ಹೈದರಾಬಾದ್, ಅ.14: 'ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಆಯೋಜನೆಯ ವಿಶ್ವ ಟಿ 20 ಚಾಂಪಿಯನ್ ಶಿಪ್ ಗೆಲ್ಲಲು ಟೀಂ ಇಂಡಿಯಾ ಸಮರ್ಥವಾಗಿ, ಇತರೆ ತಂಡಗಳಿಗೆ ಭಯ ಹುಟ್ಟಿಸುವಂಥ ತಂಡವೆಂದರೆ ಅದು ಭಾರತ ಮಾತ್ರ' ಎಂದು ಕ್ರಿಕೆಟ್ ದಿಗ್ಗಜ ಬ್ರಿಯಾನ್ ಲಾರಾ ಹೇಳಿದ್ದಾರೆ.
ಇತ್ತೀಚೆಗಿನ ದಿನಗಳಲ್ಲಿ ಟೀಂ ಇಂಡಿಯಾ ಮಿಶ್ರ ಫಲಿತಾಂಶ ಕಂಡಿರಬಹುದು. ಅದರೆ, ಮುಂದಿನ ವರ್ಷ ನಡೆಯಲಿರುವ ವಿಶ್ವ ಟ್ವೆಂಟಿ-20 ಚಾಂಪಿಯನ್ಶಿಪ್ನಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡಗಳ ಪೈಕಿ ಭಾರತವೇ ಅಗ್ರಗಣ್ಯ ಎಂದು ವೆಸ್ಟ್ಇಂಡೀಸ್ನ ಬ್ಯಾಟಿಂಗ್ ದಂತಕತೆ ಬ್ರಿಯಾನ್ ಲಾರಾ ಹೇಳಿದರು.
ನಾನು ಕೋಚ್ ಅಥವಾ ಮಾರ್ಗದರ್ಶಿಯಾದರೂ ವೆಸ್ಟ್ ಇಂಡೀಸ್ ತಂಡದ ಸ್ಥಿತಿ ಬದಲಾಗುವುದಿಲ್ಲ. ನಾನಂತೂ ಆಡಳಿತಗಾರನಾಗಿ ದುಡಿಯಲು ಸಿದ್ಧನಿಲ್ಲ. ಉತ್ತಮ ಪ್ರತಿಭೆಗಳಿದ್ದರೂ ಅವಕಾಶ ವಂಚನೆ, ಇನ್ನಿತರ ರಾಜಕೀಯದಿಂದಾಗಿ ವಿಂಡೀಸ್ ತನ್ನ ಹಿಂದಿನ ಕಳೆ ಕಳೆದುಕೊಂಡಿದೆ.
ನನಗೆ ನನ್ನ ವೃತ್ತಿ ಜೀವನದಲ್ಲಿ 12,000 ರನ್ ಗಳಿಸುವುದು ಮುಖ್ಯವಾಗಿತ್ತು, ಮಿಕ್ಕ ದಾಖಲೆಗಳ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ. ದಾಖಲೆಗಳಿಗಾಗಿ ನಾನು ಎಂದೂ ಆಡಿಲ್ಲ. ಭಾರತದಲ್ಲಿ ನನಗೆ ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್, ರಾಹುಲ್ ದ್ರಾವಿಡ್, ಎಂಎಸ್ ಧೋನಿ, ವಿರಾಟ್ ಕೊಹ್ಲಿ ನನ್ನ ವಿಶೇಷ ಗೆಳೆಯರಿದ್ದಾರೆ. ಇಲ್ಲಿಗೆ ಬರುವುದು ನನಗೆ ಅತ್ಯಂತ ಇಷ್ಟವಾದ ಸಂಗತಿ ಎಂದು ಲಾರಾ ಹೇಳಿದ್ದಾರೆ (ಪಿಟಿಐ)