ಭಾರತದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಮತ್ತೊಮ್ಮೆ ವಿವಾದದ ಸುಳಿಗೆ ಸಿಲುಕಿದ್ದಾರೆ. ಸದಾ ಒಂದಿಲ್ಲೊಂದು ನಕಾರಾತ್ಮಕ ವಿಚಾರಗಳಿಗಾಗಿಯೇ ಸುದ್ದಿಯಲ್ಲಿರುವ ವಿನೋದ್ ಕಾಂಬ್ಳಿ ವಿರುದ್ಧ ಈ ಭಾರಿ ಗಂಭೀರ ಆರೋಪವನ್ನು ಅವರ ಪತ್ನಿಯೇ ಮಾಡಿದ್ದು ತನ್ನ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ಕಾಂಬ್ಳಿ ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಎಫ್ಐಆರ್ ದಾಖಲಾಗಿದೆ.
ಕುಡಿದ ಮತ್ತಿನಲ್ಲಿ ವಿನೋದ್ ಕಾಂಬ್ಳಿ ತಮ್ಮ ಪತ್ನಿ ಏಂಡ್ರಿಯಾ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಮುಂಬೈನ ಬಾಂದ್ರಾ ಮೊಲೀಸ್ ಠಾಣೆಯಲ್ಲಿ ಸ್ವತಃ ಕಾಂಬಿ ಪತ್ನಿ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಬಾಂದ್ರಾ ಪೊಲೀಸರು ಮಾಹಿತಿ ನೀಡಿದ್ದು ಶುಕ್ರವಾರ ತಡ ರಾತ್ರಿ ಸ್ವತಃ ಏಂಡ್ರಿಯಾ ಠಾಣೆಯನ್ನು ಸಂಪರ್ಕಿಸಿ ದೂರು ನೀಡಿದ್ದು ಈ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಬಾಂದ್ರಾ ರೆಕ್ಲಮೇಷನ್ನಲ್ಲಿರುವ ಜೆಡಬ್ಲ್ಯೂಎಲ್ ಸಹಕಾರಿ ಹೌಸಿಂಗ್ ಸೊಸೈಟಿಯಲ್ಲಿರುವ ತಮ್ಮ ನಿವಾಸದಲ್ಲಿ ಕಾಂಬ್ಳಿ ಮದ್ಯ ಸೇವಿಸಿ ನಿಂದಿಸಿದ್ದಲ್ಲದೆ ಹಿಂಸೆ ನೀಡಿದ್ದಾರೆ ಎಂದು ಏಂಡ್ರಿಯಾ ತನ್ನ ಹೇಳಿಕೆಯಲ್ಲಿ ಆರೋಪಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಾಂದ್ರಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ದೂರಿನ ಬಗ್ಗೆ ಮಾಹಿತಿ ನೀಡಿದ್ದಾರೆ. "ಕಾಂಬ್ಳಿ ಅಡುಗೆ ಪ್ಯಾನ್ನ ಮುರಿದ ಹಿಡಿಕೆಯನ್ನು ತನ್ನ ಮೇಲೆ ಎಸೆದಿದ್ದರಿಂದ ತನ್ನ ತಲೆಗೆ ಗಾಯವಾಗಿದೆ ಎಂದು ದೂರುದಾರರು ಹೇಳಿದ್ದಾರೆ. ಅಲ್ಲದೆ ಅವರು ಬ್ಯಾಟ್ನಿಂದ ಹೊಡೆಯಲು ಪ್ರಯತ್ನಿಸಿದರು, ಆದರೆ ಅವಳು ಅದನ್ನು ಕಸಿದುಕೊಂಡು ತಪ್ಪಿಸಿಕೊಂಡಿದ್ದು ನಂತರ ತಕ್ಷಣವೇ ತನ್ನ ಎರಡೂ ಮಕ್ಕಳನ್ನು ಕರೆದುಕೊಂಡು ಮನೆಯಿಂದ ಹೊರಟಿದ್ದಾರೆ" ಎಂದು ಮಾಹಿತಿ ನೀಡಿದ್ದಾರೆ.
ಏಂಡ್ರಿಯಾ ಘಟನೆಯ ಬಳಿಕ ಬಾಂದ್ರಾದ ಭಾಭಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದು ಬಳಿಕ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಅಲ್ಲಿ ತಮ್ಮ ಹೇಳಿಕೆಯನ್ನು ದಾಖಲಿಸಿದ್ದು ವೈದ್ಯಕೀಯ ವರದಿಯ ಪ್ರತಿಯನ್ನು ಸಹ ಸಲ್ಲಿಸಿದ್ದಾರೆ.
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
ವಿನೋದ್ ಕಾಂಬ್ಳಿ ವೃತ್ತಿ ಜೀವನದ ಆರಂಭದಲ್ಲಿ ಸಾಕಷ್ಟು ಭರವಸೆ ಮೂಡಿಸಿದ ಕ್ರಿಕೆಟಿಗನಾಗಿದ್ದರೂ ಸುದೀರ್ಘ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಡುವ ಅವಕಾಶ ದೊರೆಯಲಿಲ್ಲ. 17 ಟೆಸ್ಟ್ ಪಂದ್ಯಗಳಲ್ಲಿ ಆಡಿರುವ ಮಾಜಿ ಭಾರತೀಯ ಬ್ಯಾಟರ್ 54.20 ಸರಾಸರಿಯಲ್ಲಿ 1,084 ರನ್ ಗಳಿಸಿದ್ದಾರೆ. ಇನ್ನು 104 ಏಕದಿನ ಪಂದ್ಯಗಳನ್ನಾಡಿರುವ ಕಾಂಬ್ಳಿ 32.59 ಸರಾಸರಿಯಲ್ಲಿ 2,477 ರನ್ ಗಳಿಸಿದರು. ಅವರು ತಮ್ಮ ಕಿರು ಟೆಸ್ಟ್ ವೃತ್ತಿಜೀವನದಲ್ಲಿ ಎರಡು ದ್ವಿಶತಕಗಳನ್ನು ಗಳಿಸಿದ್ದಾರೆ.
ಇನ್ನು ವಿನೋದ್ ಕಾಂಬ್ಳಿ ಪದೇ ಪದೇ ನಕಾರಾತ್ಮಕ ವಿಚಾರಗಳಿಗಾಗಿಯೇ ಸುದ್ದಿಯಾಗುತ್ತಿದ್ದಾರೆ. ಕಳೆದ ವರ್ಷ ಕೂಡ ಕುಡಿತ ಮತ್ತಿನಲ್ಲಿ ಕಾರು ಚಲಾಯಿಸಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು. ಐಪಿಸಿಯ ಸೆಕ್ಷನ್ 279 (ಅಜಾಗರೂಕತೆಯಿಂದ ಚಾಲನೆ), ಸೆಕ್ಷನ್ 336 ಮತ್ತು ಸೆಕ್ಷನ್ 427 ರ ಅಡಿಯಲ್ಲಿ ಇನ್ನೊಬ್ಬರ ಜೀವಕ್ಕೆ ಅಪಾಯವನ್ನುಂಟು ಮಾಡುವ ಆರೋಪ ಹೊರಿಸಲಾಗಿತ್ತು. ಬಂಧನದ ನಂತರ ಕಾಂಬ್ಳಿಗೆ ವೈದ್ಯಕೀಯ ಪರೀಕ್ಷೆ ನಡೆಸಿ ನಂತರ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.