ಕೈ ಬಂದಿದ್ದು ಬಾಯಿಗೆ ಬರಲಿಲ್ಲ ಎಂಬಂತಾಗಿದೆ ತಂಡದ ಸ್ಥಿತಿ
ಪ್ರಸಕ್ತ ಆವೃತ್ತಿಯ ಐಪಿಎಎಲ್ ಟೂರ್ನಿಯ ಮೊದಲನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕಠಿಣ ಹೋರಾಟ ನಡೆಸಿತಾದರೂ ಪಂಜಾಬ್, ಅಂತಿಮವಾಗಿ ಸೂಪರ್ ಓವರ್ನಲ್ಲಿ ಸೋಲು ಅನುಭವಿಸಿತ್ತು. ನಂತರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗೆಲುವು ಸಾಧಿಸಿತ್ತು. ಆದರೆ ಮೂರನೇ ಪಂದ್ಯದಲ್ಲಿ 223 ರನ್ಗಳಿಸಿದರೂ ತಂಡವು ಡಿಫೆಂಡ್ ಮಾಡಿಕೊಳ್ಳಲು ಸಾಧ್ಯವಾಗದೇ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲು ಅನುಭವಿಸಿತ್ತು.
ಮುಂಬೈ ವಿರುದ್ಧ ಮುಗ್ಗರಿಸಿದ ರಾಹುಲ್ ಪಡೆ
ಗುರುವಾರ ರಾತ್ರಿ ಮುಂಬೈ ಇಂಡಿಯನ್ಸ್ ವಿರುದ್ಧ 48 ರನ್ಗಳ ಭಾರಿ ಅಂತರದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಸೋಲು ಅನುಭವಿಸಿತ್ತು. ಒಟ್ಟು ನಾಲ್ಕು ಪಂದ್ಯಗಳಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಕೇವಲ ಒಂದೇ ಪಂದ್ಯದಲ್ಲಿ ಗೆದ್ದು ಅಂಕ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಕುಸಿದಿದೆ.
ಅಬು ಧಾಬಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್ಗಳಲ್ಲಿ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡು 191 ರನ್ಗಳನ್ನು ಗಳಿಸಿತ್ತು. ಮುಂಬೈ ಪರ ಅದ್ಭುತ ಪ್ರದರ್ಶನ ತೋರಿದ ರೋಹಿತ್ ಶರ್ಮಾ 45 ಎಸೆತಗಳಲ್ಲಿ 70 ರನ್ಗಳನ್ನು ಸಿಡಿಸಿದರು. ಕೀರನ್ ಪೊಲಾರ್ಡ್ ಹಾಗೂ ಹಾರ್ದಿಕ್ ಪಾಂಡ್ಯ ಜೋಡಿ ಕೊನೆಯ 23 ಎಸೆತಗಳಲ್ಲಿ 67 ರನ್ಗಳನ್ನು ಚಿಚ್ಚಿದ್ದರು. ಪರಿಣಾಮ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 191 ರನ್ ಕಲೆಹಾಕಿತು.
ಹುಸಿಯಾಯ್ತು ಪಂಜಾಬ್ನ ಬಲಿಷ್ಠ ಬ್ಯಾಟಿಂಗ್ ವಿಭಾಗದ ನಿರೀಕ್ಷೆ
ಮುಂಬೈ ನೀಡಿದ ಗುರಿ ಹಿಂಬಾಲಿಸಿದ ಕಿಂಗ್ಸ್ ಇಲೆವೆನ್ ಪಂಜಾಬ್ ನಿಗದಿತ 20 ಓವರ್ಗಳಿಗೆ ಎಂಟು ವಿಕೆಟ್ಗಳನ್ನು ಕಳೆದುಕೊಂಡು 143 ರನ್ಗಳಿಗೆ ಸೀಮಿತವಾಯಿತು. ಪವರ್ ಪ್ಲೇನಲ್ಲಿ ಮೊದಲ ವಿಕೆಟ್ ಕಳೆದುಕೊಂಡ ಬಳಿಕ ಪಂಜಾಬ್ ತಂಡ ಮತ್ತೆ ಚೇತರಿಸಿಕೊಳ್ಳಲಿಲ್ಲ. ಕಳೆದ ಪಂದ್ಯಗಳಲ್ಲಿ ಮಿಂಚಿದ್ದ ಕೆ.ಎಲ್ ರಾಹುಲ್(17) ಹಾಗೂ ಮಯಾಂಕ್ ಅಗರ್ವಾಲ್(25) ಕಡಿಮೆ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದರು.
ಮಧ್ಯಮ ಕ್ರಮಾಂಕದಲ್ಲಿ ಗ್ಲೆನ್ ಮ್ಯಾಕ್ಸ್ವೆಲ್(11) ಹಾಗೂ ಸರ್ಫರಾಜ್ ಖಾನ್(7) ನಿರಾಸೆ ಹುಸಿಗೊಳಿಸಿದರು. ಆದರೆ, ನಿಕೋಲಸ್ ಪೂರನ್(44) ಹಾಗೂ ಕೆ ಗೌತಮ್ (22*) ಕಠಿಣ ಹೋರಾಟ ನಡೆಸಿತಾದರೂ ಅಂತಿಮವಾಗಿ ಪಂಜಾಬ್ 48 ರನ್ಗಳಿಂದ ಸೋಲು ಅನುಭವಿಸಿತು.
|
ಪಂದ್ಯದ ಸೋಲಿನ ಬಳಿಕ ಅನಿಲ್ ಕುಂಬ್ಳೆಗೆ ಅಭಿಮಾನಿಗಳ ತರಾಟೆ
ಮುಂಬೈ ಇಂಡಿಯನ್ಸ್ ವಿರುದ್ಧ ಪಂಜಾಬ್ ಸೋಲಿನ ಬಳಿಕ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅನಿಲ್ ಕುಂಬ್ಳೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮಂದೀಪ್ ಸಿಂಗ್ ಅವರ ಬದಲು ಕರುಣ್ ನಾಯರ್ ಅವರಿಗೆ ಆಯ್ಕೆ ಮಾಡುತ್ತಿರುವ ಕ್ರಮವನ್ನು ಅಭಿಮಾನಿಗಳು ಪ್ರಶ್ನಿಸಿದ್ದಾರೆ. ಜೊತೆಗೆ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಅವರು, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪ್ಲೇಯಿಂಗ್ ಇಲೆವೆನ್ನಲ್ಲಿ ಕರ್ನಾಟಕ ಆಟಗಾರರ ಪರವಾಗಿದ್ದಾರೆ ಎಂದು ಹಲವು ಅಭಿಮಾನಿಗಳು ಟ್ವಿಟರ್ನಲ್ಲಿ ಆರೋಪಿಸಿದ್ದಾರೆ.
|
ಕರುಣ್ ನಾಯರ್ ಮಿಂಚದಿದ್ರೂ , ಮಂದೀಪ್ ಸಿಂಗ್ಗೆ ಸಿಕ್ಕಿಲ್ಲ ಅವಕಾಶ!
ಮಂದೀಪ್ ಸಿಂಗ್ ಅವರ ಬದಲು ಕರುಣ್ ನಾಯರ್ ಅವರಿಗೆ ಪದೇ-ಪದೆ ಸ್ಥಾನ ನೀಡುತ್ತಿರುವ ಅನಿಲ್ ಕುಂಬ್ಳೆ ನಿರ್ಧಾರದಿಂದ ಪಂಜಾಬ್ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ. ಜೊತೆಗೆ ನಾಯಕ ಕೆ.ಎಲ್ ರಾಹುಲ್ ಕುರಿತಾಗಿಯೂ ಕಿಡಿ ಕಾರಿದ್ದಾರೆ. ಮಂದೀಪ್ ಸಿಂಗ್ ಇನ್ನೂ ಪ್ರಸಕ್ತ ಆವೃತ್ತಿಯಲ್ಲಿ ಒಂದೂ ಪಂದ್ಯದಲ್ಲಿ ಆಡಿಲ್ಲ. ಆದರೆ ಕರುಣ್ ನಾಯರ್ ಆಡಿರುವ ಮೂರು ಇನಿಂಗ್ಸ್ನಲ್ಲಿ ಕ್ರಮವಾಗಿ 1, 15* ಮತ್ತು 0 ಗಳಿಸಿದ್ದಾರೆ. ಒಟ್ಟು ನಾಲ್ಕು ಪಂದ್ಯಗಳಿಂದ 16ರನ್ ದಾಖಲಾಗಿದೆ.
ಇನ್ನು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಕರುಣ್ ನಾಯರ್ ಶೂನ್ಯಕ್ಕೆ ಔಟ್ ಆಗುತ್ತಿದ್ದಂತೆ, ಅಭಿಮಾನಿಗಳು ಟ್ವಿಟರ್ನಲ್ಲಿ ತಮ್ಮ ಈ ಆಕ್ರೋಶ ಹೊರಹಾಕಿದ್ದಾರೆ.
|
ಕೆ. ಗೌತಮ್ ಆಯ್ಕೆಗೂ ವಿರೋಧ
ನೆಟಿಜನ್ಗಳು ಸ್ಪಿನ್ನರ್ ಕೆ. ಗೌತಮ್ ಆಯ್ಕೆ ಕುರಿತು ಪ್ರಶ್ನಿಸಿದ್ದಾರೆ. ಮಂಬೈ ಇಂಡಿಯನ್ಸ್ ವಿರುದ್ಧ ಕೆ. ಗೌತಮ್ ಇಶಾನ್ ಕಿಶನ್ ನಿರ್ಣಾಯಕ ವಿಕೆಟ್ ಪಡೆದು ಮೊದಲ ಮೂರು ಓವರ್ಗಳಲ್ಲಿ ಅವರು ಕೇವಲ 20 ರನ್ಗಳನ್ನು ಮಾತ್ರ ನೀಡಿದರು. ಆದರೆ ನಂತರ ನಾಯಕನು ಕೊನೆಯ ಓವರ್ ಬೌಲಿಂಗ್ ಮಾಡುವ ಜವಾಬ್ದಾರಿಯನ್ನು ಗೌತಮ್ಗೆ ಕೊಟ್ಟರು ನಂತರ ಲೆಕ್ಕಚಾರಗಳೆಲ್ಲಾ ತಲೆಕೆಳಗಾದವು.
ಮೊದಲ ಬಾಲ್ ಡಾಟ್ ಆದ್ರೂ ಕೂಡ, ನಂತರ ಹಾರ್ದಿಕ್ ಮತ್ತು ಪೊಲಾರ್ಡ್ ನಾಲ್ಕು ಸಿಕ್ಸರ್ಗಳಿಗೆ ಹೊಡೆದರು. ಗೌತಮ್ ಅಂತಿಮ ಓವರ್ನಲ್ಲಿ 25 ರನ್ಗಳನ್ನು ಬಿಟ್ಟುಕೊಟ್ಟರು ಮತ್ತು 4-0-45-1 ಸ್ಪೆಲ್ನೊಂದಿಗೆ ಕೊನೆಗೊಂಡರು.