ಭಾರತ ಭರ್ಜರಿ ತಿರುಗೇಟು
ಆರಂಭಿಕ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್ನಲ್ಲಿ ಭಾರತ ಕೇವಲ 36 ರನ್ ಗಳಿಸಿ ಪಂದ್ಯದಲ್ಲಿ 8 ವಿಕೆಟ್ ಹೀನಾಯ ಸೋಲು ಕಂಡಿತ್ತು. ಆದರೆ ದ್ವಿತೀಯ ಪಂದ್ಯದಲ್ಲಿ 8 ವಿಕೆಟ್ ಗೆಲುವು ದಾಖಲಿಸುವ ಮೂಲಕ ಆಸ್ಟ್ರೇಲಿಯಾಕ್ಕೆ ಭರ್ಜರಿ ತಿರುಗೇಟು ನೀಡಿತ್ತು. ಅಷ್ಟೇ ಅಲ್ಲ, 3ನೇ ಪಂದ್ಯದಲ್ಲಿ ಸೋಲಿನಂಚಿಗೆ ಹೋಗಿದ್ದ ಭಾರತ ಅದನ್ನು ಡ್ರಾ ಮಾಡಿಕೊಂಡಿತ್ತು. ಸರಣಿಯೀಗ 1-1ರಿಂದ ಸಮಬಲಗೊಂಡಿರುವಾಗ 4ನೇ ಟೆಸ್ಟ್ನಲ್ಲೂ ಭಾರತ ಗೆಲುವಿನ ಸೂಚನೆ ನೀಡುತ್ತಿದೆ. ಭಾರತ ತಂಡದಲ್ಲಿ ಒಬ್ಬ ಆಟಗಾರ ಕೈಕೊಟ್ಟರೆ ಅನಿರೀಕ್ಷಿತವಾಗಿ ಇನ್ನೊಬ್ಬ ಆಟಗಾರ ಅದ್ಭುತ ಪ್ರದರ್ಶನ ನೀಡುತ್ತಿರುವುದು ಸರಣಿ ಹೀಗೆ ಕುತೂಹಲಕಾರಿ ತಿರುವು ಪಡೆದುಕೊಳ್ಳುತ್ತಿರುವುದಕ್ಕೆ ಕಾರಣ.
ಡ್ರಾ ಆದರೆ ಸೋಲಿಗಿಂತ ಅವಮಾನ
ಭಾರತಕ್ಕೆ ಆತಿಥ್ಯವಹಿಸುತ್ತಿರುವ ಆಸ್ಟ್ರೇಲಿಯಾ ತಂಡ ಟೆಸ್ಟ್ ಸರಣಿ ಗೆಲ್ಲುತ್ತದೆ ಎಂದು ಭಾವಿಸಿದ್ದ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ಗೆ ಭಾರತದ ಆಟಗಾರರ ಪ್ರದರ್ಶನ, ತಿರುವು ಮಂತ್ರ ತಲೆ ಕೆಡಿಸಿದೆ. ಗೆಲ್ಲಬೇಕಿದ್ದ ಸರಣಿಯನ್ನು ಆಸ್ಟ್ರೇಲಿಯಾ ಡ್ರಾ ಮಾಡಿಕೊಳ್ಳುತ್ತದೆಯೆಂದರೆ ಅದು ಸೋಲಿಗಿಂತಲೂ ಬೇಜಾರಿನ ಸಂಗತಿ ಎಂದು ಪಾಂಟಿಂಗ್ ಹೇಳಿದ್ದಾರೆ. ಹಾಗೆ ನೋಡಿದರೆ ಸರಣಿ ಡ್ರಾ ಅನ್ನಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ಭಾರತ ಗೆಲ್ಲುವುದರಲ್ಲಿದೆ.
ಭಾರತದೆದುರು ಸರಣಿ ಡ್ರಾ ಆಗಬಾರದು
ಕ್ರಿಕೆಟ್ ಡಾಟ್ ಕಾಮ್ ಡಾಟ್ ಎಯು ಜೊತೆ ಮಾತನಾಡಿದ ರಿಕಿ ಪಾಂಟಿಂಗ್, 'ಟೆಸ್ಟ್ ಸರಣಿ ಡ್ರಾಗೊಂಡರೆ ಅದು ಕೆಲ ವರ್ಷಗಳ ಹಿಂದೆ ಭಾರತದ ವಿರುದ್ಧ ಸರಣಿ ಸೋತಿದ್ದಕ್ಕಿಂತ ಕೆಟ್ಟದ್ದು ಅನ್ನಿಸಲಿದೆ,' ಎಂದಿದ್ದಾರೆ. ಪಾಂಟಿಂಗ್ ಹೀಗನ್ನೋದಕ್ಕೆ ಕಾರಣವಿದೆ. 2018-19ರಲ್ಲಿ ಆಸ್ಟ್ರೇಲಿಯಾಕ್ಕೆ ಪ್ರವಾಸ ಹೋಗಿದ್ದ ಭಾರತ ಅಲ್ಲಿ 2-1ರಿಂದ ಇದೇ ಬಾರ್ಡರ್ ಗಾವಸ್ಕರ್ ಟ್ರೋಫಿ ಗೆದ್ದಿತ್ತು. ಆದರೆ ಆಗ ಆಸೀಸ್ ನಲ್ಲಿ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್ ಇರಲಿಲ್ಲ. ಅವರಿಬ್ಬರೂ ಬಾಲ್ ಟ್ಯಾಂಪರಿಂಗ್ನಲ್ಲಿ ವರ್ಷದ ನಿಷೇಧಕ್ಕೀಡಾಗಿದ್ದರು. ಈಗ ಸ್ಮಿತ್-ವಾರ್ನರ್ ತಂಡದಲ್ಲಿ ಇದ್ದೂ ಸರಣಿ ಸೋತರೆ ಅದೊಂಥರಾ ಆಸ್ಟ್ರೇಲಿಯಾಕ್ಕೆ ಅವಮಾನವೆ.
ಆಡುತ್ತಿರೋದು ಅತೀ ದುರ್ಬಲ ಭಾರತ ತಂಡ
ಟೆಸ್ಟ್ ಸರಣಿ ಗೆಲುವು ನಿರ್ಧರಿಸಲಿರುವ ನಾಲ್ಕನೇ ಟೆಸ್ಟ್ನಲ್ಲಿ ಆಸ್ಟ್ರೇಲಿಯಾದಿಂದ ಬಲಿಷ್ಠ ತಂಡ ಆಡುತ್ತಿದ್ದರೆ, ಭಾರತದ ಅತೀ ದುರ್ಬಲ ತಂಡ ಆಡುತ್ತಿದೆ ಅನ್ನೋದು ನಿಮಗೆ ಗೊತ್ತೇ. ಯಾಕೆಂದರೆ ಆಸ್ಟ್ರೇಲಿಯಾದಲ್ಲಿ ಅನುಭವಿಗಳು ಹೆಚ್ಚಿದ್ದರೆ, ಭಾರತದಲ್ಲಿ ಅನುಭವಿಗಳೇ ಒಂದಿಬ್ಬರು. 4ನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದಿರುವ ಆಟಗಾರರ ಅಂಕಿ-ಅಂಶಗಳನ್ನು ಗಮನಿಸಿದರೆ; ಆಸ್ಟ್ರೇಲಿಯಾ ಅತ್ಯಂತ ಬಲಿಷ್ಠ ತಂಡ, ಭಾರತ ಅತ್ಯಂತ ದುರ್ಬಲ ತಂಡ ಅನ್ನೋದಕ್ಕೆ ಈ ಅಂಕಿ ಅಂಶಗಳು ಸಾಕ್ಷಿ ಹೇಳುತ್ತವೆ (ಈ ಅಂಕಿ-ಅಂಕಗಳು 4ನೇ ಟೆಸ್ಟ್ ಆರಂಭಕ್ಕೂ ಮೊದಲಿನದ್ದು).
* ಆಸ್ಟ್ರೇಲಿಯಾ: 504 ಪಂದ್ಯಗಳು, 23,767 ರನ್ಗಳು, 1,046 ವಿಕೆಟ್ಗಳು.
* ಭಾರತ: 215 ಪಂದ್ಯಗಳು, 14,814 ರನ್, 13 ವಿಕೆಟ್ಗಳು.
ಗಾಯಕ್ಕೀಡಾಗಿರುವ ಭಾರತೀಯರು
(ನಾಲ್ಕನೇ ಟೆಸ್ಟ್ನಲ್ಲಿ ಭಾರತ ತಂಡ ಯಾಕೆ ಅಷ್ಟೊಂದು ದುರ್ಬಲವಾಗಿದೆಯೆಂದರೆ ತಂಡದ ಬಹುತೇಕ ಪ್ರಮುಖ ಆಟಗಾರರು ಗಾಯಗೊಂಡು ತಂಡದಿಂದ ಹೊರಬಿದ್ದಿದ್ದಾರೆ. ಗಾಯಾಳು ಆಟಗಾರರ ಪಟ್ಟಿ ಕೆಳಗಿದೆ)
* ಭುವನೇಶ್ವರ್ ಕುಮಾರ್, ತೊಡೆ ಸ್ನಾಯುಗಳ ಗಾಯ, ತಂಡದಿಂದ ಹೊರಕ್ಕೆ
* ಇಶಾಂತ್ ಶರ್ಮಾ, ಸೊಂಟ ಮತ್ತು ತೊಡೆ ಮೂಳೆ ಸೇರುವಲ್ಲಿ ನೋವು, ತಂಡದಿಂದ ಹೊರಕ್ಕೆ
* ಮೊಹಮ್ಮದ್ ಶಮಿ, ಬಲಗೈಗೆ ಗಾಯ, ತಂಡದಿಂದ ಹೊರಕ್ಕೆ
* ಉಮೇಶ್ ಯಾದವ್, ಕಾಲಿನ ಹಿಂಬಾಗದ ಸ್ನಾಯುಗಳು (ಕಾಫ್) ಬೇನೆ, ತಂಡದಿಂದ ಹೊರಕ್ಕೆ
* ಕೆಎಲ್ ರಾಹುಲ್, ಕೈಯ ಮಣಿಕಟ್ಟು ಗಾಯ, ತಂಡದಿಂದ ಹೊರಕ್ಕೆ
* ಹನುಮ ವಿಹಾರಿ, ಹ್ಯಾಮ್ಸ್ಟ್ರಿಂಗ್, ತಂಡದಿಂದ ಹೊರಕ್ಕೆ
* ರವೀಂದ್ರ ಜಡೇಜಾ, ಹೆಬ್ಬೆಟ್ಟಿಗೆ ಗಾಯ, ತಂಡದಿಂದ ಹೊರಕ್ಕೆ
* ಜಸ್ಪ್ರೀತ್ ಬೂಮ್ರಾ, ಕಿಬ್ಬೊಟ್ಟೆ ನೋವು, ತಂಡದಿಂದ ಹೊರಕ್ಕೆ
* ರವಿಚಂದ್ರನ್ ಅಶ್ವಿನ್, ಬೆನ್ನುನೋವು, ತಂಡದಿಂದ ಹೊರಕ್ಕೆ