ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟಿ20 ಸರಣಿಯಲ್ಲಿ ಎರಡೂ ತಂಡಗಳು ಸಾಕಷ್ಟು ಪೈಪೋಟಿಯನ್ನು ನಡೆಸಿ ಅಂತಿಮ ಪಂದ್ಯದಲ್ಲಿ ಸರಣಿ ಗೆಲುವು ನಿರ್ಧಾರವಾಗಿದೆ. ಭಾರತದ ಸರ್ವಾಂಗೀಣ ಪ್ರದರ್ಶನದಿಂದಾಗಿ ಇಂಗ್ಲೆಂಡ್ ಅಂತಿಮ ಪಂದ್ಯದಲ್ಲಿ 36 ರನ್ಗಳಿಂದ ಭಾರತಕ್ಕೆ ಶರಣಾಗಿದೆ. ಈ ವರ್ಷ ಭಾರತದಲ್ಲೇ ವಿಶ್ವಕಪ್ ನಡೆಯುವ ಕಾರಣ ಎರಡು ತಂಡಗಳಿಗೂ ಈ ಸರಣಿ ಬಹಳ ಮುಖ್ಯವಾಗಿತ್ತು. ಆದರೆ ಸರಣಿ ಸೋತ ಬಳಿಕ ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ಪ್ರತಿಕ್ರಿಯೆ ನೀಡಿದ್ದಾರೆ.
ಭಾರತದ ವಿರುದ್ಧದ ಟಿ20 ಸರಣಿಯಲ್ಲಿ ಸೋಲು ಕಂಡ ಬಳಿಕ ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಮುಂಬರುವ ಐಪಿಎಲ್ನಿಂದ ಇಂಗ್ಲೆಂಡ್ ತಂಡದ ಆಟಗಾರರು ಸಂಪೂರ್ಣವಾಗಿ ಲಾಭವನ್ನು ಪಡೆದುಕೊಳ್ಳಲು ಬಯಸುವುದಾಗಿ ಹೇಳಿದ್ದಾರೆ.
ಭಾರತ vs ಇಂಗ್ಲೆಂಡ್: ದಾಖಲೆ ಬರೆದ ನಾಯಕ ವಿರಾಟ್ ಕೊಹ್ಲಿ
"ಮುಂಬರುವ ಐಪಿಎಲ್ನಲ್ಲಿ ಇಂಗ್ಲೆಂಡ್ ತಂಡ ದೊಡ್ಡ ಪ್ರಯೋಜನವನ್ನು ಪಡೆಯಲು ಬಯಸುತ್ತೇನೆ" ಎಂದಿದ್ದಾರೆ ಇಯಾನ್ ಮಾರ್ಗನ್. ತಂಡವಾಗಿ ಹಾಗೂ ವೈಯಕ್ತಿಕವಾಗಿ ನಾವು ತಟಸ್ಥರಾಗಲು ಬಯಸುವುದಿಲ್ಲ. ನಾವು ಮುನ್ನುಗ್ಗಲು ಬಯಸುತ್ತೇವೆ. ಐಪಿಎಲ್ನಲ್ಲಿ ನಮ್ಮ ತಂಡದ ಯಾವುದೇ ಹುಡುಗರಿಗೆ ಅವಕಾಶ ದೊರೆತರೆ ಅದರ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಿ" ಎಂದು ಇಯಾನ್ ಮಾರ್ಗನ್ ತಂಡದ ಸದಸ್ಯರಿಗೆ ಸಲಹೆಯನ್ನು ನೀಡಿದ್ದಾರೆ.
ಏಪ್ರಿಲ್ ತಿಂಗಳಿನಲ್ಲಿ ಭಾರತಲ್ಲಿ ಐಪಿಎಲ್ ಆರಂಭವಾಗಲಿದೆ. ಏಪ್ರಿಲ್ 9ರಿಂದ ಐಪಿಎಲ್ ಟೂರ್ನಿ ಆರಂಭವಾಗಲಿದ್ದು ಭಾರತದಲ್ಲಿಯೇ ಟೂರ್ನಿಯನ್ನು ಆಯೋಜನೆ ಮಾಡಲು ತೀರ್ಮಾನ ಕೈಗೊಳ್ಳಲಾಗಿದ್ದು ಅಂತಿಮ ಹಂತದ ಸಿದ್ಧತೆಗಳು ಟೂರ್ನಿಗಾಗಿ ನಡೆಯುತ್ತಿದೆ.
ನಾಯಕ ವಿರಾಟ್ ಕೊಹ್ಲಿ ಬಗ್ಗೆ ಹೇಳಿಕೆ ಕೊಟ್ಟ ಕನ್ನಡಿಗ ಪ್ರಸಿದ್ಧ್ ಕೃಷ್ಣ!
ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮೊದಲಿಗೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಂಡಿದ್ದು ಭಾರತ 3-1 ಅಂತರದಿಂದ ಟೆಸ್ಟ್ ಸರಣಿಯನ್ನು ವಶಪಡಿಸಿಕೊಂಡಿತ್ತು. ಬಳಿಕ ಟಿ20 ಸರಣಿಯಲ್ಲಿ ಭಾರತ 3-2 ಅಂತರದಿಂದ ಗೆಲುವು ಸಾಧಿಸಿದೆ. ಇನ್ನು ಮೂರು ಪಂದ್ಯಗಳ ಏಕದಿನ ಸರಣಿ ಬಾಕಿಯಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ.