ಟೀಮ್ ಇಂಡಿಯಾದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಜಾತಿ ನಿಂದನೆ ಆರೋಪದಲ್ಲಿ ಬಂಧಿಸಲಾಗಿದೆ. ಕಳೆದ ವರ್ಷ ಲಾಕ್ಡೌನ್ ಸಂದರ್ಭದಲ್ಲಿ ರೋಹಿತ್ ಶರ್ಮಾ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ನಡೆಸಿದ ಸಂವಾದದಲ್ಲಿ ಯುವರಾಜ್ ಸಿಂಗ್ ಜಾತಿ ನಿಂದನೆಯ ಪದವನ್ನು ಬಳಸಿದ್ದರು. ಇದು ಸಾಕಷ್ಟು ವೈರಲ್ ಆಗಿ ಯುವರಾಜ್ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಿಸಾರ್ ಪೊಲೀಸಲು ಔಪಚಾರಿಕವಾಗಿ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ನಂತರ ಜಾಮೀನಿನ ಮೇಲೆ ಯುವರಾಜ್ ಸಿಂಗ್ ಅವರನ್ನು ಬಿಡುಗಡೆಗೊಳಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧನದ ಭೀತಿಯಲ್ಲಿದ್ದ ಯುವರಾಜ್ ಸಿಂಗ್ ನಿರೀಕ್ಷಣಾ ಜಾಮೀನಿಗೆ ಮನವಿ ಸಲ್ಲಿಸಿದ್ದರು. ಈ ಮಧ್ಯೆ ಹಿಸ್ಸಾರ್ನ ಹಂಸಿ ಪೊಲೀಸಲು ಯುವರಾಜ್ ಸಿಂಗ್ ಅವರನ್ನು ಬಂಧಿಸಿ 3 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದು ನಂತರ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.
ರೋಹಿತ್ ಶರ್ಮಾ ಜೊತೆ ಇನ್ಸ್ಟಾಗ್ರಾಮ್ ಲೈವ್ ಸಂವಾದಲ್ಲಿ ಪಾಲ್ಗೊಂಡಿದ್ದ ಯುವರಾಜ್, ಯಜುವೇಂದ್ರ ಚಾಹಲ್ ಅವರನ್ನು ಉದ್ದೇಶಿಸಿ ಜಾತಿನಿಂದಕ ಪದವೊಂದನ್ನು ಬಳಸಿದ್ದರು. ಯುವಿ ಬಳಸಿದ ಈ ಪದಕ್ಕೆ ದಲಿತ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಹರ್ಯಾಣದ ಕೆಲ ಸಂಘಟನೆಗಳು ಯುವಿ ಹೇಳಿಕೆಯನ್ನು ಖಂಡಿಸಿದ್ದಲ್ಲದೆ, ಹರ್ಯಾಣ ಪೊಲೀಸರಿಗೆ ದೂರು ನೀಡಿತ್ತು.
ಸ್ಪಷ್ಟನೆ ನೀಡಿದ್ದರು ಯುವರಾಜ್ ಸಿಂಗ್: ಕಳೆದ ವರ್ಷ ಈ ಪ್ರಕರಣ ಭಾತೀ ವಿವಾದದ ರೂಪವನ್ನು ಪಡೆದುಕೊಳ್ಳುತ್ತಿದ್ದಂತೆಯೇ ಯುವರಾಜ್ ಪ್ರಕರಣದ ಕುರಿತು ಸ್ಪಷ್ಟನೆಯನ್ನು ಕೂಡ ನೀಡಿದ್ದರು. ಟ್ವೀಟ್ನಲ್ಲಿ ಯುವಿ, 'ಈ ಮೂಲಕ ಸ್ಪಷ್ಟನೆ ನೀಡುವುದೇನಂದರೆ, ನನಗೆ ಜಾತಿ, ಬಣ್ಣ, ಧರ್ಮ ಅಥವಾ ಲಿಂಗ ಇಂಥ ಯಾವುದೇ ರೀತಿಯ ಅಸಮಾನತೆಯ ಬಗ್ಗೆ ನಂಬಿಕೆಯಿಲ್ಲ. ಜನ ಕಲ್ಯಾಣವನ್ನು ನಾನು ಪಾಲಿಸಿಕೊಂಡು ಬಂದಿದ್ದೇನೆ ಇನ್ನೂ ಮುಂದುವರೆಸುತ್ತೇನೆ. ನಾನು ಜೀವನದ ಘನತೆಯನ್ನು ನಂಬುತ್ತೇನೆ ಮತ್ತು ಪ್ರತಿಯೊಬ್ಬ ವ್ಯಕ್ತಿಯನ್ನೂ ಗೌರವಿಸುತ್ತೇನೆ,' ಎಂದು ಬರೆದುಕೊಂಡಿದ್ದರು.
ಯುವಿಯ ಮುಂದುವರೆದ ಟ್ವೀಟ್ನಲ್ಲಿ, 'ಸ್ನೇಹಿತರ ಜೊತೆ ಸಂವಾದ ನಡೆಸುವಾಗ ಅನಗತ್ಯವಾಗಿ ಅಪಾರ್ಥವಾಗಿದೆ ಎಂದು ನಾನು ಅರ್ಥ ಮಾಡಿಕೊಳ್ಳುತ್ತೇನೆ. ಏನೇ ಇರಲಿ, ಜವಾಬ್ದಾರಿಯುತ ಭಾರತೀಯನಾಗಿ ನಾನು ಹೇಳಬಯಸುವುದೇನಂದರೆ, ನಾನು ಉದ್ದೇಶಪೂರ್ವಕವಲ್ಲದೆ ಮಾತನಾಡುವಾಗ ಯಾರದೇ ಭಾವನೆಗಳಿಗೆ ನೋವುಂಟು ಮಾಡಿದ್ದರೆ, ಅದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತಿದ್ದೇನೆ' ಎಂದು ಬರೆದುಕೊಂಡಿದ್ದರು.
ಇನ್ಸ್ಟಾಗ್ರಾಮ್ ಲೈವ್ ಸಂವಾದಲ್ಲಿ ರೋಹಿತ್ ಶರ್ಮ, ಯುವರಾಜ್ ಸಿಂಗ್ ಜೊತೆಗೆ ಯುಜುವೇಂದ್ರ ಚಾಹಲ್, ಕುಲದೀಪ್ ಯಾದವ್ ಕೂಡಾ ಇದ್ದರು. ಆದರೆ ಯುವರಾಜ್ ಬಳಸಿದ್ದ ದ ಉತ್ತರ ಭಾರತದ ಕಡೆ ಬಳಸುವ ಜಾತಿ ಸೂಚಕ ಪದವೆನ್ನಲಾಗುತ್ತಿದೆ. ಹೀಗಾಗಿ ಯುವಿ ಉದ್ದೇಶಪೂರ್ವಕವಾಗಿ ಜಾತಿ ನಿಂದಿಸಿದ್ದಾರೆ ಎಂದು, ರಜತ್ ಕಾಲ್ಸನ್ ಎಂಬ ವಕೀಲರು ಹಿಸಾರ್ನ ಹಂಸಿ ಪೊಲೀಸ್ ಠಾಣೆಯಲ್ಲಿ ಯುವಿ ವಿರುದ್ಧ ದೂರು ದಾಖಲಿಸಿದ್ದರು. ಇದೀಗ ಒಂದು ವರ್ಷದ ನಂತರ ಈ ಪ್ರಕರಣಕ್ಕೆ ಸಂಬಂದಪಟ್ಟಂತೆ ಯುವರಾಜ್ ಸಿಂಗ್ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದ್ದು ಬಿಡುಗಡೆಗೊಳಿಸಲಾಗಿದೆ.