿಧಿಸುತ್ತಿರುವುದರಿಂದ ಬಿಸಿಸಿಐ ಮತ್ತು ಭಾರತೀಯ ಕ್ರಿಕೆಟ್ನ ಹಿತಾಸಕ್ತಿಗೆ ಒಳಿತಲ್ಲ ಎಂದು ಎಡುಲ್ಜಿ ಹೇಳಿದ್ದಾರೆ.
ಟ್ವೀಟ್ ಅನಾಮಿಕವಾಗಿರುವುದರಿಂದ ಆರೋಪ ಇದ್ದರೂ ಸಮಿತಿಯ ತನಿಖೆ ವೇಳೆ ಜೊಹ್ರಿ ಸಿಇಒ ಹುದ್ದೆಯಲ್ಲಿ ಮುಂದುವರಿಯುವುದರಲ್ಲಿ ತಪ್ಪಿಲ್ಲ ಎಂದು ವಿನೋದ್ ರಾಯ್ ವಾದಿಸಿದ್ದಾರೆ.