ನವದೆಹಲಿ, ಸೆ. 18: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಪ್ರಮುಖ ಸದಸ್ಯೆ ಏಕ್ತಾ ಬಿಶ್ತ್ ಅವರು ಬಿಜೆಪಿ ಆಯೋಜಿತ ಕಾರ್ಯಕ್ರಮದಲ್ಲಿ ಅವಮಾನ ಅನುಭವಿಸಿದ ಘಟನೆ ನಡೆದಿದೆ.
ಉತ್ತರಾಖಂಡ್ ನ ಬಿಜೆಪಿ ವಿಭಾಗದಿಂದ ಪ್ರಧಾನಿ ಮೋದಿ ಅವರ ಜನ್ಮದಿನಾಚರಣೆ ಅಂಗವಾಗಿ ಡೆಹ್ರಾಡೂನ್ ನ ರೇಸ್ ಕೋರ್ಸ್ ಮೈದಾನದಲ್ಲಿ 'ಭೇಟಿ ಬಚಾವೋ ಭೇಟಿ ಪಡಾವೋ' ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಏಕ್ತಾ ಅವರು ವೇದಿಕೆ ಏರಲು ಹೊರಟಾಗ, ಮಂತ್ರಿ ಮಹೋದಯರ ಭದ್ರತಾ ಸಿಬ್ಬಂದಿಗಳು ಏಕ್ತಾ ಅವರನ್ನು ಬಲವಂತವಾಗಿ ವೇದಿಕೆಯಿಂದ ಕೆಳಗಿಳಿಸಿ ಅವಮಾನಿಸಿದ್ದಾರೆ.
ನಂತರ ಕಾರ್ಯಕ್ರಮ ಶುರುವಾಗಿ ಮುಖ್ಯಮಂತ್ರಿ ರಾವತ್ ಅವರು ತಮ್ಮ ಭಾಷಣದಲ್ಲಿ ಏಕ್ತಾ ಹೆಸರು ಪ್ರಸ್ತಾಪಿಸಿ ಹೊಗಳಲು ಶುರು ಮಾಡಿದಾಗ ಆಯೋಜಕರು, ವೇದಿಕೆ ಮೇಲೆ ಏಕ್ತಾ ಇಲ್ಲದಿರುವುದನ್ನು ಗಮಿನಿಸಿದ್ದಾರೆ. ಸಾರ್ವಜನಿಕರ ಮಧ್ಯೆ ಕುಳಿತ್ತಿದ್ದ ಏಕ್ತಾರನ್ನು ಅಲ್ಲಿಂದ ವೇದಿಕೆಗೆ ಕರೆ ತಂದಿದ್ದಾರೆ.
ಇತ್ತೀಚೆಗೆ ಮುಕ್ತಾಯವಾದ ಮಹಿಳಾ ಕ್ರಿಕೆಟ್ ವಿಶ್ವಕಪ್ ನಲ್ಲಿ ಭಾರತ ತಂಡವು ಫೈನಲ್ ಹಂತ ತಲುಪಲು ಏಕ್ತಾ ನೆರವಾಗಿದ್ದರು. ಪಾಕಿಸ್ತಾನ ವಿರುದ್ಧ ಐದು ವಿಕೆಟ್ ಗಳಿಸಿದ್ದರು. 46 ಏಕದಿನ ಪಂದ್ಯಗಳಿಂದ 71 ವಿಕೆಟ್ ಕಬಳಿಸಿದ್ದಾರೆ.