ನನ್ನ ಬಗ್ಗೆ ನನಗೆ ತಿಳಿದಿರಲಿಲ್ಲ
'ನಾನು 2006ರಲ್ಲಿ ಪಾದಾರ್ಪಣೆ ಮಾಡಿದಾಗ, ನನ್ನ ಬಗ್ಗೆ ನನಗೆ ತಿಳಿದಿರಲಿಲ್ಲ. ಅಂದಿನಿಂದ ನಾನು ಸಾಕಷ್ಟು ಕಲಿಕೆ ಮತ್ತು ಅಭಿವೃದ್ಧಿಯತ್ತ ಗಮನ ಹರಿಸಿದೆ. ಇದೀಗ, ನನ್ನ ಬಗ್ಗೆ ನನಗೆ ತುಂಬಾ ತಿಳಿದಿದೆ. ನನ್ನ ಆಲೋಚನೆಗಳು ಸ್ಥಿಮಿತಕ್ಕೆ ಬಂದಿವೆ. ನನ್ನ ಬಗ್ಗೆ ನನಗೆ ನಿಜವಾಗಿಯೂ ಸ್ಪಷ್ಟ ಅರಿವಿದೆ. ನಾನು ಎಲ್ಲೋ ಒಂದು ಸ್ಥಳದಲ್ಲಿ ಜಾರಿಬಿದ್ದರೆ ಈಗ ನನ್ನನ್ನು ಹಿಡಿಯುವುದು ನನಗೆ ಸುಲಭವೆನಿಸಿದೆ,' ಎಂದು ಉತ್ತಪ್ಪ ಹೇಳಿದ್ದಾರೆ.
ಆತ್ಮಹತ್ಯೆಗೆ ಯೋಚಿಸಿದ್ದೆ
'ಈಗ ನಾನು ಸಾಕಷ್ಟು ಗಟ್ಟಿಗನಾಗಿದ್ದೇನೆ ಯಾಕೆಂದರೆ ನಾನು ಈ ಮೊದಲು ಬಲು ಕಷ್ಟದ ಸನ್ನಿವೇಶವನ್ನು ದಾಟಿ ಬಂದಿದ್ದೇನೆ. ಆವತ್ತು ಮಾತ್ರ ನಾನು ತುಂಬಾ ಖಿನ್ನತೆಗೆ ಒಳಗಾಗಿದ್ದೆ, ಆತ್ಮಹತ್ಯೆಯ ಆಲೋಚನೆಗಳನ್ನು ಮಾಡಿದ್ದೆ. 2009ರಿಂದ 2011ರ ವರಗೆ ನಾನು ದಿನನಿತ್ಯ ಈ ಖಿನ್ನತೆಯನ್ನು ನಿಭಾಯಿಸಬೇಕಾಗಿ ಬಂದಿತ್ತು,' ಎಂದು ರಾಬಿನ್ ವಿವರಿಸಿದ್ದಾರೆ. ಬಹುಶಃ ಉತ್ತಪ್ಪ ಇಲ್ಲಿ ತನ್ನ ವೈಯಕ್ತಿಕ ಬದುಕಿನಲ್ಲಿ ಎದುರಾದ ತೊಳಲಾಟದ ಕ್ಷಣದ ಬಗ್ಗೆ ಮಾತನಾಡಿದ್ದಾರೆ ಅನ್ನಿಸುತ್ತದೆ.
ಕ್ರಿಕೆಟ್ ಬಗ್ಗೆ ಯೋಚನೆಯೇ ಇರಲಿಲ್ಲ
ಮಾತು ಮುಂದುವರೆಸಿದ ಉತ್ತಪ್ಪ, 'ಆ ಮಾನಸಿಕ ಒತ್ತಡದ ಸಮಯಸಲ್ಲಿ ನಾನು ಕ್ರಿಕೆಟ್ ಬಗ್ಗೆಯೂ ಯೋಚಿಸುತ್ತಿರಲಿಲ್ಲ. ಕ್ರಿಕೆಟ್ ಬಗ್ಗೆ ಯೋಚಿಸೋದು ಆಗ ನನ್ನ ಪಾಲಿಗೆ ದೂರ ಮಾತಾಗಿತ್ತು. ಆಗ ನಾನು ಈ ಖಿನ್ನತೆಯಿಂದ ಹೇಗೆ ಪಾರಾಗೋದು? ನನ್ನ ಬದುಕಿನಲ್ಲಿ ಏನಾಗುತ್ತಿದೆ? ನನ್ನ ಜೀವನ ಎತ್ತ ಸಾಗುತ್ತಿದೆ? ಎಂದಷ್ಟೇ ಯೋಚಿಸಿ ಕೊರಗುತ್ತಿದ್ದೆ,' ಎಂದರು.
ಬಾಲ್ಕನಿಯಿಂದ ಹಾರಲು ಯೋಚಿಸಿದ್ದೆ
'ಆ ಬಳಿಕ ಕ್ರಿಕೆಟ್ ಆಟ ನನ್ನನ್ನು ಇಂಥ ಯೋಚನೆಗಳಿಂದ ದೂರವಿಟ್ಟಿತು. ಆದರೆ ಪಂದ್ಯಗಳಿರದ ಸಮಯ, ಆಫ್ ಸೀಸನ್ಗಳಲ್ಲಿ ಮತ್ತೆ ಇಂಥ ಆಯೋಚೆನೆಗಳು ಬಂದಾಗ ನನಗೆ ತುಂಬಾ ಕಷ್ಟವೆನಿಸುತ್ತಿತ್ತು. ಆಗ ನಾನು ಸುಮ್ಮನೆ ಒಂದೆಡೆ ಕೂತು ನನ್ನ ಬಗ್ಗೆಯೇ ಯೋಚಿಸುತ್ತಿದ್ದೆ, ಮೂರರವರೆಗೂ ಕೌಂಟ್ ಮಾಡುತ್ತಿದ್ದೆ, ಓಡಿ ಬಂದು ಬಾಲ್ಕನಿಯಿಂದ ಹಾರಲು ಮುಂದಾಗುತ್ತಿದ್ದೆ. ಆದರೆ ಏನೋ ಒಂದು ನನ್ನನ್ನು ಆ ಕೆಟ್ಟ ಆಲೋಚನೆಗಳಿಂದ ಹಿಂದಕ್ಕೆ ಎಳೆಯುತ್ತಿತ್ತು. ಆದರೆ ಈಗ ನಾನು ಆ ನಕಾರಾತ್ಮಕ ಆಲೋಚನೆಗಳಿಂದ ಹೊರ ಬಂದಿದ್ದೇನೆ. ಸಕಾರಾತ್ಮಕವಾಗಿ ಗಟ್ಟಿಯಾಗಿದ್ದೇನೆ,' ಎಂದು ಉತ್ತಪ್ಪ ಹೇಳಿಕೊಂಡಿದ್ದಾರೆ.