ಲಂಡನ್, ಜೂನ್ 28: ಶಿಖರ್ ಧವನ್ ಗಾಯಗೊಂಡು ಟೂರ್ನಿಯಿಂದ ನಿರ್ಗಮಿಸಿದ ಬಳಿಕ ಟೀಮ್ ಇಂಡಿಯಾ ಪರ ಇನಿಂಗ್ಸ್ ಆರಂಭಿಸುವ ಜವಾಬ್ದಾರಿ ಹೊತ್ತಿರುವ ಕನ್ನಡಿಗ ಕೆ.ಎಲ್ ರಾಹುಲ್, ಉತ್ತಮ ಆರಂಭ ಪಡೆಯುತ್ತಿದ್ದರೂ ದೊಡ್ಡ ಮೊತ್ತವಾಗಿ ಪರಿವರ್ತಿಸುವಲ್ಲಿ ವಿಫಲರಾಗುತ್ತಿರುವುದಕ್ಕೆ ಬೇಸರ ವ್ಯಕ್ತ ಪಡಿಸಿದ್ದಾರೆ.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಕೆ.ಎಲ್ ರಾಹುಲ್ ಆಡಿರುವ ಐದು ಪಂದ್ಯಗಳಲ್ಲಿ ಕ್ರಮವಾಗಿ 26, 11*, 57, 30 ಮತ್ತು 48 ರನ್ಗಳನ್ನು ಗಳಿಸಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಮಾತ್ರ ಏಕಮಾತ್ರ ಅರ್ಧಶತಕ ದಾಖಲಿಸಿದ್ದಾರೆ. ಇನ್ನು ಆಸ್ಟ್ರೇಲಿಯಾ ವಿರುದ್ಧ ಇನಿಂಗ್ಸ್ ಅಂತ್ಯದಲ್ಲಿ ಕಣಕ್ಕಿಳಿದ ಕಾರಣ ಆಡಲು ಹೆಚ್ಚು ಅವಕಾಶ ಸಿಗಲಿಲ್ಲ.
ಆದರೆ, ಉಳಿದ ಪಂದ್ಯಗಳಲ್ಲಿ ಉತ್ತಮ ಆರಂಭ ಪಡೆದರೂ ದೊಡ್ಡ ಮೊತ್ತ ತರಲಾಗದೆ ನೀರಸ ಪ್ರದರ್ಶನವನ್ನೇ ನೀಡಿದ್ದಾರೆ. ಪ್ರಮುಖವಾಗಿ ತೀರಾ ತಾಳ್ಮೆಯ ಆಟವಾಡುತ್ತಿರುವುದು ಕೂಡ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಅದರಲ್ಲೂ ಅಫಘಾನಿಸ್ತಾನ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಕಳಪೆ ಹೊಡೆತಕ್ಕೆ ಕೈಹಾಕಿ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದ್ದರು.
ಮೊಹಮ್ಮದ್ ಶಮಿಯನ್ನು ಲಫಂಗಾ ಎಂದು ಜರಿದ ಪತ್ನಿ ಹಸೀನ್!
"ಇದು ನಿಜಕ್ಕೂ ಬೇಸರ ತಂದಿದೆ. ಕಠಿಣ ಪರಿಶ್ರಮದ ಮೂಲಕ ಮೊದಲ 10-15 ಓವರ್ಗಳಲ್ಲಿ ಬ್ಯಾಟಿಂಗ್ ನಡೆಸಿದ್ದೇನೆ. ಒಬ್ಬ ಆರಂಭಿಕ ಬ್ಯಾಟ್ಸ್ಮನ್ ಆಗಿ ಮೊದಲ 25-30 ರನ್ಗಳನ್ನು ಗಳಿಸುವುದು ಅಷ್ಟು ಸುಲಭದ ಮಾತಲ್ಲ. ಇದು ಅತ್ಯಂತ ಕಠಿಣ ಕೆಲಸ. ಬಳಿಕ ರನ್ ಗತಿಯನ್ನು ಹೆಚ್ಚಿಸಬೇಕಾಗುತ್ತದೆ. ದುರದೃಷ್ಟವಶಾತ್ ನಾನು ಇದನ್ನು ಮಾಡುವಲ್ಲಿ ವಿಫಲಗೊಂಡಿದ್ದೇನೆ,'' ಎಂದು ರಾಹುಲ್ ಹೇಳಿದ್ದಾರೆ.
"ಈ ಕುರಿತಾಗಿ ಖಂಡಿತವಾಗಿಯೂ ಆಲೋಚಿಸಿ ಪರಿಹಾರ ಕಂಡುಕೊಳ್ಳುತ್ತೇನೆ. ಆದರೆ, ಈ ಕುರಿತಾಗಿ ಆತಂಕ ಪಡುವ ಅಗತ್ಯವೇನು ಇಲ್ಲ. ಏಕೆಂದರೆ ಉಳಿದೆಲ್ಲಾ ಸಂಗತಿಗಳಲ್ಲಿ ನಾನು ಉತ್ತಮವಾಗಿದ್ದೇನೆ. ನಾನು ಮಾಡಿದ ತಪ್ಪುಗಳಿಂದ ಕಲಿತುಕೊಳ್ಳುವುದು ಬಹಳಷ್ಟಿದೆ. ಇದರಿಂದ ಪಾಠ ಕಲಿತು ಮತ್ತಷ್ಟು ಉತ್ತಮವಾಗಿ ಆಡುವ ಪ್ರಯತ್ನ ಮಾಡಲಿದ್ದೇನೆ," ಎಂದು ಗುರುವಾರ ವೆಸ್ಟ್ ಇಂಡೀಸ್ ವಿರುದ್ಧ ಭಾರತ 125 ರನ್ ಜಯ ದಾಖಲಿಸಿದ ಬಳಿಕ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಟೀಮ್ ಇಂಡಿಯಾದ ಡಿಫೆನ್ಸೀವ್ ಬ್ಯಾಟಿಂಗ್ ಕುರಿತು ಸೆಹ್ವಾಗ್ ಟೀಕೆ!
"ಶಿಖರ್ ಧವನ್ ಗಾಯಗೊಂಡದ್ದು ದುರದೃಷ್ಟಕರ. ಹೀಗಾಗಿ ನಾನು ಆರಂಭಿಕನಾಗಿ ಆಡುವಂತಾಯಿತು. ನಾನು ಇದಕ್ಕೆ ಸಜ್ಜಾಗಿರಲಿಲ್ಲ. ಆದರೂ ಕಳೆದ ಒಂದೆರಡು ವರ್ಷಗಳಲ್ಲಿ ನನಗೆ ಯಾವುದೇ ಸ್ಥಾನದಲ್ಲಿ ಆಡುವ ಅವಕಾಶ ಸಿಕ್ಕರೂ ಆಡಲು ಬೇಕಾದ ಮನಸ್ಥಿತಿ ಬೆಳೆಸಿಕೊಂಡಿದ್ದೇನೆ,'' ಎಂದು 27 ವರ್ಷದ ಕರ್ನಾಟಕ ಬ್ಯಾಟ್ಸ್ಮನ್ ಹೇಳಿದ್ದಾರೆ.