ಸಾಮಾಜಿಕ ಜಾಲತಾಣದಲ್ಲಿ ಚಂದ್ ಉದ್ದ ಸಂದೇಶ
ತಾನು ಭಾರತೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸುತ್ತಿರುವ ವಿಚಾರವನ್ನು ಉನ್ಮುಕ್ತ್ ಚಂದ್ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ. ಟ್ವಿಟರ್ನಲ್ಲಿ ಉದ್ದ ಸಂದೇಶ ಬರೆದುಕೊಂಡಿರುವ ಚಂದ್ ಭಾರತೀಯ ರಾಷ್ಟ್ರೀಯ ತಂಡದಲ್ಲಿ ಆಡಬೇಕೆನ್ನುವ ಒಂದೇ ಒಂದು ಕನಸಿನೊಂದಿಗೆ ನಾನು ಕ್ರಿಕೆಟ್ ಆಡಲು ಆರಂಭಿಸಿದೆ. ಆದರೆ ದೇಶದ ಪರ ಆಡಲು ಅವಕಾಶ ಸಿಕ್ಕಿಲ್ಲವಾದ್ದರಿಂದ ಅವಕಾಶಕ್ಕಾಗಿ ಬೇರೆಡೆ ಅರಿಸಿ ಹೋಗಲು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದಾರೆ. 'ಬಹಳಷ್ಟು ಯೋಚಿಸಿದ ಬಳಿಕವೂ ನನಗೆ ಈ ಪತ್ರ ಆರಂಭಿಸುವ ವಿಧಾನ ತಿಳಿದಿಲ್ಲ. ಈ ಪತ್ರದ ಸಾಲುಗಳನ್ನು ಬರೆಯುವಾಗ ಮಿಶ್ರ ಭಾವಗಳು ಬರುತ್ತಿವೆ. ದೇಶವನ್ನು ಪ್ರತಿನಿಧಿಸಲು ನನ್ನಿಂದ ಸಾಧ್ಯವಾಗಲಿಲ್ಲ ಅನ್ನೋ ಯೋಚನೆ ಈಗಲೂ ನನ್ನ ಹೃದಯ ಬಡಿತವನ್ನು ನಿಲ್ಲಿಸುತ್ತಿದೆ. ಭಾರತದ ಪರ ಕ್ರಿಕೆಟ್ ಆಡಬೇಕು ಅನ್ನೋ ಒಂದೇ ಒಂದು ಕನಸಿನೊಂದಿಗೆ ನಾನು ಕ್ರಿಕೆಟ್ ಆಡಲಾರಂಭಿಸಿದೆ. ಈ ಆಟದ ಬಗೆಗಿನ ನನ್ನ ಪ್ರೀತಿ ಪರಿಶುದ್ಧವಾದುದು. ಈ ದಾರಿಯಲ್ಲಿ ನಾನು ಕೆಲವೊಂದು ಮೈಲಿಗಲ್ಲುಗಳನ್ನು ಸ್ಥಾಪಿಸಿದ್ದೇನೆ ಅಂದುಕೊಳ್ಳಲು ಖುಷಿಯಾಗುತ್ತಿದೆ' ಎಂದು ಚಂದ್ ಉದ್ದ ಪತ್ರ ಬರೆದು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಐಪಿಎಲ್ ನಲ್ಲಿ ಆಡಿದ ಅತೀ ಕಿರಿಯ ಆಟಗಾರ
ಬಲಗೈ ಬ್ಯಾಟ್ಸ್ಮನ್ ಆಗಿರುವ ಆಗಿರುವ ಉನ್ಮುಕ್ತ್ ಚಂದ್ಗೆ ಈಗ 28ರ ಹರೆಯ. ಭಾರತ ಅಂಡರ್ 19, ಇಂಡಿಯಾ 'ಎ', ಡೆಲ್ಲಿ ಕ್ಯಾಪಿಟಲ್ಸ್, ದೆಹಲಿ, ಉತ್ತರ ವಲಯ, ರಾಜಸ್ಥಾನ ರಾಯಲ್ಸ್, ಮುಂಬೈ ಇಂಡಿಯನ್ಸ್, ರೆಸ್ಟ್ ಆಫ್ ಭಾರತ, ಭಾರತೀಯ ಮಂಡಳಿ ಅಧ್ಯಕ್ಷರ ಇಲೆವೆನ್, ಭಾರತ ಬಿ, ಕರೈಕುಡಿ ಕಾಲೈ, ಉತ್ತರಾಖಂಡಿ, ಉತ್ತರ ವಲಯ ಮೊದಲಾದ ತಂಡಗಳಿಗೆ ಆಡಿದ್ದಾರೆ. 21 ಐಪಿಎಲ್ ಪಂದ್ಯಗಳಲ್ಲಿ 15.0ಯ ಸರಾಸರಿಯಲ್ಲಿ ಚಂದ್ 300 ರನ್ ಗಳಿಸಿದ್ದರು. ಚಂದ್ ಮೂಲತಃ ದೆಹಲಿಯವರು. 2011ರಲ್ಲಿ ಐಪಿಎಲ್ ಆಡುವ ಮೂಲಕ ಐಪಿಎಲ್ ನಲ್ಲಿ ಪಾಲ್ಗೊಂಡ ಅತೀ ಕಿರಿಯ ಆಟಗಾರ ಎಂಬ ದಾಖಲೆಗೆ ಚಂದ್ ಕಾರಣರಾಗಿದ್ದರು. ಡೆಲ್ಲಿ ಕ್ಯಾಪಿಟಲ್ಸ್ (ಹಿಂದಿನ ಡೆಲ್ಲಿ ಡೇರ್ ಡೆವಿಲ್ಸ್) ಪರ ಚಂದ್ ತನ್ನ ಐಪಿಎಲ್ ವೃತ್ತಿ ಬದುಕು ಆರಂಭಿಸಿದ್ದರು. ಈಗ ಭಾರತೀಯ ಕ್ರಿಕೆಟ್ನಿಂದ ಚಂದ್ ನಿವೃತ್ತಿಯಾಗಿರುವುದರಿಂದ ಉನ್ಮುಕ್ತ್ ಇನ್ನು ಐಪಿಎಲ್ನಲ್ಲಿ ಆಡುವಂತಿಲ್ಲ.
ಚಂದ್ ಹೆಸರಿನಲ್ಲಿ ವಿಶೇಷ ದಾಖಲೆಗಳು
2012ರಲ್ಲಿ ವಿಶ್ವಕಪ್ ವಿಜೇತ ಭಾರತೀಯ ಜೂನಿಯರ್ ತಂಡದಲ್ಲಿ ಇದ್ದರು. ಅಂದು ಫೈನಲ್ನಲ್ಲಿ ಅಜೇಯ 111 ರನ್ ಬಾರಿಸಿದ್ದರಿಂದ ಆ ಬಳಿಕ ಭಾರತ 'ಎ' ತಂಡದಲ್ಲಿ ಚಂದ್ ಸಾಮಾನ್ಯ ಆಟಗಾರರಾಗಿ ಸ್ಥಾನ ಪಡೆದಿದ್ದರು. ಜೂನಿಯರ್ ವಿಶ್ವಕಪ್ನಲ್ಲಿ ಭಾರತ 226 ರನ್ ಗುರಿ ಬೆನ್ನಟ್ಟಿದ್ದಾಗ ಚಂದ್ ಅವರಿಂದ ವಿರೋಚಿತ ಬ್ಯಾಟಿಂಗ್ ಬಂದಿತ್ತು. ಆ ಬಳಿಕ ಚಂದ್ಗೆ ಭಾರತ 'ಎ' ತಂಡದ ನಾಯಕತ್ವವನ್ನೂ ನೀಡಲಾಗಿತ್ತು. ಚಂದ್ 2015ರ ವರೆಗೂ ತನ್ನ ಜವಾಬ್ದಾರಿಯನ್ನು ಚೆನ್ನಾಗಿ ನಿಭಾಯಿಸಿದ್ದರು. 2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಗಾಗಿ ಪ್ರಕಟವಾಗಿದ್ದ ಭಾರತೀಯ 30 ಜನರ ತಂಡದಲ್ಲಿ ಚಂದ್ ಕೂಡ ಇದ್ದರೆಂದರೆ ಚಂದ್ ಎಷ್ಟು ಪ್ರತಿಭಾವಂತ ಅನ್ನೋದನ್ನು ನೀವು ಊಹಿಸಬಹುದು. 2014ರ ಟಿ20 ವಿಶ್ವಕಪ್ಗಾಗಿ ಪ್ರಕಟವಾಗಿದ್ದ 30 ಜನರ ಭಾರತ ತಂಡದಲ್ಲೂ ಉನ್ಮುಕ್ತ್ ಇದ್ದರು. ಆದರೆ ಚಂದ್ಗೆ ಪ್ಲೇಯಿಂಗ್ XIನಲ್ಲಿ ಅವಕಾಶ ಸಿಕ್ಕಿರಲಿಲ್ಲ.