ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಭಾರೀ ಹಿನ್ನೆಡೆಯನ್ನು ಅನುಭವಿಸಿದೆ. ಆದರೆ ಟೀಮ್ ಇಂಡಿಯಾ ನೀಡಿದ ಈ ಪ್ರದರ್ಶನದಿಂದಾಗಿ ತಂಡದ ಆಟಗಾರರ ಮೇಲೆ ನಕಾರಾತ್ಮಕ ಪರಿಣಾಮ ಬೀರಿಲ್ಲ ಎಂದು ಮೊಹಮ್ಮದ್ ಶಮಿ ಹೇಳಿಕೆ ನೀಡಿದ್ದಾರೆ. ಐದು ಪಂದ್ಯಗಳ ಸರಣಿ ಇದಾಗಿರುವುದರಿಂದಾಗಿ ಕುಗ್ಗುವ ಅವಶ್ಯಕತೆಯಿಲ್ಲ ಎಂದಿದ್ದಾರೆ ಭಾರತದ ಅನುಭವಿ ವೇಗಿ.
"ಮಾನಸಿಕವಾಗಿ ನಾವು ಕುಗ್ಗಿಲ್ಲ. ನಾವು ಸಾಕಷ್ಟು ಪಂದ್ಯಗಳನ್ನು ಮೂರು ದಿನಗಳಲ್ಲಿ ಮುಗಿಸಿದ್ದೇವೆ. ಕೆಲ ಪಂದ್ಯಗಳನ್ನು ನಾವು ಎರಡು ದಿನಗಳಲ್ಲಿಯೇ ಮುಗಿಸಿದ್ದೇವೆ. ಕೆಲ ಸಂದರ್ಭಗಳನ್ನು ನಾವು ಕೆಟ್ಟ ದಿನಗಳನ್ನು ಹೊಂದಿದ್ದಾಗ ಅಥವಾ ಶೀಘ್ರವಾಗಿ ಮೊದಲ ಇನ್ನಿಂಗ್ಸ್ನಲ್ಲಿ ಆಲೌಟ್ ಆಗಿದ್ದಾಗ ನಾವು ಸುದೀರ್ಘ ಕಾಲ ಫೀಲ್ಡಿಂಗ್ ನಡೆಸಬೇಕಾಗುತ್ತದೆ" ಎಂದಿದ್ದಾರೆ ಮೊಹಮ್ಮದ್ ಶಮಿ.
ಸರಣಿಯ ಮಧ್ಯ ಭಾಗದಲ್ಲಿ ಒಂದು ಕೆಟ್ಟ್ ದಿನದ ಪ್ರದರ್ಶನ ಯಾವ ರೀತಿಯಾಗಿ ನಕಾರಾತ್ಮಕವಾಗಿ ಪರಿಣಾಮ ಬೀರುತ್ತದೆ ಎಂಬ ಪ್ರಶ್ನೆಯನ್ನು ಶಮಿಗೆ ಕೇಳಲಾಗಿತ್ತು. ಇದಕ್ಕೆ ಶಮಿ ಈ ರೀತಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ. "ಕೆಲ ಸಂದರ್ಭಗಳಲ್ಲಿ ಇದು ಸಂಭವಿಸುತ್ತದೆ. ಆದರೆ ಆ ಕಾರಣಕ್ಕೆ ನಾವು ಕುಗ್ಗಿಹೋಗುವ ಅವಶ್ಯಲತೆಯಿಲ್ಲ. ಯಾಕೆಂದರೆ ಸರಣಿಯಲ್ಲಿ ಇನ್ನು ಕೂಡ ಎರಡು ಟೆಸ್ಟ್ ಪಂದ್ಯಗಳು ಬಾಕಿಯಿದೆ" ಎಂದು ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೊಹಮ್ಮದ್ ಶಮಿ ಹೇಳಿಕೆಯನ್ನು ನೀಡಿದ್ದಾರೆ.
2021ರ ಸೀಸನ್ ಮುಗಿಸಲು ಟೋಕಿಯೋ ಚಿನ್ನದ ಹುಡುಗ ನೀರಜ್ ಚೋಪ್ರಾ ನಿರ್ಧಾರ
ಹೆಡಿಂಗ್ಲೆ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆದರೆ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 78 ರನ್ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ನಡೆಸಿರುವ ಆತಿಥೇಯ ಇಂಗ್ಲೆಂಡ್ ಬ್ಯಾಟಿಂಗ್ನಲ್ಲಿಯೂ ಅದ್ಭುತ ಪ್ರದರ್ಶನ ನೀಡಿದ್ದಾರೆ. ನಾಯಕ ಜೋ ರೂಟ್ ಭಾರತದ ವಿರುದ್ಧ ಮತ್ತೊಂದು ಅದ್ಭುತ ಇನ್ನಿಂಗ್ಸ್ ಕಟ್ಟುವಲ್ಲಿ ಯಶಸ್ವಿಯಾಗಿದ್ದಯು ಸರಣಿಯಲ್ಲಿ ಮೂರನೇ ಶತಕ ಸಿಡಿಸಿದ್ದಾರೆ. 121 ರನ್ಗಳನ್ನು ಗಳಿಸಿರುವ ಜೋ ರೂಟ್ ಬಳಿಕ ಔಟಾದರು. ಎರಡನೇ ದಿನದಾಟದ ಅಂತ್ಯಕ್ಕೆ 423 ರನ್ಗಳಿಗೆ 8 ವಿಕೆಟ್ ಕಳೆದುಕೊಂಡಿರುವ ಇಂಗ್ಲೆಂಡ್ ತಂಡ 345 ರನ್ಗಳ ಮುನ್ನಡೆಯನ್ನು ಸಾಧಿಸಿದೆ.
"ಸರಣಿಯಲ್ಲಿ ನಾವೀಗ 1-0 ಅಂತರದಿಂದ ಮುನ್ನಡೆಯಲ್ಲಿದ್ದೇವೆ. ಹೀಗಾಗಿ ನಕಾರಾತ್ಮಕವಾಗಿ ಯೋಚನೆ ಮಾಡುವ ಅವಶ್ಯಕತೆಯೇ ಇಲ್ಲ. ಒಂದೇ ಒಂದು ಸಂಗತಿಯೆಂದರೆ ನೀವು ನಿಮ್ಮಲ್ಲಿರುವ ಕೌಶಲ್ಯದ ಬಗ್ಗೆ ನಂಬಿಕೆಯಿರಿಸಿಕೊಳ್ಳಬೇಕು ಹಾಗೂ ನಿಮಗೆ ನೀವು ಬೆಂಬಲವನ್ನು ನೀಡಬೇಕು" ಎಂದಿದ್ದಾರೆ ಮೊಹಮ್ಮದ್ ಶಮಿ.
ಇನ್ನು ಇದೇ ಸಂದರ್ಭದಲ್ಲಿ ಅವರು ಎದುರಾಳಿ ತಂಡದ ಬ್ಯಾಟ್ಸ್ಮನ್ಗಳು ಬೃಹತ್ ಜೊತೆಯಾಟವನ್ನು ನಡೆಸುತ್ತಿದ್ದಾಗ ಅವರನ್ನು ಬೇರ್ಪಡಿಸುವುದು ಬೌಲರ್ ಆಗಿ ನಿಮ್ಮ ಜವಾಬ್ಧಾರಿಯಾಗಿದೆ. ಹೀಗಾಗಿ ನೀವು ಎದುರಾಳಿ ಬ್ಯಾಟ್ಸ್ಮನ್ನನ್ನು ಹೇಗೆ ಔಟ್ ಮಾಡಬೇಕೆಂದು ಯೋಜನೆಗಳನ್ನು ರೂಪಿಸಿಕೊಳ್ಳಬೇಕಾಗುತ್ತದೆ" ಎಂದಿದ್ದಾರೆ ಮೊಹಮ್ಮದ್ ಶಮಿ.
ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ಬ್ಯಾಟ್ಸ್ಮನ್ಗಳು ಅಕ್ಷರಶಃ ಭಾರತದ ಬೌಲಿಂಗ್ ಪಡೆಯ ಮೇಲೆ ಸವಾರಿ ಮಾಡಿದ್ದಾರೆ. ಅದರಲ್ಲೂ ಸಾಕಷ್ಟು ಟೀಕೆಗೆ ಗುರಿಯಾಗಿದ್ದ ಅಗ್ರ ಕ್ರಮಾಂಕದ ದಾಂಡಿಗರು ಈ ಪಂದ್ಯದಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಮೊದಲ ನಾಲ್ಕು ಬ್ಯಾಟ್ಸ್ಮನ್ಗಳು ಈ ಪಂದ್ಯದಲ್ಲಿ 50+ ರನ್ಗಳ ಸಾಧನೆ ಮಾಡಿ ಭಾರತ ತಂಡಕ್ಕೆ ಆಘಾತ ನೀಡಿದ್ದಾರೆ. ಆರಂಭಿಕ ಆಟಗಾರ ರೋರಿ ಬರ್ನ್ಸ್ 61 ರನ್ಗಳಿಗೆ ಔಟಾದರೆ ಹಸೀಬ್ ಹಮೀದ್ 68 ರನ್ಗಳ ಕೊಡುಗೆ ನೀಡಿದರು. ಡೇವಿಡ್ ಮಲನ್ 70 ಹಾಗೂ ನಾಯಕ ಜೋ ರೂಟ್ 121 ರನ್ಗಳನ್ನು ಸೇರಿಸುವ ಮೂಲಕ ಇಂಗ್ಲೆಂಡ್ ಬೃಹತ್ ಮೊತ್ತಕ್ಕೆ ಕಾರಣರಾದರು.
ಭಾರತ ಹಾಗೂ ಇಂಗ್ಲೆಂಡ್ ಆಡುವ ಬಳಗ ಟೀಮ್ ಇಂಡಿಯಾ ಆಡುವ ಬಳಗ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ,
ಇಂಗ್ಲೆಂಡ್ ಆಡುವ ಬಳಗ: ಜೋ ರೂಟ್ (ನಾಯಕ), ರೋರಿ ಬರ್ನ್ಸ್, ಹಸೀಬ್ ಹಮೀದ್, ಡೇವಿಡ್ ಮಲನ್, ಜಾನಿ ಬೈರ್ಸ್ಟೊವ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಮೊಯೀನ್ ಅಲಿ, ಸ್ಯಾಮ್ ಕರನ್, ಕ್ರೇಗ್ ಓವರ್ಟನ್, ಜೇಮ್ಸ್ ಆಂಡರ್ಸನ್, ಒಲ್ಲಿ ರಾಬಿನ್ಸನ್,