ತಾಳ್ಮೆಯಿಂದ ಇರಲಿ ಗವಾಸ್ಕರ್ ಮನವಿ
ಭಾರತ ತಂಡ ದಕ್ಷಿಣ ಆಪ್ರಿಕಾ ವಿರುದ್ಧ ಅನುಭವಿಸಿದ ಸೋಲಿನ ಬಗ್ಗೆ ಸುನಿಲ್ ಗವಾಸ್ಕರ್ ಖಾಸಗಿ ವಾಹಿನಿಯಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಸುನಿಲ್ ಗವಾಸ್ಕರ ಅಭಿಮಾನಿಗಳು ತಾಳ್ಮೆಯಿಂದ ಇದ್ದು ಸರಣಿ ಅಂತ್ಯದವರೆಗೂ ಕಾಯುವಂತೆ ಮನವಿ ಮಾಡಿಕೊಂಡಿದ್ದಾರೆ. ಇನ್ನು ನಾಯಕತ್ವ ಬದಲಾವಣೆಯ ಈ ಸಂದರ್ಭದಲ್ಲಿ ಅಭಿಮಾನಿಗಳು ತಂಡಕ್ಕೆ ಬೆಂಬಲವನ್ನು ನೀಡಬೇಕು ಎಂದಿದ್ದಾರೆ. ಆದರೆ ಈ ಸಂದರ್ಭದಲ್ಲಿ ಭಾರತ ಏಕದಿನ ತಂಡದಲ್ಲಿರುವ ಕೊರತೆಯ ಬಗ್ಗೆ ಬೊಟ್ಟು ಮಾಡಿದರು. ಈ ಕಾರಣದಿಂದಾಗಿಯೇ ಭಾರತ ತಂಡ ಸಮತೋಲನವನ್ನು ಕಳೆದುಕೊಳ್ಳುತ್ತಿದೆ ಎಂದಿದ್ದಾರೆ.
ಐಸಿಸಿ ಟೂರ್ನಿಗಳಲ್ಲಿ ಹಿನ್ನಡೆಗೂ ಇದೇ ಕಾರಣ
ಭಾರತ ತಂಡ ಐಸಿಸಿ ಟೂರ್ನಮೆಂಟ್ಗಳಲ್ಲಿ ನಿರಾಸೆಗೊಳ್ಳುವುದಕ್ಕೆ ಒಂದೇ ಒಂದು ಕಾರಣವಿದೆ. 1983 ಹಾಗೂ 2011ರ ವಿಶ್ವಕಪ್ ಹಾಗೂ 1985ರ ವಿಶ್ವ ಚಾಂಪಿಯನ್ಶಿಪ್ನ ಗೆದ್ದ ಬಾರತ ತಂಡವನ್ನು ನೀವು ಗಮನಿಸಿದರೆ ಆ ತಂಡಗಳಲ್ಲಿ ಅದ್ಭುತವಾದ ಆಲ್ರೌಂಡರ್ಗಳು ಇದ್ದರು. ಸಾಕಷ್ಟು ಬ್ಯಾಟರ್ಗಳು ಬೌಲಿಂಗ್ ಕೂಡ ನಡೆಸುವ ಸಾಮರ್ಥ್ಯವನ್ನು ಹೊಂದಿದ್ದರು. 6-8 ಮಂದಿ ಬೌಲರ್ಗಳು ಬೌಲಿಂಗ್ಗೆ ಲಭ್ಯವಿರುತ್ತಿದ್ದರು. ಇದು ತಂಡದ ಯಶಸ್ಸಿಗೆ ಮಹತ್ತರವಾದ ಕಾರಣವಾಗಿತ್ತು ಎಂದಿದ್ದಾರೆ ಸುನಿಲ್ ಗವಾಸ್ಕರ್.
ಭಾರತ ತಂಡಕ್ಕೆ ಕಾಡುತ್ತಿದೆ ಈ ಕೊರತೆ
"ಯುವರಾಜ್ ಸಿಂಗ್, ಸುರೇಶ್ ರೈನಾ ಅವರಂತಾ ಬ್ಯಾಟರ್ಗಳು ಬೌಲಿಂಗ್ನಲ್ಲಿಯೂ ಅದ್ಭುತ ಪ್ರದರ್ಶನ ನೀಡುತ್ತಿದ್ದರು. ಕಳೆದ ಎರಡ್ಮೂರು ವರ್ಷಗಳಲ್ಲಿ ಭಾರತಕ್ಕೆ ಈ ಅಂಶ ಬಹುವಾಗಿ ಕಾಡುತ್ತಿದೆ. ಇದರ ಪರಿಣಾಮವಾಗಿ ನಾಯಕನಿಗೆ ಬೌಲಿಂಗ್ ವಿಚಾರದಲ್ಲಿ ಹೆಚ್ಚಿನ ಆಯ್ಕೆಗಳು ಇರುವುದಿಲ್ಲ. ಇದು ತಂಡದ ಸಮತೋಲನಕ್ಕೆ ಹಿನ್ನಡೆಯಾಗುತ್ತದೆ" ಎಂದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಹೇಳಿಕೆ ನೀಡಿದ್ದಾರೆ.