ಬೆಂಗಳೂರು, ಆ.21: ಇಂಗ್ಲೆಂಡಿನಲ್ಲಿ ಟೆಸ್ಟ್ ಸರಣಿ ಸೋತ ಎಂಎಸ್ ಧೋನಿ ನಾಯಕತ್ವದ ತಂಡ 'ಕಟುಕರ ಮುಂದೆ ನಿಂತ ಕುರಿಗಳು' ಕರೆಸಿಕೊಂಡಿದ್ದು ಗೊತ್ತೇ ಇದೆ. ಈಗ ಟೀಂ ಇಂಡಿಯಾ ಕಳಪೆ ಸಾಧನೆಗೆ ಬಿಸಿಸಿಐನ ಕೆಟ್ಟ ನಿರ್ಧಾರಗಳು, ಆಟಗಾರರ ಹೆಣ್ಣಿನ ಮೋಹ ಕಾರಣ ಎಂಬ ವಿಷಯ ಬಿದ್ದಿದೆ.
ತಮ್ಮ ಪತ್ನಿ ಅಥವಾ ಗೆಳತಿಯರ ಜತೆ ಇರಲು ಧೋನಿ ಹುಡುಗರು ಬಯಸಿದ್ದರು. ಇದಕ್ಕೆ ಬಿಸಿಸಿಐ ಓಕೆ ಎಂದಿತ್ತು. ಅದರೆ, ತಂಡದ ಪ್ರಮುಖ ಆಟಗಾರ ವಿರಾಟ್ ಕೊಹ್ಲಿ ಸೇರಿದಂತೆ ಕೆಲ ಆಟಗಾರರು ಕ್ರಿಕೆಟ್ ಗಿಂತ ತಮ್ಮ ಪತ್ನಿ ಹಾಗೂ ಗೆಳತಿಯರ ಜೊತೆ ಸುತ್ತಾಟದಲ್ಲೆ ಹೆಚ್ಚು ಸ್ಕೋರ್ ಮಾಡಿದರು ಎಂದು ದಿನಪತ್ರಿಕೆಗಳು ಬಣ್ಣಿಸಿವೆ.
ಅಭಿನವ ಸಚಿನ್ ತೆಂಡೂಲ್ಕರ್ ಎಂದು ಕರೆಸಿಕೊಂಡಿದ್ದ ವಿರಾಟ್ ಕೊಹ್ಲಿ ಇಂಗ್ಲೆಂಡ್ ನಲ್ಲಿ ಸಪ್ಪೆ ಪ್ರದರ್ಶನ ನೀಡಿದ್ದು ತಂಡಕ್ಕೆ ನುಂಗಲಾರದ ತುತ್ತಾಯಿತು. 5 ಟೆಸ್ಟ್ ಪಂದ್ಯಗಳ 10 ಇನ್ನಿಂಗ್ಸ್ ಗಳಲ್ಲಿ ವಿರಾಟ್ ಕೊಹ್ಲಿ ಗಳಿಸಿದ್ದು ಕೇವಲ 134 ರನ್. ಇಂಗ್ಲೆಂಡಿನ ವೇಗಿ ಆಂಡರ್ಸನ್ ಬ್ಯಾಟಿಂಗ್ ನಲ್ಲಿ ಗಳಿಸಿದ ರನ್ ಗಿಂತ ಸ್ವಲ್ಪ ಹೆಚ್ಚು ಎನ್ನಬಹುದು.[ಧೋನಿ ಹುಡ್ಗರು 'ಕಟುಕನ ಮುಂದೆ ಕುರಿಯಂತೆ']
ವಿದೇಶಿ ಪ್ರವಾಸದ ವೇಳೆ ಆಟಗಾರರ ಪತ್ನಿಯರಿಗೆ ಅವರ ಜೊತೆ ಉಳಿಯಲು ಅವಕಾಶ ನೀಡಲಾಗುತ್ತೆ. ಆದರೆ, ವಿರಾಟ್ ಕೊಹ್ಲಿ ಜೊತೆ ಉಳಿದುಕೊಳ್ಳಲು ಅನುಷ್ಕಾ ಶರ್ಮಾಗೆ ಅವಕಾಶ ನೀಡಲಾಗಿತ್ತು ಎಂದು ತಂಡದ ಮ್ಯಾನೇಜರ್ ಒಪ್ಪಿಕೊಂಡಿದ್ದಾರೆ.
ಹೀಗಾಗಿ ಆಟದ ಕಡೆ ಹೆಚ್ಚು ಗಮನ ಹರಿಸದ ಕೊಹ್ಲಿ ಅನುಷ್ಕಾ ಗುಂಗಲ್ಲೇ ಇಂಗ್ಲೆಂಡ್ ಪ್ರವಾಸ ಕಳೆದು, ತಡರಾತ್ರಿವರೆಗೂ ಸುತ್ತಾಟ, ಮೋಜು ಮಸ್ತಿಯಲ್ಲಿ ತೊಡಗಿ ಶಕ್ತಿ ವ್ಯಯ ಮಾಡಿಕೊಂಡ ಕೊಹ್ಲಿಗೆ ಪಂದ್ಯದ ದಿನ ಬೆಳಗ್ಗೆ ಮೈದಾನದಲ್ಲಿ ಏಕಾಗ್ರತೆಯಿಂದ ಚೆಂಡು ಎದುರಿಸಲು ಸಾಧ್ಯವಾಗುತ್ತಿರಲಿಲ್ಲ ಎಂಬ ಮಾತು ಕೇಳಿ ಬಂದಿದೆ.
ಇದೇ ವಿಷಯವನ್ನು ಕಟು ಶಬ್ದಗಳಿಂದ ಇಂಡಿಯನ್ ಎಕ್ಸ್ ಪ್ರೆಸ್ ಟೀಕಿಸಿದೆ. ಕೆಲ ಆಟಗಾರರು ಜಿಮ್ ಹಾಗೂ ನೆಟ್ ಅಭ್ಯಾಸಕ್ಕೆ ಹೋಗಲು ಮುಂದಾಗುತ್ತಿದ್ದಂತೆ ಎದುರಿಗೆ ಪತ್ನಿ ಅಥವಾ ಗೆಳತಿ ನಿಂತಿರುತ್ತಿದ್ದರು. ಇದರಿಂದ ಅವರ ಮನಸ್ಸು ವಿಚಲಿತವಾಗುತ್ತಿತ್ತು. ನೆಟ್ ಅಭ್ಯಾಸಕ್ಕಿಂತ ಶಾಪಿಂಗ್ ನಲ್ಲೆ ಹೆಚ್ಚು ಕಾಲ ತೊಡಗಿದ್ದ ಆಟಗಾರರ ಬಗ್ಗೆ ಮಾಹಿತಿ ಇದೆ ಎಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ, ಇಂಗ್ಲೆಂಡ್ ಪ್ರವಾಸದ ನಂತರ ಆಟಗಾರರು ತಮ್ಮ ಕುಟುಂಬಸ್ಥರ ಜೊತೆ ಕಾಲಕಳೆಯುವ ಕ್ಷಣಗಳನ್ನು ಲೆಕ್ಕ ಇಡಲಾಗುವುದು, ಆಟವೇ ಮುಖ್ಯ, ಆಟವಾಡಲು ಮನಸ್ಸಿಲ್ಲದಿದ್ದರೆ ವಿಶ್ರಾಂತಿ ಪಡೆಯಲಿ ಎಂದಿದೆ.[ಟೀಂ ಇಂಡಿಯಾಕ್ಕೆ ರವಿಶಾಸ್ತ್ರಿ ಹೊಸ ಬಾಸ್]
ವಿರಾಟ್ ಕೊಹ್ಲಿ ತಮ್ಮ ಗೆಳತಿ ಅನುಷ್ಕಾ ಶರ್ಮ ಜೊತೆ ಇಂಗ್ಲೆಂಡ್ ಪ್ರವಾಸ ನಿರತರಾಗಿದ್ದರೆ, ಚೇತೇಶ್ವರ್ ಪೂಜಾರಾ, ಮುರಳಿ ವಿಜಯ್, ಸ್ಟುವರ್ಟ್ ಬಿನ್ನಿ, ಆರ್ ಅಶ್ವಿನ್, ಗೌತಮ್ ಗಂಭೀರ್ ತಮ್ಮ ಪತ್ನಿಯರ ಜೊತೆಗಿದ್ದಾರೆ. ಟೆಸ್ಟ್ ಸರಣಿ ಸೋತಿರುವ ಭಾರತ ಈಗ ಹೊಸ ನಿರ್ದೇಶಕ ರವಿ ಶಾಸ್ತ್ರಿ ಮಾರ್ಗದರ್ಶನದಲ್ಲಿ ಐದು ಏಕದಿನ ಕ್ರಿಕೆಟ್ ಪಂದ್ಯ (ಆ.25ರಿಂದ ಆರಂಭ) ಹಾಗೂ ಟಿ20 ಪಂದ್ಯವನ್ನಾಡಲು ಸಜ್ಜಾಗುತ್ತಿದೆ.