ಬೆಂಗಳೂರು, ಆಗಸ್ಟ್ 24: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಪ್ರಮುಖ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ ಸಿಬಿ) ಹೊಸ ಕೋಚಿಂಗ್ ತಂಡ ಕಟ್ಟಲು ಮುಂದಾಗಿದೆ. ಮುಖ್ಯ ಕೋಚ್ ಹಾಗೂ ಸಹಾಯಕ ಸಿಬ್ಬಂದಿಗಳನ್ನು ಹೊರಕ್ಕೆ ಕಳಿಸಿದ್ದು, ಹೊಸ ಕೋಚ್ ಹುಡುಕಾಟ ಆರಂಭವಾಗಿರುವ ಸುದ್ದಿ ಬಂದಿದೆ.
ಬೆಂಗಳೂರು ಮಿರರ್ ವರದಿಯಂತೆ ಮುಖ್ಯಕೋಚ್ ಡೇನಿಯಲ್ ವೆಟ್ಟೋರಿ, ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ ಕೋಚ್ ಟ್ರೆಂಟ್ ವುಡ್ ಹಿಲ್ (ಆಸ್ಟ್ರೇಲಿಯಾ) ಹಾಗೂ ಬೌಲಿಂಗ್ ಕೋಚ್ ಆಂಡ್ರ್ಯೂ ಮೆಕ್ ಡೋನಾಲ್ಡ್ (ಆಸ್ಟ್ರೇಲಿಯಾ) ಅವರನ್ನು ಸೇವೆಯಿಂದ ಮುಕ್ತಗೊಳಿಸಲಾಗಿದೆ. ಮುಖ್ಯ ಕೋಚ್ ಆಗಿ ಗ್ಯಾರಿ ಕರ್ಸ್ಟನ್ ನೇಮಕಗೊಳ್ಳುವ ಸಾಧ್ಯತೆ ಹೆಚ್ಚಿದೆ. ಟೀಂ ಇಂಡಿಯಾದ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅವರಿಗೂ ಆಹ್ವಾನ ಸಿಗಬಹುದು.
ಮುರಳಿ ವಿಜಯ್ ಕ್ರಿಕೆಟ್ ಟೆಸ್ಟ್ ಜೀವನ ಮುಗಿಯಿತೇ?: ಅಭಿಮಾನಿಗಳ ಆಕ್ರೋಶ
ಆದರೆ, ಕಳೆದ ಸೀಸನ್ ನಲ್ಲಿ ಆರ್ ಸಿಬಿ ತಂಡ ಸೇರಿದ ಆಶೀಶ್ ನೆಹ್ರಾ ಅವರು ಬೌಲಿಂಗ್ ಕೋಚ್ ಆಗಿ ಮುಂದುವರೆಯಲಿದ್ದಾರೆ. ಹೊಸ ಮ್ಯಾನೇಜ್ಮೆಂಟ್ ಬಗ್ಗೆ ಮುಂದಿನ ವಾರದಲ್ಲಿ ಅಧಿಕೃತವಾಗಿ ಪ್ರಕಟಣೆ ಹೊರಡಿಸಲಾಗುತ್ತದೆ. ಆದರೆ, ಈ ಬದಲಾವಣೆ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಅವರ ಸಲಹೆ, ಸೂಚನೆ ಮುಖ್ಯವಾಗಲಿದೆ. ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿರುವ ಕೊಹ್ಲಿ, ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ತಯಾರಿ ನಡೆಸಿದ್ದಾರೆ.
ಎಬಿ ಡಿ ವಿಲಿಯರ್ಸ್ ಹಾಗೂ ವಿರಾಟ್ ಕೊಹ್ಲಿಯಂಥ ದಿಗ್ಗಜರನ್ನು ಹೊಂದಿದ್ದರೂ 14 ಪಂದ್ಯಗಳಲ್ಲಿ 6 ಪಂದ್ಯಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು. 2017ರಲ್ಲಿ ಅಂಕಪಟ್ಟಿಯಲ್ಲಿ ಕೊನೆ ಸ್ಥಾನಕ್ಕೆ ದೂಡಲ್ಪಟ್ಟಿತ್ತು.