ಯುವ ಆಟಗಾರರಿಗೆ ಮನ್ನಣೆ
ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಿದ ಬಳಿಕ ಮಾತನಾಡಿದ ತಂಡದ ಕೋಚ್ ಟ್ರೇವರ್ ಬೇಲಿಸ್ ಮ್ಯಾನೇಜ್ಮೆಂಟ್ ಯುವ ಆಟಗಾರರಿಗೆ ಅವಕಾಶವನ್ನು ನೀಡಲು ಮುಂದಾಗಿದೆ ಎಂದಿದ್ದಾರೆ. ಈಗಾಗಲೇ ಪ್ಲೇಆಫ್ ಸ್ಪರ್ಧೆಯಿಂದ ಹೊರಬಿದ್ದಿರುವ ಸನ್ರೈಸರ್ಸ್ ತಂಡದ ಪರವಾಗಿ ಯುವ ಆಟಗಾರರಿಗೆ ಅವಕಾಶ ನೀಡುವ ಮೂಲಕ ಆ ಆಟಗಾರರ ಸಾಮರ್ಥ್ಯ ಪರೀಕ್ಷೆಗೆ ತಂಡ ಮುಂದಾಗಿದೆ. "ನಾವು ಇನ್ನು ಮುಂದಿನ ಹಂತಕ್ಕೇರಲು ಸಾಧ್ಯವಿಲ್ಲ. ಹಾಗಾಗಿ ಒಂದು ನಿರ್ಧಾರವನ್ನು ನಾವು ಮಾಡಿದ್ದು ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡಲು ಮುಂದಾಗಿದ್ದೇವೆ. ಯುವ ಆಟಗಾರರು ಪಂದ್ಯಗಳ ಅನುಭವವನ್ನು ಮಾತ್ರವಲ್ಲ ಮೈದಾನದ ಅನುಭವಗಳನ್ನು ಕೂಡ ಪಡೆಯಬೇಕೆಂದು ನಾವು ಈ ಸಂದರ್ಭದಲ್ಲಿ ನಿರ್ಧರಿಸಿದ್ದೇವೆ" ಎಂದಿದ್ದಾರೆ ಸನ್ರೈಸರ್ಸ್ ಹೈದರಾಬಾದ್ ತಂಡದ ಕೋಚ್.
ಮುಂದಿನ ಪಂದ್ಯಗಳಲ್ಲಿ ವಾರ್ನರ್ ಕಣಕ್ಕಿಳಿಯುವುದು ಅನುಮಾನ
ಸನ್ರೈಸರ್ಸ್ ಹೈದರಾಬಾದ್ ತಂಡದ ಮ್ಯಾನೇಜ್ಮೆಂಟ್ ನಿರ್ಧಾರವನ್ನು ಕೋಚ್ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ. ಈ ಮಾತುಗಳಿಂದಾಗಿ ಡೇವಿಡ್ ವಾರ್ನರ್ ಈ ಬಾರಿಯ ಐಪಿಎಲ್ನ ಉಳಿದ ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆಯೇ ಹೆಚ್ಚಾಗಿದೆ. ಯುವ ಆಟಗಾರರನ್ನು ಕಣಕ್ಕಿಳಿಸುವ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತಂಡ ತೆಗೆದುಕೊಂಡಿದೆ. ಇನ್ನು ರಾಜಸ್ಥಾನ್ ರಾಯಲ್ಸ್ ವಿರುದ್ಧಧ ಪಂದ್ಯದಲ್ಲಿ ವಾರ್ನರ್ ಸ್ಥಾನದಲ್ಲಿ ಜೇಸನ್ ರಾಯ್ ಕಣಕ್ಕಿಳಿದಿದ್ದು ಅದ್ಭುತ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಕಾರಣರಾದರು. ಹೀಗಾಗಿ ಮುಂದಿನ ವಾರ್ನರ್ ಸದ್ಯದ ಮಟ್ಟಿಗೆ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಕ್ಷೀಣಿಸಿದೆ.
ಮುಂದಿನ ವರ್ಷ ನಡೆಯಲಿದೆ ಮೆಗಾ ಆಕ್ಷನ್
ಇನ್ನು ಈ ಬಾರಿಯ ಐಪಿಎಲ್ ಅಂತ್ಯದ ಬಳಿಕ ಮೆಗಾ ಆಕ್ಷನ್ ನಡೆಯಲಿದೆ. ಈ ಸಂದರ್ಭದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ವಾರ್ನರ್ ತೊರೆಯುವುದು ಖಚಿತ ಎನ್ನಲಾಗಿದೆ. ಇದಕ್ಕೆ ಪೂರಕವಾಗಿ ಸಾಕಷ್ಟು ವರದಿಗಳು ಲಭ್ಯವಾಗುತ್ತಿದೆ. ಹಲವು ಆವೃತ್ತಿಗಳಲ್ಲಿ ಸತತವಾಗಿ ಅದ್ಭುತ ಪ್ರದರ್ಶನ ನೀಡಿದ್ದರೂ ಫ್ರಾಂಚೈಸಿ ಈ ಆವೃತ್ತಿಯಲ್ಲಿ ನಡೆಸಿಕೊಂಡ ರೀತಿಯಿಂದಾಗಿ ಡೇವಿಡ್ ವಾರ್ನರ್ ಬೇಸರವಾಗಿದ್ದಾರೆ ಎನ್ನಲಾಗಿದೆ. ತಂಡಕ್ಕೆ ಯುವ ಆಟಗಾರರಿಗೆ ಅದ್ಭುತ ಬೆಂಬಲವನ್ನು ನೀಡುತ್ತಿದ್ದರೂ ಮುಂದಿನ ಆವೃತ್ತಿಯಲ್ಲಿ ವಾರ್ನರ್ ಹೈದರಾಬಾದ್ ಪರವಾಗಿ ಕಣಕ್ಕಿಳಿಯುವ ಸಾಧ್ಯತೆ ತೀರಾ ಕಡಿಮೆಯಿದೆ.