ನವದೆಹಲಿ, ಸೆ. 29: ಕ್ರಿಕೆಟ್ ಜಗತ್ತಿನ ದೇವರು, ಸಂಸದ ಸಚಿನ್ ತೆಂಡೂಲ್ಕರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಓಗೊಟ್ಟು 'ಸ್ವಚ್ಛ ಭಾರತ ಯೋಜನೆ'ಗೆ ದನಿಯಾಗಿದ್ದಾರೆ. ಈ ಮಹತ್ವದ ಯೋಜನೆಯ ಆಶಯ ಗೀತೆಗೆ ಸಚಿನ್ ಅವರು ದನಿ ನೀಡಿದ್ದಾರೆ.
ಖ್ಯಾತ ಸಂಗೀತಗಾರರಾದ ಶಂಕರ್-ಎಹಸಾನ್-ಲಾಯ್ ಅವರ ರಾಗ ಸಂಯೋಜನೆ, ಪ್ರಸೂನ್ ಜೋಶಿ ಅವರ ಸಾಹಿತ್ಯವಿರುವ ಸ್ವಚ್ಛ ಭಾರತ ಯೋಜನೆಯ ಆಶಯ ಗೀತೆಯ ಕೆಲ ಸಾಲುಗಳನ್ನು ಕ್ರಿಕೆಟ್ ದಿಗ್ಗಜ ಸಚಿನ್ ಅವರು ಹಾಡಿದ್ದಾರೆ.
ಮಹಾತ್ಮಾ ಗಾಂಧೀಜಿ ಅವರ ಹುಟ್ಟುಹಬ್ಬ(ಅಕ್ಟೋಬರ್ 2) ದ ದಿನದಂದು ಈ ಹಾಡು ಸಾರ್ವಜನಿಕರ ಕಿವಿಗೆ ತಲುಪಲಿದೆ. ಸಾರ್ವಜನಿಕವಾಗಿ ಜನಜಾಗೃತಿ ಮೂಡಿಸಲು ಈ ಗೀತೆಯನ್ನು ನರೇಂದ್ರ ಮೋದಿ ಸರ್ಕಾರ ಬಳಸಲಿದೆ.
ಮೋದಿ ಅವರ ಕರೆಗೆ ಓಗೊಟ್ಟು ಸಚಿನ್ ಅವರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಈ ಬಗ್ಗೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿ ಸಚಿನ್ ರನ್ನು ಹಾಡಿ ಹೊಗಳಿದ್ದನ್ನು ಇಲ್ಲಿ ಸ್ಮರಿಸಬಹುದು. ಇದರ ಜೊತೆಗೆ ಸಂಸದರ ಆದರ್ಶ್ ಗ್ರಾಮ ಯೋಜನೆ ಅಡಿಯಲ್ಲಿ ಒಂದು ಗ್ರಾಮವನ್ನು ದತ್ತು ತೆಗೆದುಕೊಳ್ಳುವಂತೆ ಸಂಸದ ಸಚಿನ್ ಅವರಿಗೆ ಮೋದಿ ಅವರು ಕೇಳಿಕೊಂಡಿದ್ದರು. [ವಿವರ ಇಲ್ಲಿ ಓದಿ]
ಅದರಂತೆ, ಆಂಧ್ರಪ್ರದೇಶದ ಕುಗ್ರಾಮವೊಂದನ್ನು ಸಚಿನ್ ಅವರು ದತ್ತು ಪಡೆದುಕೊಂಡು ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಸ್ವಚ್ಛತಾ ಅಭಿಯಾನದ ಜೊತೆಗೆ ಮೋದಿ ಅವರು ಗ್ರಾಮಗಳ ಆರೋಗ್ಯ ಕೇಂದ್ರಗಳ ಅಭಿವೃದ್ಧಿಗೂ ಒತ್ತು ನೀಡಿದರೆ ಒಳ್ಳೆಯದು ಎಂದು ಸಚಿನ್ ಹೇಳಿದ್ದರು.