ಈ ಬಾರಿಯ ಐಪಿಎಲ್ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಅತ್ಯಂತ ನೀರಸ ಆರಂಭವನ್ನು ಪಡೆದುಕೊಂಡಿದೆ. ತಂಡದಲ್ಲಿನ ಕೆಲ ಪ್ರಮುಖ ಆಟಗಾರರಿಂದ ನಿರೀಕ್ಷಿತ ಪ್ರದರ್ಶನ ಈವರೆಗೂ ಬಂದಿಲ್ಲ. ಅದರಲ್ಲೂ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿ ಮಿಂಚಿರುವ ಶುಬ್ಮನ್ ಗಿಲ್ ಈ ಬಾರಿಯ ಆವೃತ್ತಿಯಲ್ಲಿ ಫಾರ್ಮ್ ಕಳೆದುಕೊಂಡಿದ್ದಾರೆ. ಇನ್ನೋರ್ವ ಆರಂಭಿಕ ಆಟಗಾರ ನಿತೀಶ್ ರಾಣ ಕೂಡ ವೈಫಲ್ಯವನ್ನು ಅನುಭವಿಸುತ್ತಿದ್ದಾರೆ. ಹೀಗಾಗಿ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೆಕೆಆರ್ಗೆ ಸಲಹೆಯೊಂದನ್ನು ನೀಡಿದ್ದಾರೆ.
ಆರಂಭಿಕ ಆಟಗಾರರಿಂದ ನಿರೀಕ್ಷಿತ ಪ್ರದರ್ಶನ ಬಾರದ ಕಾರಣ ಕೆಕೆಆರ್ ತಂಡ ಸಂಪೂರ್ಣ ಹೊಸ ಆರಂಭಿಕ ಜೋಡಿಯನ್ನು ಕಣಕ್ಕಿಳಿಸುವ ಯೋಚನೆ ಮಾಡಬೇಕಿದೆ ಎಂದು ಗವಾಸ್ಕರ್ ಹೇಳಿದ್ದಾರೆ. ಈ ಬದಲಾವಣೆ ತಂಡಕ್ಕೆ ಸಹಕಾರಿಯಾಗಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆಕೆಆರ್ ತಂಡದ ಪರವಾಗಿ ರಾಹುಲ್ ತ್ರಿಪಾಠಿ ಹಾಗೂ ಸುನಿಲ್ ನರೈನ್ ಇನ್ನಿಂಗ್ಸ್ ಆರಂಭಿಸಿದ ಉದಾಹರಣೆ ಇದೆ ಎಂದು ದಿಗ್ಗಜ ಕ್ರಿಕೆಟಿಗ ಗವಾಸ್ಕರ್ ಹೇಳಿದ್ದಾರೆ.
ಐಪಿಎಲ್ 2021: ಕೋಲ್ಕತ್ತಾ vs ಪಂಜಾಬ್ ಪಂದ್ಯದ ಹೈಲೈಟ್ಸ್
ರಾಣಾ ಹಾಗೂ ಗಿಲ್ ಕೆಕೆಆರ್ ತಂಡವನ್ನು ಕಳೆದ ಆರು ಪಂದ್ಯಗಳಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದು ಅವರು ಉತ್ತಮ ಜೊತೆಯಾಟವನ್ನು ನೀಡುವಲ್ಲಿ ವಿಫಲರಾಗಿದ್ದಾರೆ. ಟೂರ್ನಿಯ ಆರಂಭದಲ್ಲಿ ರಾಣಾ ರನ್ ಗಳಿಸಿದರಾದರೂ ಗಿಲ್ ರನ್ಗಳಿಸಲು ಪರದಾಡಿದ್ದಾರೆ.
"ಇತ್ತೀಚಿನ ದಿನಗಳಲ್ಲಿ ನಿತೀಶ್ ರಾಣಾ ಕೆಕೆಆರ್ ತಂಡದ ಪರವಾಗಿ ಯಶಸ್ವಿ ಆಟಗಾರ ಎನಿಸಿದ್ದಾರೆ. ರಾಹಿಲ್ ತ್ರಿಪಾಠಿ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸಿದರೆ ರಾಣಾ ಮೂರನೇ ಕ್ರಮಾಂಕದಲ್ಲಿ ಆಡಬಹುದು. ಅವರು ಮೂರನೇ ಕ್ರಮಾಂಕದಲ್ಲಿ ಈ ಹಿಂದೆ ಬ್ಯಾಟಿಂಗ್ ನಡೆಸಿದ್ದಾರೆ" ಎಂದು ಗವಾಸ್ಕರ್ ಪ್ರತಿಕ್ರಿಯಿಸಿದ್ದಾರೆ.
ಐಪಿಎಲ್ 2021: ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಡೆಲ್ಲಿ ಕ್ಯಾಪಿಟಲ್ಸ್ ಸವಾಲು
ಸುನಿಲ್ ನರೈನ್ ಹಾಗೂ ರಾಹುಲ್ ತ್ರಿಪಾಠಿ ಕೆಕೆಆರ್ ಪರವಾಗಿ ಇನ್ನಿಂಗ್ಸ್ ಆರಂಭಿಸುವುದು ಸೂಕ್ತ. ಈ ಆಟಗಾರರು ಈ ಹಿಂದೆಯೂ ಆರಂಭಿಕರಾಗಿ ಯಶಸ್ಸು ಗಳಿಸಿದ್ದರು ಎಂದು ಸುನಿಲ್ ಗವಾಸ್ಕರ್ ಕೆಕೆಆರ್ ತಂಡಕ್ಕೆ ಸಲಹೆಯನ್ನು ನೀಡಿದ್ದಾರೆ.