ಬೆಂಗಳೂರು ಸೆಪ್ಟೆಂಬರ್ 20: ಭಾರತ ಟಿ20 ಕ್ರಿಕೆಟ್ ತಂಡದ ನಾಯಕ ಸ್ಥಾನದಿಂದ ಕೆಳಗಿಳಿಯುವುದಾಗಿ ಹೇಳಿದ್ದ ವಿರಾಟ್ ಕೊಹ್ಲಿ, ಇದೀಗ ಈ ಬಾರಿ ಐಪಿಎಲ್ ಟೂರ್ನಿಯ ಬಳಿಕ ಆರ್ಸಿಬಿ ನಾಯಕತ್ವದಿಂದಲೂ ಕೆಳಗಿಳಿಯುವುದಾಗಿ ಹೇಳಿದ್ದಾರೆ. 2013ರ ಆವೃತ್ತಿಯಿಂದ ಆರ್ಸಿಬಿ ತಂಡದ ನಾಯಕನಾಗಿರುವ ವಿರಾಟ್ ಕೊಹ್ಲಿ ಈ ನಿರ್ಧಾರ ತೆಗೆದುಕೊಂಡಿರುವುದು ಆರ್ಸಿಬಿ ಅಭಿಮಾನಿಗಳ ಪಾಲಿಗೆ ಬೇಸರ ಮೂಡಿಸಿದೆ. ಆದರೆ ಇದೇ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ತಾನು ಐಪಿಎಲ್ನಲ್ಲಿ ಅಂತಿಮ ಪಂದ್ಯದವರೆಗೂ ಆರ್ಸಿಬಿ ಪರವಾಗಿಯೇ ಆಡುತ್ತೇನೆ ಎಂದು ಹೇಳುವ ಮೂಲಕ ಅಭಿಮಾನಿಗಳ ಆರ್ಸಿಬಿ ತಂಡದ ಮೇಲೆ ತಾನು ಹೊಂದಿರುವ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
ವಿರಾಟ್ ಕೊಹ್ಲಿ ತೆಗೆದುಕೊಂಡಿರುವ ಈ ನಿರ್ಧಾರಕ್ಕೆ ಆರ್ ಸಿ ಬಿ ಅಭಿಮಾನಿಗಳು ನಾನಾ ವೇದಿಕೆಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣ 'ಕೂ' ನಡೆಸಿದ ಅಭಿಯಾನದಲ್ಲಿ ಸಾಕಷ್ಟು ಭಿನ್ನವಾದ ಅಭಿಪ್ರಾಯಗಳು ವ್ಯಕ್ತವಾಗಿದೆ.
'RCB ತಂಡದ ನಾಯಕತ್ವಕ್ಕೆ ವಿದಾಯ ಹೇಳಿದ ಕೊಹ್ಲಿ ನಡೆ ಸ್ವಾಗತಿಸೋಣ. ಕಾರಣ ವಿಭಿನ್ನ ರೀತಿಯ ತಂತ್ರಗಾರಿಕೆ ನಮ್ಮ ತಂಡಕ್ಕೆ ಸದ್ಯ ಅತ್ಯಾವಶ್ಯಕ.. ವಿರಾಟ್ ನಾಯಕತ್ವ ಪ್ರಶ್ನಿಸುವ ಮಾತೇ ಇಲ್ಲ ಅವರೊಬ್ಬ ಆಕ್ರಮಣಕಾರಿ ನಾಯಕ, ಅದೃಷ್ಟ ಕೆಲವೊಮ್ಮೆ ಅವರ ಪರ ಇರದೆ ಕಾರಣ ಟ್ರೋಪಿ ಗೆಲ್ಲದಿರಬಹುದು ಆದ್ರೆ ತಂಡದಲ್ಲಿ ಅವರಿಂದ ಇತರರು ಉತ್ಸಾಹದಿಂದ ಇರುವಂತೆ ಮಾಡಿದ್ದು ಸತ್ಯ.. ವಿರಾಟ್ ಈ ಬಾರಿ ಕಪ್ ನಮ್ಮದೇ.. ನಾನೊಬ್ಬ ವಿರಾಟ್ ಅಭಿಮಾನಿ' ಎಂದು ಶಾಂತ ಗೌಡ ಎನ್ನುವವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬೇರೆ ದಾರಿಯೇ ಇರಲಿಲ್ಲ!
ಭಾರತ ತಂಡದ T20 ನಾಯಕತ್ವಕ್ಕೆ ಏಕದಿನ, ಟೆಸ್ಟ್ ಆಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಸಮಜಾಯುಷಿ ನೀಡಿ ಹೊರಬಂದ ಮೇಲೆ, RCB ಯ T20 ನಾಯಕತ್ವ ವಹಿಸಿದರೆ ಬೂಟಾಟಿಕೆ ಮತ್ತು ಉಡಾಫೆ ಎಂದೆನಿಸುವುದಿಲ್ಲವೇ?' ಎಂದು ಮಂಜುನಾಥ್ ಎನ್ನುವವರು ಹೇಳಿದ್ದಾರೆ.
#ವಿರಾಟ್_ಕೊಹ್ಲಿ ಅವರು ರಾಜೀನಾಮೆ ಕೊಡಲು ಅವರದೇ ಆದ ಕೆಲವು ವಯುಕ್ತಿಕ ಕಾರಣಗಳಿರುತ್ತವೆ, ಮೊದಲಾಗಿ ನಮ್ಮ ಕ್ರಿಕೆಟ್ ತಂಡವೂ ಬಹಳ ಹಿಂದಿನಿಂದಲೂ ಒಬ್ಬ ಆಟಗಾರನ ಮೇಲೆ ಹೆಚ್ಚು ಅವಲಂಬಿತ ವಾಗಿರುವುದು ಸರ್ವೇ ಸಾಮಾನ್ಯ ಜೊತೆಗೆ ನಿಜ ಸಂಗತಿಯು ಸಹ. ಮುಂದೆಯಾದರೂ ನಮ್ಮ ಕ್ರಿಕೆಟ್ ತಂಡಕ್ಕೆ ಹೊಸ ಬಲಾಢ್ಯ ಶಕ್ತಿಯುತ ಪ್ರಭಲ ನಾಯಕ ತಂಡವನ್ನು ಮುನ್ನೆಡಸಲಿ ಹಾಗು ಪ್ರತಿಯೊಬ್ಬ ಆಟಗಾರನು ತಂಡದ ಗೆಲುವಿನ ರುವಾರಿ ಯಾಗಿರಲಿ ಎಂದು ಎಲ್ಲರೂ ಆಶಿಸೋಣ' ಎಂದು ಶಿವು ಸರ್ಜಾ ಎನ್ನುವವರು ಕೂ ಮಾಡಿದ್ದಾರೆ.
'ಅಲಂಕಾರಿಕವಾಗಿ ಹೇಳುವುದಾದರೆ ಒಂದು ಯುಗದ ಅಂತ್ಯವಾಗಿದೆ. RCB ಮತ್ತು ಕೊಹ್ಲಿ ಎರಡು ಸಮಾನಾರ್ಥಕ ಪದಗಳಾಗಿದ್ದವು. ಇಷ್ಟರವರೆಗೆ ನಾಯಕನ ಪಟ್ಟವನ್ನು ಸಮರ್ಥವಾಗಿ ನಿರ್ವಹಿಸಿಕೊಂಡು ಬಂದಿದ್ದ ಕೊಹ್ಲಿಗೆ ಗೌರವಪೂರ್ಣ ವಿದಾಯ.' ಎಂದು ಕಾರ್ತಿಕ್ ರಾವ್ ಕೂ ಮಾಡಿದ್ದಾರೆ.
'ನಾವು RCB ಯವರು ಎಷ್ಟು ಮಾನಸಿಕ ಅಸ್ವಸ್ಥರಾಗಿದ್ದೀವಿ ಅಂದ್ರೆ ಕೊಹ್ಲಿ ರಾಜೀನಾಮೆ ಕೊಟ್ಟಮೇಲಾದರೂ ಕಪ್ ಗೆಲ್ತಿವಾ ಅಂತ ಚಿಂತಿಸತೊಡಗಿದ್ದೀವಿ. ಆ ಚಿಂತೆಯ ನಡುವೆ ಕೊಹ್ಲಿ ಸರಿದಿದ್ದು ದುಃಖಕರ' ಎಂದಿದ್ದಾರೆ ಅದ್ವೈತ್.