ಹೊಸದಿಲ್ಲಿ, ಆಗಸ್ಟ್ 06: ಭಾರತ ತಂಡದ ಮಾಜಿ ನಾಯಕ ಹಾಗೂ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಹಾಲಿ ಮುಖ್ಯಸ್ಥ ರಾಹುಲ್ ದ್ರಾವಿಡ್ ವಿರುದ್ಧ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಎಥಿಕ್ಸ್ ಆಫೀಸರ್ (ನೈತಿಕ ಅಧಿಕಾರಿ) ಹಿತಾಸಕ್ತಿ ಸಂಘರ್ಷದ ಹಿನ್ನೆಲೆಯಲ್ಲಿ ನೋಟಿಸ್ ಜಾರಿಗೊಳಿಸಿದ್ದಾರೆ.
ಬಿಸಿಸಿಐನ ಒಂಬುಡ್ಸ್ಮನ್ ಹಾಗೂ ಎಥಿಕ್ಸ್ ಆಫಿಸರ್ ಆಗಿರುವ ನಿವೃತ್ತಿ ನ್ಯಾಯಮೂರ್ತಿ ಡಿ.ಕೆ ಜೈನ್, ಮಧ್ಯ ಪ್ರದೇಶ ಕ್ರಿಕೆಟ್ ಸಂಸ್ಥೆಯ (ಎಂಪಿಸಿಎ) ಆಜೀವ ಸದಸ್ಯರಾದ ಸಂಜೀವ್ ಗುಪ್ತ ಅವರು ನೀಡಿರುವ ದೂರಿನ ಆಧಾರದ ಮೇರೆಗೆ ನೋಟಿಸ್ ಜಾರಿಗೊಳಿಸಿದ್ದಾರೆ.
ಕಾಶ್ಮೀರ ವಿಚಾರದಲ್ಲಿ ಕೆಣಕಿದ ಅಫ್ರಿದಿಗೆ ಗೌತಮ್ ಗಂಭೀರ್ ಖಡಕ್ ಉತ್ತರ
ಗುಪ್ತ ಅವರ ದೂರಿನ ಪ್ರಕಾರ, ರಾಹುಲ್ ದ್ರಾವಿಡ್ ಸದ್ಯ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್ಸಿಎ) ಮುಖ್ಯಸ್ಥರಾಗಿದ್ದು, ಇದೇ ವೇಳೆ ಐಪಿಎಲ್ನ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಲೀಕತ್ವ ಹೊಂದಿರುವ ಇಂಡಿಯಾ ಸಿಮೆಂಟ್ಸ್ ಸಂಸ್ಥೆಯಲ್ಲಿ ಉಪಾಧ್ಯಕ್ಷರ ಹುದ್ದೆ ಹೊಂದಿದ್ದಾರೆ. ಹೀಗಾಗಿ ಹಿತಾಸಕ್ತಿ ಸಂಘರ್ಷ ತಲೆದೂರಿದೆ.
"ದೂರು ಸ್ವೀಕರಿಸಿದ ಬಳಿಕ ಕಳೆದ ವಾರ ರಾಹುಲ್ ದ್ರಾವಿಡ್ ವಿರುದ್ಧ ನೋಟಿಸ್ ಜಾರಿಗೊಳಿಸಿದ್ದೇನೆ.ಹಿತಾಸಕ್ತಿ ಸಂಘರ್ಷದ ಆರೋಪ ಕುರಿತಾಗಿ ಉತ್ತರಿಸಲು ಅವರಿಗೆ ಎರಡು ವಾರಗಳ ಕಾಲಾವಧಿ ನೀಡಲಾಗಿದೆ. ಅವರ ಉತ್ತರ ಬಂದ ಬಳಿಕವಷ್ಟೇ ಈ ವಿಚಾರದಲ್ಲಿ ಮುಂದೇನು ಮಾಡಬೇಕೆಂಬುದನ್ನು ನಿರ್ಧರಿಸಲಿದ್ದೇನೆ," ಎಂದು ಡಿಕೆ ಜೈನ್ ಈ ವಿಚಾರವನ್ನು ಧೃಡಪಡಿಸಿದ್ದಾರೆ.
2003ರ ವಿಶ್ವಕಪ್ನಲ್ಲಿ ಭಾರತ ವಿರುದ್ಧ ಪಾಕ್ ಸೋಲಿಗೆ ಕಾರಣ ಕೊಟ್ಟ ಅಖ್ತರ್
ಇದರೊಂದಿಗೆ ರಾಹುಲ್ ದ್ರಾವಿಡ್ ಆಗಸ್ಟ್ 16ರ ಒಳಗಾಗಿ ಉತ್ತರ ನೀಡಬೇಕಿದೆ. ಅಷ್ಟೇ ಅಲ್ಲದೆ ಈ ವಿಚಾರವಾಗಿ ಅಗತ್ಯಬಿದ್ದಲ್ಲಿ ಜೈನ್ ಅವರೊಟ್ಟಿಗೆ ಮುಖಾಮುಖಿ ಮಾರುಕತೆಗೆ ಹಾಜರಾಗಬೇಕಾಗುತ್ತದೆ.
ಕಳೆದ ಐಪಿಎಲ್ ವೇಳೆ ವಿವಿಧ ಫ್ರಾಂಚೈಸಿಗಳಲ್ಲಿ ಮೆಂಟರ್ ಜವಾಬ್ದಾರಿ ನಿಭಾಯಿಸಿದ್ದ ಭಾರತ ತಂಡದ ಮಾಜಿ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಮತ್ತು ವಿವಿಎಸ್ ಲಕ್ಷ್ಮಣ್, ಬಿಸಿಸಿಐನ ಕ್ರಿಕೆಟ್ ಸಲಹಾ ಸಮಿತಿಯ ಸದ್ಯರೂ ಆಗಿದ್ದರು. ಹೀಗಾಗಿ ಅವರ ವಿರುದ್ಧವೂ ಇದೇ ಗುಪ್ತ ಹಿತಾಸಕ್ತಿ ಸಂಘರ್ಷದ ದೂರು ದಾಖಲಿಸಿದ್ದರು. ಸಚಿನ್ ಮುಂಬೈ ಇಂಡಿಯನ್ಸ್ ಪರ ಮತ್ತು ಲಕ್ಷ್ಮಣ್ ಸನ್ರೈಸರ್ಸ್ ಹೈದರಾಬಾದ್ ಪರ ಮೆಂಟರ್ ಜವಾಬ್ದಾರಿ ನಿಭಾಯಿಸಿದ್ದರು.
ತಮ್ಮ ವಿವಾಹಕ್ಕೆ ಭಾರತೀಯ ಆಟಗಾರರನ್ನು ಆಹ್ವಾನಿಸಲಿರುವ ಪಾಕ್ ಕ್ರಿಕೆಟಿಗ
ಬಳಿಕ ಕ್ರಿಕೆಟ್ ಸಲಹಾ ಸಮಿತಿಯಿಂದ ಸಚಿನ್ ಮತ್ತು ಲಕ್ಷ್ಮಣ್ ಹೊರಬಂದಿದ್ದರು. ಇದಾದ ಬಳಿಕ ಬಿಸಿಸಿಐನ ಕ್ರಿಕೆಟ್ ಆಡಳಿತ ಸಮಿತಿಯು ಭಾರತ ತಂಡದ ಮಾಜಿ ನಾಯಕ ಹಾಗೂ ಭಾರತಕ್ಕೆ ಚೊಚ್ಚಲ ವಿಶ್ವಕಪ್ ಗೆದ್ದುಕೊಟ್ಟ ಆಟಗಾರ ಕಪಿಲ್ ದೇವ್ ಅವರ ಸಾರಥ್ಯದ ನೂತನ ಕ್ರಿಕೆಟ್ ಸಲಹಾ ಸಮಿತಿಯನ್ನು ರಚಿಸಿತು. ನೂತನ ಸಮಿತಿಯಲ್ಲಿ ಕಪಿಲ್ ಹೊರತಾಗಿ ಮಾಜಿ ಕ್ರಿಕೆಟಿಗ ಅನ್ಷುಮನ್ ಗಾಯಕ್ವಾಡ್ ಮತ್ತು ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಶಾಂತ ರಂಗಸ್ವಾಮಿ ಇದ್ದಾರೆ. ನೂತನ ಕ್ರಿಕೆಟ್ ಸಲಹಾ ಸಮಿತಿಗೆ ಭಾರತ ತಂಡದ ನೂತನ ಕೋಚ್ ನೇಮಕದ ಜವಾಬ್ದಾರಿಯನ್ನು ನೀಡಲಾಗಿದೆ.