ಮಿಥಾಲಿ, ಕೌರ್ ಭೇಟಿಯಾಗಲಿರುವ ಸಿಒಎ
ಪ್ರಮುಖ ಪಂದ್ಯದಲ್ಲಿ ಭಾರತದ ಉತ್ತಮ ಆಟಗಾರ್ತಿ ಮಿಥಾಲಿಯನ್ನು ಹೊರಗಿಟ್ಟಿದ್ದ ವಿವಾದಕ್ಕೆ ಸಂಬಂಧಿಸಿ ಬಿಸಿಸಿಐಯ ಕಮಿಟಿ ಆಫ್ ಅಡ್ಮಿನಿಸ್ಟ್ರೇಟರ್ಸ್ (ಸಿಒಎ) ನಾಯಕಿ ಹರ್ಮನ್ಪ್ರೀತ್ ಕೌರ್ ಮತ್ತು ಮಿಥಾಲಿ ರಾಜ್ ಅವರನ್ನು ಭೇಟಿ ಮಾಡಿ ಚರ್ಚಿಸಲಿದೆ.
ಸಮರ್ಥಿಸಿಕೊಂಡಿದ್ದ ಕೌರ್
ಪಂದ್ಯಕ್ಕೂ ಮುನ್ನ ಪ್ರಕಟಿಸಲಾದ ತಂಡದಲ್ಲಿ ಆಡುವ 11 ಮಂದಿಯಲ್ಲಿ ಮಿಥಾಲಿ ರಾಜ್ ಹೆಸರಿಲ್ಲದ್ದನ್ನು ಗಮನಿಸಿದ ಕ್ರಿಕೆಟ್ ಅಭಿಮಾನಿಗಳಿಗೆ ಆಘಾತವೂ ಅಚ್ಚರಿಯೂ ಆಗಿತ್ತು. ಆದರೆ ನಾಯಕಿ ಕೌರ್ ಮಾಧ್ಯಮಗಳೊಂದಿಗೆ ಮಾತನಾಡಿ, 'ನಾವು ಸಾಕಷ್ಟು ತರಬೇತಿ ನಡೆಸಿದ್ದೇವೆ. (ಮಿಥಾಲಿಯನ್ನು ಹೊರಗಿಟ್ಟಿರುವ) ನಮ್ಮದೀಗ ಗೆಲ್ಲುವ ತಂಡವಾಗಿದೆ. ನಾವು ಗೆಲ್ಲುತ್ತೇವೆ' ಎಂದು ಹೇಳಿಕೊಂಡಿದ್ದರು. ಸೆಮಿಫೈನಲ್ಗೂ ಮೊದಲು ಪಾಕ್ ವಿರುದ್ಧದ ಪಂದ್ಯದ ವೇಳೆ ಅಸ್ವಸ್ಥ ಪುಟಾಣಿಯನ್ನು ಎತ್ತಿ ಮೈದಾನದಿಂದ ಹೊರಗೆ ತಂದು ಅಭಿಮಾನಿಗಳ ಪ್ರೀತಿ ಗಿಟ್ಟಿಸಿದ್ದ ಕೌರ್ ಸೆಮಿಫೈನಲ್ ಬಳಿಕ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದ್ದಾರೆ.
ಶೀಘ್ರವೇ ಸಭೆ
ಹರ್ಮನ್ಪ್ರೀತ್, ಮಿಥಾಲಿ, ರಮೇಶ್ ಪೊವಾರ್ (ಕೋಚ್), ತಂಡದ ಮ್ಯಾನೇಜರ್ ತೃಪ್ತಿ ಭಟ್ಟಾಚಾರ್ಯ, ಪ್ರವಾಸ ತಂಡದ ಆಯ್ಕೆಗಾರ್ತಿ ಸುಧಾ ಶಾ ಇವರನ್ನೆಲ್ಲಾ ಸಭೆ ಕರೆದು ಮಿಥಾಲಿಯನ್ನು ಹೊರಗಿಟ್ಟಿದ್ದಕ್ಕೆ ಕಾರಣವನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಹೀಗಾಗಿ ಶೀಘ್ರ ಸಭೆ ಕರೆಯಲಿದ್ದೇವೆ' ಎಂದು ಬಿಸಿಸಿಐ ಮೂಲ ಹೇಳಿದೆ.
ಏನೋ ಏರುಪೇರಾಗಿದೆ
ತಂಡದ ಆಟಗಾರ್ತಿಯರ ಬಗ್ಗೆ ಸಿಒಎ ಮುಖ್ಯಸ್ಥ ವಿನೋದ್ ರೈ ಕೂಡ ಅಸಮಾಧಾನಗೊಂಡಿದ್ದಾರೆ. ರೈ ಮಾತನಾಡಿ, 'ಭಾರತದ ಮಹಿಳಾ ತಂಡದಲ್ಲಿ ಏನೋ ಏರುಪೇರಾಗಿದೆ. ಅದನ್ನು ಪರಿಶೀಲಿಸಬೇಕಿದೆ ಎಂಬಂತ ಅಭಿಪ್ರಾಯಗಳು ಕೇಳಿಬರುತ್ತಿವೆ' ಎಂದಿದ್ದಾರೆ.