ಭವಿಷ್ಯದ ದಿನಗಳತ್ತ ಗಮನ ಹರಿಸಬೇಕಿದೆ
ಧೋನಿ ನಿವೃತ್ತಿಗೆ ಸಂಬಂಧಿಸಿ ಮಾತನಾಡಿರುವ ಗಂಭೀರ್, 2023ರತ್ತ ಮುಂದರಿಯುವ ನಿಟ್ಟಿನಲ್ಲಿ ಧೋನಿಯವರು ಯುವ ಬ್ಯಾಟ್ಸ್ಮನ್ಗಳಿಗೆ ದಾರಿಯಾಗಬೇಕು. ವಿಕೆಟ್ ಕೀಪಿಂಗ್ನಲ್ಲಿ ಗುರುತಿಸಿಕೊಂಡಿರುವ ಮೂವರು ಯುವ ಆಟಗಾರರನ್ನು ಹೆಸರಿಸಿರುವ ಗಂಭೀರ್, ಟೀಮ್ ಇಂಡಿಯಾ ಭವಿಷ್ಯದ ದಿನಗಳತ್ತ ದೃಷ್ಟಿ ಹರಿಸುವ ಅಗತ್ಯವಿದೆ ಎಂದಿದ್ದಾರೆ.
ಒಬ್ಬೊಬ್ಬರಿಗೆ ಅವಕಾಶ ನೀಡಿ
'ಯುವ ತಾರೆಯರಿಗೆ ಅವಕಾಶಗಳನ್ನು ನೀಡಬೇಕಾದ ಸಂದರ್ಭ ಭಾರತದ ಮುಂದಿದೆ. ವಿಕೆಟ್ ಕೀಪಿಂಗ್ಗೆ ಸಲ್ಲಬಲ್ಲ ಅನ್ನಿಸುವ ರಿಷಬ್ ಪಂತ್, ಸಂಜು ಸ್ಯಾಮ್ಸನ್, ಇಶಾನ್ ಕಿಶನ್ ಇಂಥವರಿಗೆ ಹೆಚ್ಚು ಅವಕಾಶಗಳನ್ನು ನೀಡಬೇಕಿದೆ. ಈ ಮೂವರಲ್ಲಿ ಒಬ್ಬನಿಗೆ ಒಂದೂವರೆ ವರ್ಷಗಳ ಕಾಲ ಅವಕಾಶ ನೀಡಲಿ. ಆತ ಸುಧಾರಣೆ ಕಾಣದಿದ್ದರೆ ಉಳಿದಿಬ್ಬರನ್ನು ಪರಿಗಣಿಸಲಿ. ಆಗ ಮುಂದಿನ ವಿಶ್ವಕಪ್ ವೇಳೆ ಒಬ್ಬಾತ ವಿಕೆಟ್ ಕೀಪಿಂಗ್ಗೆ ತಯಾರಾಗಿರುತ್ತಾನೆ' ಎಂದು ಗಂಭೀರ್ ಸಲಹೆ ನೀಡಿದ್ದಾರೆ.
ಧೋನಿ ಮಾತು ನೆನಪಿಸಿದ ಗೌತಮ್
ಭವಿಷ್ಯದ ದಿನಗಳತ್ತ ದೃಷ್ಟಿ ಹರಿಸೋದು ತುಂಬಾ ಮಹತ್ವವಾದುದು. ಧೋನಿಯೂ ಈ ಹಿಂದೆ ಇದನ್ನೇ ಹೇಳಿದ್ದರು. 2008ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಕಾಮನ್ವೆಲ್ತ್ ಬ್ಯಾಂಕ್ ಸರಣಿ (ಸಿಬಿ ಸೀರೀಸ್) ವೇಳೆ ನಾಯಕನಾಗಿದ್ದ ಧೋನಿ, ಯುವಕರಿಗೆ ಅವಕಾಶ ನೀಡಬೇಕಾಗಿದ್ದರಿಂದ ಸಚಿನ್ (ತೆಂಡೂಲ್ಕರ್), (ವೀರೇಂದ್ರ) ಸೆಹ್ವಾಗ್ ಒಟ್ಟಿಗೆ ಆಡಲಾರರು ಎಂದು ಹೇಳಿದ್ದನ್ನು ಗಂಭೀರ್ ಸ್ಮರಿಸಿಕೊಂಡರು.
ಪ್ರಾಯೋಗಿಕವಾಗಿ ನಿರ್ಧರಿಸಬೇಕು
'ಮೈದಾನ ದೊಡ್ಡದಿರುವುದರಿಂದ ಸಿಬಿ ಸೀರೀಸ್ನಲ್ಲಿ ಸಚಿನ್, ಸೆಹ್ವಾಗ್ ಒಟ್ಟಿಗೆ ಆಡಲಾರರು ಎಂದು ಆಗ ನಾಯಕನಾಗಿದ್ದ ಧೋನಿ ನನ್ನ ಬಳಿ ಹೇಳಿದ್ದರು. ಮುಂದಿನ ವಿಶ್ವಕಪ್ಗೆ ಯುವ ಆಟಗಾರರ ಅಗತ್ಯವಿರುವುದನ್ನು ತಿಳಿಸಲು ಧೋನಿ ಹೀಗೆ ನನ್ನಲ್ಲಿ ಹೇಳಿಕೊಂಡಿದ್ದರು. ಹೀಗಾಗಿ ಭಾವುಕರಾಗುವುದಕ್ಕಿಂತ ಪ್ರಾಯೋಗಿಕವಾಗಿ ನಿರ್ಧಾರ ತೆಗೆದುಕೊಳ್ಳುವುದರ ಅಗತ್ಯವಿದೆ' ಎಂದು ಗಂಭೀರ್ ಹೇಳಿದ್ದಾರೆ.