ಕ್ರಿಕೆಟ್ ಕ್ಷೇತ್ರಕ್ಕೂ ಮತ್ತು ಮನರಂಜನಾ ಕ್ಷೇತ್ರಕ್ಕೂ ಅದೇನೋ ಒಂದು ರೀತಿಯ ಅವಿನಾಭಾವ ಸಂಬಂಧವಿದೆ. ಖ್ಯಾತ ಸಿನಿಮಾ ತಾರೆಯರು ಕ್ರಿಕೆಟ್ ಟೂರ್ನಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮತ್ತು ಕ್ರಿಕೆಟ್ ಟೂರ್ನಿಗಳ ಹಾಗೂ ಸರಣಿಗಳ ನೇರ ಪ್ರಸಾರದ ಜಾಹೀರಾತುಗಳಲ್ಲಿ ಈಗಾಗಲೇ ಸಾಕಷ್ಟು ಬಾರಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ವಿಶ್ವ ಫ್ರಾಂಚೈಸಿ ಕ್ರಿಕೆಟ್ ಟೂರ್ನಿಗಳಲ್ಲಿ ಚೊಚ್ಚಲ, ದೊಡ್ಡ ಹಾಗೂ ಶ್ರೀಮಂತ ಫ್ರಾಂಚೈಸಿ ಕ್ರಿಕೆಟ್ ಟೂರ್ನಿ ಎನಿಸಿಕೊಂಡು ವಿಶ್ವ ಕ್ರಿಕೆಟ್ನಲ್ಲಿ ತನ್ನ ಪಾರುಪತ್ಯವನ್ನು ಸಾಧಿಸಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಚೊಚ್ಚಲ ಆವೃತ್ತಿ ಆರಂಭವಾದಾಗಲೂ ಸಹ ಹಲವಾರು ಬಾಲಿವುಡ್ ಕಲಾವಿದರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಷ್ಟೇ ಅಲ್ಲದೇ ಇತ್ತೀಚೆಗಷ್ಟೇ ನಡೆದ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಭಾರತ ತಂಡದ ಪಂದ್ಯವೊಂದರ ಕಾಮೆಂಟರಿಯನ್ನು ಕನ್ನಡದ ನಟ ಶಿವರಾಜ್ ಕುಮಾರ್ ಸ್ಟಾರ್ ಸ್ಪೋರ್ಟ್ಸ್ ಕನ್ನಡ ಚಾನೆಲ್ ಮುಖಾಂತರ ಮಾಡಿದ್ದರು.
ಈತನನ್ನು ಬಿಟ್ಟರೆ ಭಾರತದ ಯಾರೂ ನಮ್ಮ ನೆಲದಲ್ಲಿ ಉತ್ತಮ ಆಟವಾಡಲ್ಲ ಎಂದ ದ.ಆಫ್ರಿಕಾ ನಾಯಕ!
ಹೀಗೆ ಸಿನಿಮಾ ತಾರೆಯರು ಕ್ರಿಕೆಟ್ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ, ಇತ್ತ ಕ್ರಿಕೆಟಿಗರು ಕೂಡ ತಾವು ಯಾವ ನಟರಿಗೂ ಕಡಿಮೆ ಇಲ್ಲ ಎಂಬಂತೆ ಜಾಹೀರಾತುಗಳಲ್ಲಿ ಅಭಿನಯಿಸತೊಡಗಿದರು. ಹೀಗೆ ಜಾಹೀರಾತುಗಳಲ್ಲಿ ಅಭಿನಯಿಸುತ್ತಿದ್ದ ಕ್ರಿಕೆಟಿಗರು ಇತ್ತೀಚೆಗೆ ಸಿನಿಮಾ ರಂಗಕ್ಕೂ ಕೂಡ ಕಾಲಿಟ್ಟಿದ್ದು ಶ್ರೀಶಾಂತ್, ಹರ್ಭಜನ್ ಸಿಂಗ್ ರೀತಿಯ ಖ್ಯಾತ ಕ್ರಿಕೆಟಿಗರೇ ಚಲನಚಿತ್ರಗಳಲ್ಲಿ ಅಭಿನಯಿಸಿದರು. ಅಷ್ಟೇ ಅಲ್ಲದೆ ಇದಕ್ಕೂ ಮುನ್ನ ಭಾರತದ ದಿಗ್ಗಜ ಕ್ರಿಕೆಟಿಗರು ಹಿಂದಿ ಭಾಷೆಯಲ್ಲಿ ಪ್ರಸಾರವಾಗುತ್ತಿದ್ದ ಮನರಂಜನಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಅದೇ ರೀತಿ ಇದೀಗ ಕನ್ನಡ ಕಿರುತೆರೆ ಲೋಕಕ್ಕೆ ಭಾರತದ ಹೆಮ್ಮೆಯ ಕ್ರಿಕೆಟಿಗ ಅನಿಲ್ ಕುಂಬ್ಳೆ ಆಗಮಿಸಿದ್ದಾರೆ.
ಹೌದು, ಕ್ರಿಕೆಟ್ ದಿಗ್ಗಜ, ಹೆಮ್ಮೆಯ ಕನ್ನಡಿಗ ಅನಿಲ್ ಕುಂಬ್ಳೆ ಕನ್ನಡ ಕಿರುತೆರೆ ಲೋಕಕ್ಕೆ ಕಾಲಿಡುತ್ತಿದ್ದು, ಕನ್ನಡದ ಖಾಸಗಿ ಮನರಂಜನಾ ವಾಹಿನಿಯಾದ ಜೀ ಕನ್ನಡದಲ್ಲಿ ಪ್ರಸಾರವಾಗುವ ಜನಪ್ರಿಯ ಸರಿಗಮಪ ಚಾಂಪಿಯನ್ಶಿಪ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದಾರೆ. ಸದ್ಯ ಅನಿಲ್ ಕುಂಬ್ಳೆಯವರು ಸರಿಗಮಪ ಚಾಂಪಿಯನ್ಶಿಪ್ 'ಮನ ಮೆಚ್ಚಿದ ಹಾಡು' ಎಂಬ ವಿಶೇಷ ಸಂಚಿಕೆಗೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದು ಈ ಸಂಚಿಕೆಯ ಚಿತ್ರೀಕರಣ ಕೂಡಾ ಮುಗಿದಿದೆ. ಈ ಸಂಚಿಕೆಯ ಪುಟ್ಟ ವಿಡಿಯೋ ತುಣುಕನ್ನು ಜೀ ಕನ್ನಡ ವಾಹಿನಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು ಈ ವಿಡಿಯೋದಲ್ಲಿ ಅನಿಲ್ ಕುಂಬ್ಳೆ ಹಂಸಲೇಖ ಅವರ ಕುರಿತು ವಿಶೇಷವಾಗಿ ಮಾತನಾಡಿ 'ಹಂಸಲೇಖ ಅವರೇ ನಿಮ್ಮ ಪ್ರೇಮಲೋಕ ಶುರುವಾದಾಗ ನಮ್ಮ ಕ್ರಿಕೆಟ್ ಲೋಕ ಶುರುವಾಯಿತು' ಎಂದು ಹೇಳಿದ್ದಾರೆ. ಸದ್ಯ ಅನಿಲ್ ಕುಂಬ್ಳೆ ಅವರ ಈ ಹೇಳಿಕೆ ಪ್ರೋಮೋದಲ್ಲಿನ ಹೈಲೈಟ್ ಆಗಿದೆ.
ಸರಿಗಮಪ ಸಂಗೀತ ಲೋಕಕ್ಕೆ ಭರ್ಜರಿ ಎಂಟ್ರಿ ಕೊಟ್ರು ಬೌಲಿಂಗ್ ಸಾರ್ವಭೌಮ ,ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ !
— Zee Kannada (@ZeeKannada) December 22, 2021
ಸರಿಗಮಪ ಚಾಂಪಿಯನ್ ಶಿಪ್ 'ಮನ ಮೆಚ್ಚಿದ ಹಾಡು' | ಶನಿ-ಭಾನು ರಾತ್ರಿ 7.30ಕ್ಕೆ.#SRGMPChampionship #ZeeKannada #BayasidaBaagilutegeyona #CricketLegend #anilkumble @anilkumble1074 pic.twitter.com/UCwwagyJCc
ಇನ್ನು ಈ ಗಾಯನ ಕಾರ್ಯಕ್ರಮದ ತೀರ್ಪುಗಾರರಾಗಿರುವ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅನಿಲ್ ಕುಂಬ್ಳೆ ಅವರ ಕುರಿತಾಗಿ ಮಾತನಾಡಿದ್ದು 'ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನ ಅನಿಲ್ ಕುಂಬ್ಳೆ ಸರ್' ಎಂದಿದ್ದಾರೆ. ಇನ್ನು ಇದೇ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಅನಿಲ್ ಕುಂಬ್ಳೆ ಅವರ ಕುರಿತು ಮಾತನಾಡಿರುವ ವಿಶೇಷ ವಿಡಿಯೋ ಕೂಡ ಇದ್ದು ಅವರು ಬೌಲಿಂಗ್ ಮಾಡಬೇಕು ಮತ್ತು ನಾನು ವಿಕೆಟ್ ಕೀಪಿಂಗ್ ಮಾಡಬೇಕು ಎಂಬ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಅನಿಲ್ ಕುಂಬ್ಳೆ ಕುರಿತಾಗಿ ಮಾತನಾಡಿರುವ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ 'ನೀವು ಮನಸ್ಸಿಗಿಳಿದರೆ ಕಮಿಟು, ಫೀಲ್ಡಿಗಿಳಿದರೆ ವಿಕೆಟ್ಟು' ಎಂದು ಹೊಗಳಿದ್ದಾರೆ.
ಹೀಗೆ ಸರಿಗಮಪ ಕಾರ್ಯಕ್ರಮಕ್ಕೆ ಆಗಮಿಸಿರುವ ಅನಿಲ್ ಕುಂಬ್ಳೆ ಕುರಿತು ವರ್ಣನೆಗಳ ಮಹಾಪೂರವೇ ಹರಿದುಬಂದಿದ್ದು, ಜೀ ಕನ್ನಡ ವಾಹಿನಿ ಪೋಸ್ಟ್ ಮಾಡಿರುವ ಈ ಪ್ರೋಮೋಗೆ ಉತ್ತಮ ಪ್ರತಿಕ್ರಿಯೆಗಳು ಬರತೊಡಗಿವೆ.