ಹೊಸದಿಲ್ಲಿ, ಆಗಸ್ಟ್ 04: ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಅಂತಾರಾಷ್ಟ್ರೀಯ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿ ಮೂರು ವಿಕೆಟ್ ಪಡೆದು ಮಿಂಚಿದ ದಿಲ್ಲಿಯ ವೇಗದ ಬೌಲರ್ ನವದೀಪ್ ಸೈನಿ ಅವರ ಸಾಮರ್ಥ್ಯವನ್ನು ಪ್ರಶ್ನಿಸಿದ್ದ, ದಿಲ್ಲಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಮುಖ್ಯಸ್ಥರಾದ ಬಿಷನ್ ಸಿಂಗ್ ಬೇಡಿ ಮತ್ತು ಚೇತನ್ ಚೌಹಾಣ್ಗೆ ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಗೌತಮ್ ಗಂಭೀರ್ ಟ್ವೀಟ್ ಮೂಲಕ ಬಿಸಿ ಮುಟ್ಟಿಸಿದ್ದಾರೆ.
ಟೆನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದ ಸೈನಿ ಅವರಲ್ಲಿನ ಪ್ರತಿಭೆ ಗುರುತಿಸಿ ಅವರನ್ನು ದಿಲ್ಲಿ ರಣಜಿ ತಂಡದ ಪರ ಆಡುವಂತೆ ಮಾಡುವಲ್ಲಿ ಗಂಭೀರ್ ಪಾತ್ರ ದೊಡ್ಡದು.
ಟೆನಿಸ್ ಬಾಲ್ ಕ್ರಿಕೆಟರ್ಗೆ ಇಂದು ಟೀಮ್ ಇಂಡಿಯಾ ಟಿಕೆಟ್!
ಪಂದ್ಯಕ್ಕೆ 200 ರೂ. ಸಂಭಾವನೆ ಪಡೆದು ಟೆನಿಬಾಲ್ ಟೂರ್ನಿಗಳಲ್ಲಿ ಆಡುತ್ತಿದ್ದ ನವದೀಪ್ ಸೈನಿ ಅವರನ್ನು ದಿಲ್ಲಿ ರಣಜಿ ತಂಡದಲ್ಲಿ ಆಡಿಸುವ ಸಲುವಾಗಿ ದಿಲ್ಲಿ ಜಿಲ್ಲಾ ಕ್ರಿಕೆಟ್ ಮಂಡಳಿ ಮತ್ತು ಆಯ್ಕೆ ಸಮಿತಿ ವಿರುದ್ಧ ಹೋರಾಟ ನಡೆಸಿದ್ದ ದಿಲ್ಲಿ ರಣಜಿ ತಂಡದ ಮಾಜಿ ನಾಯಕ ಗೌತಮ್ ಗಂಭೀರ್, ಇದೀಗ ಸೈನಿ ಅಂತಾರಾಷ್ಟ್ರೀಯ ಟಿ20ಯಲ್ಲಿ ಪದಾರ್ಪಣೆಯ ಪಂದ್ಯದಲ್ಲೇ ಪಂದ್ಯಶ್ರೇಷ್ಠ ಗೌರವ ಪಡೆದಿರುವುದನ್ನು ಟ್ವಿಟರ್ ಮೂಲಕ ಗುಣಗಾನ ಮಾಡಿದ್ದಾರೆ.
2019-2020ರಲ್ಲಿ ಭಾರತ ತವರಿನಲ್ಲಿ ಆಡುವ ಕ್ರಿಕೆಟ್ ಸರಣಿಗಳ ವಿವರ ಇಲ್ಲಿದೆ
ಸೈನಿ ಅವರನ್ನು ರಣಜಿ ತಂಡಕ್ಕೆ ಆಡಿಸುವ ಸಂದರ್ಭದಲ್ಲಿ ಭಾರತ ತಂಡದ ಮಾಜಿ ಆಟಗಾರರಾದ ಬಿಷನ್ ಸಿಂಗ್ ಬೇಡಿ ಮತ್ತು ಚೇತನ್ ಚೌಹಾಣ್ ಗಂಭೀರ್ ನಡೆಯನ್ನು ಕಟುವಾಗಿ ಟೀಕಿಸಿದ್ದರು. ಅಲ್ಲದೆ ಟೆನಿಸ್ ಬಾಲ್ ಕ್ರಿಕೆಟರ್ ಸೈನಿ ಅವರ ಸಾಮರ್ಥ್ಯವನ್ನು ಪ್ರಶ್ನಿಸಿದ್ದರು.
ಅಮೆರಿಕದ ಪ್ಲೋರಿಡಾದ ಲೌಡರ್ಹಿಲ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಸೈನಿ, 4 ಓವರ್ ಬೌಲ್ ಮಾಡಿ 17ಕ್ಕೆ 3 ವಿಕೆಟ್ ಪಡೆದಿದ್ದರು. ಅಷ್ಟೇ ಅಲ್ಲದೆ ಇನಿಂಗ್ಸ್ನ 20ನೇ ಓವರ್ನಲ್ಲಿ ಮೇಡಿನ್ ಪಡೆದು ಹೊಸ ದಾಖಲೆಯನ್ನೂ ಬರೆದಿದ್ದರು. ಅವರ ಈ ಭರ್ಜರಿ ಪ್ರದರ್ಶನಕ್ಕೆ ಪಂದ್ಯ ಶ್ರೇಷ್ಠ ಗೌರವ ಒಲಿದಿತ್ತು.
ಭಾರತ ತಂಡಕ್ಕೆ ಸೈನಿ ಆಯ್ಕೆ: ಬೇಡಿ, ಚೌಹಾಣ್ಗೆ ಗಂಭೀರ್ ಸಂತಾಪ!
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್, 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 95 ರನ್ಗಳನ್ನು ಮಾತ್ರವೇ ದಾಖಲಿಸಿತು. ಬಳಿಕ ಗುರಿ ಬೆನ್ನತ್ತಿದ ಭಾರತ ತಂಡ 17.2 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 98 ರನ್ ದಾಖಲಿಸಿ ಶುಭಾರಂಭ ಮಾಡಿತು. ಸರಣಿಯ ಎರಡನೇ ಪಂದ್ಯವೂ ಫ್ಲೋರಿಡಾದಲ್ಲೇ ಭಾನುವಾರ ನಡೆಯಲಿದೆ.
"ಭಾರತ ತಂಡಕ್ಕೆ ಭರ್ಜರಿಯಾಗಿ ಪದಾರ್ಪಣೆ ಮಾಡಿದ ಸೈನಿಗೆ ಧನ್ಯವಾದಗಳು. ನೀನು ಬೌಲಿಂಗ್ ಮಾಡುವ ಮೊದಲೇ ಎರಡು (ಬಿಷನ್ ಸಿಂಗ್ ಬೇಡಿ ಮತ್ತು ಚೇತನ್ ಚೌಹಾಣ್) ವಿಕೆಟ್ ಪಡೆದಿರುವೆ. ನಿನ್ನ ಪದಾರ್ಪಣೆ ಕಂಡು ಅವರ ಮಿಡ್ಲ್ ಸ್ಟಂಪ್ ಹಾರಿಹೋಗಿದೆ. ನಿನ್ನ ಪ್ರತಿಭೆ ನೋಡುವ ಮೊದಲೇ ಅವರು ನಿನ್ನ ಕ್ರಿಕೆಟ್ ಬದುಕನ್ನು ಅಂತ್ಯಗೊಳಿಸಲೆತ್ನಿಸಿದ್ದರು. ನಾಚಿಕೆಯಾಗಬೇಕು!!!," ಎಂದು ಗಂಭೀರ್ ಟ್ವೀಟ್ ಮಾಡಿದ್ದರು.
ಟೀಮ್ ಇಂಡಿಯಾ ವಿರುದ್ಧ ಮುಗ್ಗರಿಸಿದ ಬಳಿಕ ವಿಂಡೀಸ್ ನಾಯಕ ಹೇಳಿದ್ದಿದು
ಪಂದ್ಯದ 5ನೇ ಓವರ್ನಲ್ಲಿ ಬೌಲಿಂಗ್ ದಾಳಿಗಿಳಿದ ಸೈನಿ, ಮೊದಲಿಗೆ ವೆಸ್ಟ್ ಇಂಡೀನ ಯುವ ಹಾಗೂ ಅಪಾಯಕಾರಿ ಬ್ಯಾಟ್ಸ್ಮನ್ಗಳಾದ ನಿಕೋಲಸ್ ಪೂರನ್ ಮತ್ತು ಶಿಮ್ರಾನ್ ಹೆಟ್ಮಾಯೆರ್ ಅವರನ್ನು ಪೆವಿಲಿಯನ್ಗೆ ಅಟ್ಟಿದರು. ಬಳಿಕ ಇನಿಂಗ್ಸ್ನ ಅಂತಿಮ ಓವರ್ನಲ್ಲಿ ಸ್ಫೋಟಕ ಬ್ಯಾಟ್ಸ್ಮನ್ ಕೀರನ್ ಪೊಲಾರ್ಡ್ ಅವರ ವಿಕೆಟ್ ಪಡೆದು ಮೇಡಿನ್ ಓವರ್ ಸಾಧನೆಯನ್ನೂ ಮಾಡಿದರು.
ಮೊದಲ ಟಿ20: ಸೈನಿ-ಭುವಿ ಬೌಲಿಂಗ್ ದಾಳಿಗೆ ಶರಣಾದ ವೆಸ್ಟ್ ಇಂಡೀಸ್
ಗಂಟೆಗೆ 150 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಬಲ್ಲ ಸಾಮರ್ಥ್ಯ ಹೊಂದಿರುವ ಸೈನಿ, ಇದಕ್ಕೂ ಮುನ್ನ ನಡೆದ ವೆಸ್ಟ್ ಇಂಡೀಸ್ 'ಎ' ವಿರುದ್ಧದ ಸರಣಿಯಲ್ಲೂ ಮಿಂಚಿ ಅತಿ ಹೆಚ್ಚು ವಿಕೆಟ್ ಪಡೆದವರ ಪೈಕಿ ಎರಡನೇ ಸ್ಥಾನದಲ್ಲಿದ್ದರು. ಇನ್ನು 2019ರ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಟೂರ್ನಿಯಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ಪರ ಆಡುವ ಮೂಲಕ 13 ಪಂದ್ಯಗಳಲ್ಲಿ 11 ವಿಕೆಟ್ ಪಡೆದು ಮಿಂಚಿದ್ದರು. ಅಷ್ಟೇ ಅಲ್ಲದೆ ಗಂಟೆಗೆ 152.85 ಕಿ.ಮೀ ವೇಗದಲ್ಲಿ ಬೌಲಿಂಗ್ ದಾಳಿ ಸಂಘಟಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು.