ಸಂಜು ಸ್ಯಾಮ್ಸನ್ ಸೋಮಾರಿ ಆಟಗಾರನಂತೆ ಕಾಣುತ್ತಿದ್ದಾರೆ
ಭಾರತ ಮತ್ತು ಶ್ರೀಲಂಕಾ ನಡುವಿನ ಮೂರನೇ ಟಿ ಟ್ವೆಂಟಿ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಶ್ರೀಲಂಕಾ ಬೌಲರ್ ವನಿಂದು ಹಸರಂಗ ಓವರ್ನಲ್ಲಿ ಎಲ್ಬಿಡಬ್ಲ್ಯುಗೆ ಬಲಿಯಾದರು. 3 ಎಸೆತಗಳನ್ನು ಎದುರಿಸಿದ ಸಂಜು ಸ್ಯಾಮ್ಸನ್ ಯಾವುದೇ ರನ್ ಕಲೆ ಹಾಕದೆ ಡಕ್ ಔಟ್ ಆಗಿ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದರು. ಈ ಕುರಿತು ಮಾತನಾಡಿರುವ ಸಲ್ಮಾನ್ ಬಟ್ ವನಿಂದು ಹಸರಂಗ ಎಸೆದ ಕಷ್ಟದ ಎಸೆತಗಳನ್ನು ಎದುರಿಸಲು ಆಗುವುದಿಲ್ಲ ಎಂದರೂ ಸಹ ಆ ಎಸೆತವನ್ನು ಹೊಡೆಯಲು ಹೋಗಿ ವಿಕೆಟ್ ಒಪ್ಪಿಸಿದ್ದು ನೋಡಿದರೆ ಸಂಜು ಸ್ಯಾಮ್ಸನ್ ಓರ್ವ ಸೋಮಾರಿ ಆಟಗಾರನಂತೆ ನನಗೆ ಕಾಣುತ್ತಾರೆ ಎಂದು ಸಲ್ಮಾನ್ ಬಟ್ ಹೇಳಿದ್ದಾರೆ.
ಕಮ್ರಾನ್ ಅಕ್ಮಲ್ ಕೂಡ ಸಂಜು ಸ್ಯಾಮ್ಸನ್ ಆಟಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ
ಸಲ್ಮಾನ್ ಬಟ್ ಮಾತ್ರವಲ್ಲದೆ ಪಾಕಿಸ್ತಾನದ ಮತ್ತೋರ್ವ ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್ ಕೂಡ ಸಂಜು ಸ್ಯಾಮ್ಸನ್ ಆಟದ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಇತಿಹಾಸದಲ್ಲಿ 3 ಶತಕಗಳನ್ನು ಬಾರಿಸಿದ ಅನುಭವವಿರುವ ಸಂಜು ಸ್ಯಾಮ್ಸನ್ ಈ ರೀತಿಯ ಕಳಪೆ ಇನ್ನಿಂಗ್ಸ್ ಆಡುತ್ತಾರೆ ಎಂದು ಊಹಿಸಿಯೂ ಇರಲಿಲ್ಲ ಎಂಬ ಹೇಳಿಕೆ ನೀಡುವುದರ ಮೂಲಕ ಕಮ್ರಾನ್ ಅಕ್ಮಲ್ ಬೇಸರಗೊಂಡಿದ್ದಾರೆ.
ಶ್ರೀಲಂಕಾ ಸರಣಿ ಸಂಜು ಸ್ಯಾಮ್ಸನ್ ಪಾಲಿಗೆ ಬೇಸರದ ಸಂಗತಿ ಎಂದ ರಾಹುಲ್ ದ್ರಾವಿಡ್
ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಭಾರತ ತಂಡಕ್ಕೆ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಕೂಡ ಸಂಜು ಸ್ಯಾಮ್ಸನ್ ಕುರಿತು ಪ್ರತಿಕ್ರಿಯಿಸಿದ್ದು, ಶ್ರೀಲಂಕಾ ಪ್ರವಾಸದಲ್ಲಿ ಸಂಜು ಸ್ಯಾಮ್ಸನ್ ತೋರಿದ ಆಟವನ್ನು ಸ್ವತಃ ಆತನೇ ನೋಡಿಕೊಂಡರೆ ಖಂಡಿತವಾಗಿಯೂ ಆತನಿಗೆ ಶ್ರೀಲಂಕಾ ಪ್ರವಾಸ ಬೇಸರವನ್ನುಂಟುಮಾಡಲಿದೆ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.