ನವದೆಹಲಿ, ಮೇ 19: 1988ರಲ್ಲಿ ನಡೆದ ಅಂದರೆ 34 ವರ್ಷದ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗ, ಪಂಜಾಬ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ನವಜೋತ್ ಸಿಂಗ್ ಸಿಧುಗೆ ಒಂದು ವರ್ಷ ಜೈಲು ಶಿಕ್ಷೆ ಪ್ರಕಟಿಸಿ ಆದೇಶಿಸಲಾಗಿದೆ.
ನವಜೋತ್ ಸಿಂಗ್ ಸಿಧು 1988ರಲ್ಲಿ ವೃದ್ಧರೊಬ್ಬರ ಮೇಲೆ ರಸ್ತೆಯಲ್ಲಿ ದಾಂಧಲೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ಗುರುವಾರ ಶಿಕ್ಷೆ ತೀರ್ಪು ನೀಡಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಜೆ. ಚೆಲಮೇಶ್ವರ ಮತ್ತು ಸಂಜಯ್ ಕಿಶನ್ ಕೌಲ್ ಅವರನ್ನೊಳಗೊಂಡ ನ್ಯಾಯಪೀಠ 2018ರಲ್ಲಿ ಭಾರತೀಯ ದಂಡ ಸಂಹಿತೆ ಸೆಕ್ಷನ್ 323ರಡಿಯಲ್ಲಿ ಅಪರಾಧಿ ಎಂದು ತೀರ್ಪು ನೀಡಿ 1000 ರೂಪಾಯಿ ದಂಡ ವಿಧಿಸಿತ್ತು. ಆದರೆ ಜೈಲು ಶಿಕ್ಷೆಯಿಂದ ನವಜೋತ್ ಸಿಂಗ್ ಸಿಧುಗೆ ವಿನಾಯಿತಿ ನೀಡಲಾಗಿತ್ತು.
ಜೈಲು ಶಿಕ್ಷೆಯಿಂದ ವಿನಾಯಿತಿ ನೀಡಿದ್ದನ್ನು ಪ್ರಶ್ನಿಸಿ ಸಂತ್ರಸ್ತನ ಕುಟುಂಬದ ಸದಸ್ಯರು ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ 34 ವರ್ಷಗಳ ಬಳಿಕ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ.
1988ರಲ್ಲಿ ನಡೆದ ಘಟನೆಯ ವಿವರ
ಈ ಪ್ರಕರಣವು ಪಟಿಯಾಲ ನಿವಾಸಿ ಗುರ್ನಾಮ್ ಸಿಂಗ್ ಎಂಬ ವ್ಯಕ್ತಿಯನ್ನು ಡಿಸೆಂಬರ್ 1988ರಲ್ಲಿ ಬೀದಿ ಕಾಳಗದಲ್ಲಿ ನವಜೋತ್ ಸಿಂಗ್ ಸಿಧು ಮತ್ತು ಸ್ನೇಹಿತ ಹಲ್ಲೆ ಮಾಡಿದ್ದರು. ಇದು ಗುರ್ನಾಮ್ ಸಿಂಗ್ ಸಾವಿಗೆ ಕಾರಣವಾಯಿತು. ಡಿಸೆಂಬರ್ 27, 1988ರಂದು, ನವಜೋತ್ ಸಿಂಗ್ ಸಿಧು ಮತ್ತು ರೂಪಿಂದರ್ ಸಿಂಗ್ ಸಂಧು ತಮ್ಮ ಜಿಪ್ಸಿಯನ್ನು ಪಟಿಯಾಲಾದ ಶೆರಾನ್ವಾಲಾ ಗೇಟ್ ಕ್ರಾಸಿಂಗ್ ಬಳಿ ರಸ್ತೆಯ ಮಧ್ಯದಲ್ಲಿ ನಿಲ್ಲಿಸಿದ್ದರು.
65 ವರ್ಷದ ಗುರ್ನಾಮ್ ಸಿಂಗ್ ಕಾರಿನಲ್ಲಿ ಸ್ಥಳಕ್ಕೆ ಬಂದಾಗ, ಅವರು ಪಕ್ಕಕ್ಕೆ ಸರಿಸಲು ಹೇಳಿದರು. ಆಗ ಸಿಧು ಅವರು ಗುರ್ನಾಮ್ ಸಿಂಗ್ ಅವರನ್ನು ಥಳಿಸಿದ್ದಾರೆ. ಅವರು ಪಲಾಯನ ಮಾಡುವ ಮೊದಲು ಗುರ್ನಾಮ್ ಸಿಂಗ್ ಅವರ ಕಾರಿನ ಕೀಗಳನ್ನು ತೆಗೆದುಹಾಕಿದ್ದರು, ಆದ್ದರಿಂದ ಅವರಿಗೆ ತತ್ಕ್ಷಣ ವೈದ್ಯಕೀಯ ಸಹಾಯವನ್ನು ಪಡೆಯಲು ಸಾಧ್ಯವಾಗಿರಲಿಲ್ಲ.
ನ್ಯಾಯಾಲಯದಲ್ಲಿ ಪ್ರಕರಣ ಹೇಗೆ ಮುಂದುವರೆಯಿತು?
ಸೆಪ್ಟೆಂಬರ್ 1999 ರಲ್ಲಿ ನವಜೋತ್ ಸಿಂಗ್ ಸಿಧು ಅವರನ್ನು ಕೊಲೆಯಿಂದ ಖುಲಾಸೆಗೊಳಿಸಲಾಯಿತು. ಆದರೆ ಡಿಸೆಂಬರ್ 2006ರಲ್ಲಿ ಪಂಜಾಬ್ ಮತ್ತು ಹರಿಯಾಣದ ಹೈಕೋರ್ಟ್ ಅವರಿಬ್ಬರನ್ನೂ ಅಪರಾಧಿ ಎಂದು ಪರಿಗಣಿಸಿತು. ಇಬ್ಬರಿಗೂ ತಲಾ 1 ಲಕ್ಷ ರೂಪಾಯಿ ದಂಡವನ್ನೂ ವಿಧಿಸಿತು. ನಂತರ ನವಜೋತ್ ಸಿಂಗ್ ಸಿಧು ಮತ್ತು ರೂಪಿಂದರ್ ಸಿಂಗ್ ಸಂಧು ತೀರ್ಪನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು.
ಸಾಕ್ಷ್ಯವು ವಿರೋಧಾತ್ಮಕವಾಗಿದೆ ಮತ್ತು ವೈದ್ಯಕೀಯ ಅಭಿಪ್ರಾಯವು 'ಅಸ್ಪಷ್ಟವಾಗಿದೆ' ಎಂದು ಸಿಧು ಹೇಳಿದ್ದರು. 2007ರಲ್ಲಿ ನ್ಯಾಯಾಲಯವು ಅವರ ಅಪರಾಧವನ್ನು ತಡೆಹಿಡಿಯಿತು.
2018ರ ಸೆಪ್ಟೆಂಬರ್ನಲ್ಲಿ ಮೃತರ ಕುಟುಂಬ ಸದಸ್ಯರು ಸಲ್ಲಿಸಿದ ಮರುಪರಿಶೀಲನಾ ಅರ್ಜಿಯನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿತು. ಇದರ ಮೇಲೆ ಸಿಧುಗೆ ನೋಟಿಸ್ ನೀಡಿತು. ಈ ವರ್ಷದ ಆರಂಭದಲ್ಲಿ ಪಂಜಾಬ್ ಚುನಾವಣೆಗೆ ಮುನ್ನ, ಅವರ ಪತ್ನಿ ನವಜೋತ್ ಕೌರ್ ಸಿಧು ಅವರು ಎಸ್ಎಡಿ ನಾಯಕ ಬಿಕ್ರಮ್ಜಿತ್ ಮಜಿಥಿಯಾ ಅವರ ಆದೇಶದ ಮೇರೆಗೆ ಪ್ರಕರಣವನ್ನು ಮುಂದುವರಿಸಲಾಗಿದೆ ಎಂದು ಆರೋಪಿಸಿದ್ದರು.
ಐಪಿಸಿಯ ಸೆಕ್ಷನ್ 304ಎ ಅಡಿಯಲ್ಲಿ ನರಹತ್ಯೆಗೆ ನವಜೋತ್ ಸಿಂಗ್ ಸಿಧು ಅವರನ್ನು ಅಪರಾಧಿ ಎಂದು ಘೋಷಿಸಲು ಗುರ್ನಾಮ್ ಸಿಂಗ್ ಅವರ ಕುಟುಂಬದ ಮನವಿಯನ್ನು ಸುಪ್ರೀಂ ಕೋರ್ಟ್ ಗುರುವಾರ ತಿರಸ್ಕರಿಸಿದೆ. ಆದಾಗ್ಯೂ, ನ್ಯಾಯಾಲಯವು ಸೆಕ್ಷನ್ 323ರ ಅಡಿಯಲ್ಲಿ ಗರಿಷ್ಠ ಶಿಕ್ಷೆಯನ್ನು ವಿಧಿಸಿತು.