ಬೆಂಗಳೂರು, ಜೂನ್ 22: ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕ ದಿನೇಶ್ ಚಂಡಿಮಾಲ್, ಕೋಚ್ ಚಂಡಿಕಾ ಹತುರಸಿಂಘೆ ಮತ್ತು ವ್ಯವಸ್ಥಾಪಕ ಅಸಾಂಕ ಗುರುಸಿನ್ಹಾ ಅವರನ್ನು ಆರ್ಟಿಕಲ್ 2.3.1 ಅನ್ನು ಉಲ್ಲಂಘಿಸಿ ಕ್ರೀಡಾ ಸ್ಫೂರ್ತಿಗೆ ಧಕ್ಕೆ ತಂದಿದ್ದಕ್ಕೆ 3ನೇ ಹಂತದ ಅಪರಾಧದಡಿ ಶಿಕ್ಷೆಗೆ ಗುರಿಪಡಿಸಲಾಗಿದೆ.
ಈ ಮೂವರೂ ತಲಾ ಎರಡು ಟೆಸ್ಟ್ ಪಂದ್ಯಗಳಿಂದ ಅಮಾನತು ಆಗುವ ಸಾಧ್ಯತೆ ಇದೆ.
ಚೆಂಡು ವಿರೂಪ ಪ್ರಕರಣ: ನಿಷೇಧ ಪ್ರಶ್ನಿಸಿದ ದಿನೇಶ್ ಚಂಡಿಮಾಲ್
ತಮ್ಮ ವಿರುದ್ಧದ ಆರೋಪವನ್ನು ಈ ಮೂವರೂ ಒಪ್ಪಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಸೂಕ್ತವಾದ ಶಿಕ್ಷೆ ವಿಧಿಸುವ ಸಲುವಾಗಿ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 5.2ರ ಅಡಿಯಲ್ಲಿ ಐಸಿಸಿ ಮೈಕೆಲ್ ಬೆಲಾಫ್ ಅವರನ್ನು ಜ್ಯುಡಿಷಿಯಲ್ ಕಮಿಷನರ್ ಆಗಿ ನೇಮಿಸಿದೆ.
ಪಂದ್ಯ ನಡೆಯುವ ವೇಳೆ ವಿಳಂಬವಾಗಿ ಮೈದಾನಕ್ಕೆ ಇಳಿಯಲು ನಿರಾಕರಿಸುವ ಮೂಲಕ ಅಶಿಸ್ತಿನ ವರ್ತನೆ ತೋರಿದ್ದಕ್ಕಾಗಿ ಐಸಿಸಿ ಮುಖ್ಯಸ್ಥ ಡೇವಿಡ್ ರಿಚರ್ಡ್ಸನ್ ಈ ಮೂವರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದರು.
ಚೆಂಡು ವಿರೂಪ: ಶ್ರೀಲಂಕಾ ನಾಯಕ ಚಂಡಿಮಾಲ್ಗೆ ಒಂದು ಟೆಸ್ಟ್ ನಿಷೇಧ
ಇದಲ್ಲದೆ ಪಂದ್ಯದ ವೇಳೆ ಚೆಂಡು ವಿರೂಪ ಪ್ರಕರಣದಡಿ ತಮ್ಮ ಮೇಲೆ ಆರ್ಟಿಕಲ್ 5.2.3 ಅಡಿಯಲ್ಲಿ ರೆಫರಿ ಜಾವಗಲ್ ಶ್ರೀನಾಥ್ ವಿಧಿಸಿದ್ದ ಶಿಕ್ಷೆಯನ್ನು ಪ್ರಶ್ನಿಸಿ ಚಂಡಿಮಾಲ್ ಮನವಿ ಸಲ್ಲಿಸಿದ್ದರು.
ಇದರ ವಿಚಾರಣೆಯನ್ನೂ ಜ್ಯುಡಿಷಿಯಲ್ ಕಮಿಷನರ್ ಮೈಕೆಲ್ ಬೆಲಾಫ್ ಅವರು ನಡೆಸಲಿದ್ದಾರೆ.