1. WTC ಫೈನಲ್ ಸೋಲು
ಈ ವರ್ಷ 2 ಐಸಿಸಿ ಟೂರ್ನಿಗಳು ನಡೆದವು. ಅದರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಉದ್ಘಾಟನಾ ಆವೃತ್ತಿಯ ಫೈನಲ್ ಮೊದಲಿಗೆ ನಡೆಯಿತು. ಈ ಮಹತ್ವದ ಪಂದ್ಯದಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ತಂಡವನ್ನು ಆಂಗ್ಲರ ನೆಲದಲ್ಲಿ ಎದುರಿಸಿತು. ಹೀಗೆ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಚೊಚ್ಚಲ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಕಿವೀಸ್ ವಿರುದ್ಧ ಟೀಮ್ ಇಂಡಿಯಾ ಸೋಲನ್ನು ಕಂಡಿತು. ಹೀಗೆ ಈ ವರ್ಷದಲ್ಲಿ ಐಸಿಸಿ ಟ್ರೋಫಿ ಎತ್ತಿ ಹಿಡಿಯುವ ಅವಕಾಶವನ್ನು ಟೀಮ್ ಇಂಡಿಯಾ ಮೊದಲ ಬಾರಿಗೆ ಕೈ ತಪ್ಪಿಸಿಕೊಂಡಿತು.
2. ಟಿ ಟ್ವೆಂಟಿ ವಿಶ್ವಕಪ್ನಲ್ಲಿ ಕಳಪೆ ಪ್ರದರ್ಶನ
ನ್ಯೂಜಿಲೆಂಡ್ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಸೋಲುವುದರ ಮೂಲಕ ಐಸಿಸಿ ಟ್ರೋಫಿಯನ್ನು ಎತ್ತಿ ಹಿಡಿಯುವ ಅವಕಾಶವನ್ನು ಕೊನೆ ಹಂತದಲ್ಲಿ ಕೈತಪ್ಪಿಸಿಕೊಂಡ ಟೀಮ್ ಇಂಡಿಯಾ ನಂತರ ನಡೆದ ಮತ್ತೊಂದು ಐಸಿಸಿ ಟೂರ್ನಿಯಾದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿಯೂ ಸಹ ಹೀನಾಯ ಪ್ರದರ್ಶನವನ್ನು ನೀಡಿತು. ಟೂರ್ನಿಯ ಲೀಗ್ ಹಂತದ ಮೊದಲೆರಡು ಪಂದ್ಯಗಳಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧ ಸೋತ ಟೀಂ ಇಂಡಿಯಾ ಸೆಮಿಫೈನಲ್ ಹಂತಕ್ಕೆ ಅರ್ಹತೆ ಪಡೆದುಕೊಳ್ಳದೇ ಟೂರ್ನಿಯಿಂದ ಲೀಗ್ ಹಂತದಲ್ಲಿಯೇ ಹೊರಬಿತ್ತು. ಹೀಗೆ ಈ ವರ್ಷ ಎರಡನೇ ಐಸಿಸಿ ಟೂರ್ನಿಯಲ್ಲಿ ಟೀಮ್ ಇಂಡಿಯಾ ಮುಗ್ಗರಿಸಿತು.
3. ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ತೆಗೆದು ಹಾಕಿದ್ದು
ಮೊದಲಿಗೆ ವಿರಾಟ್ ಕೊಹ್ಲಿ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ತ್ಯಜಿಸುವುದಾಗಿ ಸ್ವಇಚ್ಛೆಯಿಂದ ನಿರ್ಧಾರವನ್ನು ಕೈಗೊಂಡರು. ಭಾರತ ಏಕದಿನ ಮತ್ತು ಟೆಸ್ಟ್ ತಂಡಗಳ ನಾಯಕತ್ವದತ್ತ ಹೆಚ್ಚಿನ ಗಮನ ಹರಿಸಲು ಈ ನಿರ್ಧಾರವನ್ನು ಕೈಗೊಳ್ಳುತ್ತಿರುವುದಾಗಿ ವಿರಾಟ್ ಕೊಹ್ಲಿ ಹೇಳಿಕೊಂಡಿದ್ದರು. ಆದರೆ ನಂತರದ ದಿನಗಳಲ್ಲಿ ಬಿಸಿಸಿಐ ವಿರಾಟ್ ಕೊಹ್ಲಿ ಅವರನ್ನು ಭಾರತ ಏಕದಿನ ತಂಡದ ನಾಯಕನ ಸ್ಥಾನದಿಂದಲೂ ಕೂಡ ತೆಗೆದುಹಾಕಿತು. ಹೀಗೆ ದಿಢೀರನೆ ವಿರಾಟ್ ಕೊಹ್ಲಿ ಅವರನ್ನು ಭಾರತ ಏಕದಿನ ತಂಡದ ನಾಯಕತ್ವದಿಂದ ತೆಗೆದು ಹಾಕಿದ್ದು ಭಾರೀ ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಯಿತು.
4. ಕೊಹ್ಲಿ ಮತ್ತು ಗಂಗೂಲಿ ನಡುವಿನ ಶೀತಲ ಸಮರ
ವಿರಾಟ್ ಕೊಹ್ಲಿಯನ್ನು ಭಾರತ ಏಕದಿನ ತಂಡದ ನಾಯಕತ್ವದಿಂದ ತೆಗೆದು ಹಾಕಿದ್ದರ ಕುರಿತು ಹಲವಾರು ವಿವಾದಗಳು ಎದ್ದವು. ಮೊದಲಿಗೆ ವಿರಾಟ್ ಕೊಹ್ಲಿ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ಬಿಡಲು ಮುಂದಾದಾಗ ಬಿಸಿಸಿಐ ವಿರೋಧವನ್ನು ವ್ಯಕ್ತಪಡಿಸಿತ್ತು ಆದರೂ ಕೇಳದ ಕೊಹ್ಲಿ ತಮ್ಮ ಇಚ್ಛೆಯಂತೆಯೇ ಮುಂದುವರಿದರು, ವೈಟ್ ಬಾಲ್ ಕ್ರಿಕೆಟ್ ಮಾದರಿಗಳಲ್ಲಿ ಟೀಮ್ ಇಂಡಿಯಾಗೆ ಓರ್ವನೇ ನಾಯಕನಿರಬೇಕು ಎನ್ನುವ ಉದ್ದೇಶದಿಂದಾಗಿ ವಿರಾಟ್ ಕೊಹ್ಲಿ ಭಾರತ ಏಕದಿನ ತಂಡದ ನಾಯಕತ್ವವನ್ನು ಕಳೆದುಕೊಂಡರು ಎಂದು ಸೌರವ್ ಗಂಗೂಲಿ ಸ್ಪಷ್ಟನೆ ನೀಡಿದರು. ಆದರೆ ಈ ಹೇಳಿಕೆಗಳನ್ನೆಲ್ಲ ತಳ್ಳಿ ಹಾಕಿದ ವಿರಾಟ್ ಕೊಹ್ಲಿ ತಾನು ಟಿ ಟ್ವೆಂಟಿ ತಂಡದ ನಾಯಕತ್ವವನ್ನು ತ್ಯಜಿಸಲು ನಿರ್ಧಾರ ಕೈಗೊಂಡಾಗ ಬಿಸಿಸಿಐನಿಂದ ಯಾವುದೇ ಪ್ರತಿರೋಧ ವ್ಯಕ್ತವಾಗಲಿಲ್ಲ ಹಾಗೂ ಭಾರತ ಏಕದಿನ ತಂಡದ ನಾಯಕತ್ವದಿಂದ ತನ್ನನ್ನು ಕೆಳಗಿಳಿಸುವ 90 ನಿಮಿಷಗಳ ಮುಂಚೆಯಷ್ಟೇ ತನಗೆ ವಿಷಯವನ್ನು ಬಿಸಿಸಿಐ ತಿಳಿಸಿತ್ತು ಎಂದು ಕೂಡ ವಿರಾಟ್ ಕೊಹ್ಲಿ ಹೇಳಿಕೊಂಡರು. ಹೀಗೆ ವಿರಾಟ್ ಕೊಹ್ಲಿ ಬಿಸಿಸಿಐ ವಿರುದ್ಧ ನೇರವಾದ ಹೇಳಿಕೆಗಳನ್ನು ನೀಡಿದ್ದು ಇತ್ತೀಚೆಗಷ್ಟೇ ಭಾರತ ಕ್ರಿಕೆಟ್ ಕುರಿತು ಉಂಟಾದ ದೊಡ್ಡ ವಿವಾದ ಎನ್ನಬಹುದು.