|
ಬೇಡಿ, ಚೌಹಾಣ್ಗೆ ಸಂತಾಪಗಳು
'ಹೊರಗಿನವ' ನವದೀಪ್ ಸೈನಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದಕ್ಕಾಗಿ ಡಿಡಿಸಿಎಯ ಕೆಲವು ಸದಸ್ಯರು, ಬಿಷನ್ ಬೇಡಿ, ಚೇತನ್ ಚೌಹಾಣ್ ಅವರಿಗೆ ನನ್ನ ಸಂತಾಪಗಳು. ಬೆಂಗಳೂರಿನಲ್ಲಿ ಕಪ್ಪು ತೋಳಪಟ್ಟಿಯ ರೋಲ್ ಕೇವಲ 225 ರೂ.ಗೆ ದೊರಕುತ್ತದೆ!! ಸರ್, ನವದೀಪ್ ಮೊದಲು ಭಾರತೀಯ, ಬಳಿಕ ತನ ಮೂಲ ಸ್ಥಳ ಬರುತ್ತದೆ ಎಂಬುದನ್ನು ನೆನಪಿಡಿ ಎಂದು ಗಂಭೀರ್ ಟ್ವೀಟ್ ಮಾಡಿದ್ದಾರೆ.
ಗಂಭೀರ್ನಿಂದ ಇಲ್ಲಿದ್ದೇನೆ
ರಣಜಿಯ ಕಳೆದ ಆವೃತ್ತಿಯಲ್ಲಿ ದೆಹಲಿ ಪರ ಆಡಿದ್ದ ಸೈನಿ ಎಂಟು ಪಂದ್ಯಗಳಲ್ಲಿ 34 ವಿಕೆಟ್ಗಳನ್ನು ಕಿತ್ತು ಗಮನ ಸೆಳೆದಿದ್ದರು.
ಭಾರತ ತಂಡಕ್ಕೆ ಆಯ್ಕೆಯಾದ ಬಳಿಕ ಅವರು ಗೌತಮ್ ಗಂಭೀರ್ ಮತ್ತು ಸಹ ಆಟಗಾರರನ್ನು ಸೈನಿ ನೆನಪಿಸಿಕೊಂಡಿದ್ದಾರೆ. ಟೆನ್ನಿಸ್ ಬಾಲ್ನಲ್ಲಿ ಹೇಗೆ ಚೆಂಡು ಎಸೆಯುತ್ತಿದ್ದೆಯೋ ಹಾಗೆಯೇ ಬೌಲ್ ಮಾಡು. ಉಳಿದಿದ್ದು ತಾನಾಗಿಯೇ ಆಗುತ್ತದೆ ಎಂದು ಗಂಭೀರ್ ಹೇಳಿದ್ದರು.
ಅವರು ಹೇಳಿದಂತೆ ನಾನು ಮಾಡಿದೆ. ಅವರ ಕಾರಣದಿಂದಲೇ ನಾನು ಇಲ್ಲಿದ್ದೇನೆ. ಏಕೋ ಗೊತ್ತತಿಲ್ಲ, ಗಂಭೀರ್ ಅವರ ಬಗ್ಗೆ ಮಾತನಾಡಿದಾಗಲೆಲ್ಲಾ ಭಾವುಕನಾಗುತ್ತೇನೆ ಎಂದು ಸೈನಿ ಹೇಳಿದ್ದಾರೆ.
ನೆಟ್ನಲ್ಲಿ ನೋಡಿ ಮೆಚ್ಚಿದ ಗಂಭೀರ್
ನೆಟ್ನಲ್ಲಿ ಬೌಲಿಂಗ್ ಮಾಡುತ್ತಿದ್ದ ಸೈನಿಯನ್ನು ಸುಮಾರು 15 ನಿಮಿಷ ಗಮನಿಸಿದ್ದ ಗಂಭೀರ್, ಸೈನಿ ಅಪರೂಪದ ಪ್ರತಿಭೆಯಾಗಿದ್ದು, ಅವರಿಗೆ ಸೂಕ್ತ ತರಬೇತಿ ನೀಡಬೇಕು ಎಂದು ನಿರ್ಧರಿಸಿದ್ದರು. ಹರಿಯಾಣದಿಂದ ಬಂದ 'ಹೊರಗಿನವ' ಎಂದು ಪರಿಗಣಿಸಲಾದ ಸೈನಿ, ದೆಹಲಿ ತಂಡವನ್ನು ಸೇರಲು ಆರಂಭದಲ್ಲಿ ಆಯ್ಕೆದಾರರಿಂದ ತೀವ್ರ ಪ್ರತಿರೋಧ ಎದುರಿಸಬೇಕಾದರೂ, ಗಂಭೀರ್ ನೆರವಿನಿಂದ ತಂಡವನ್ನು ಸೇರಿಕೊಂಡರು. ಅದಕ್ಕೆ ಪೂರಕವಾಗಿ ತಮ್ಮ ಉತ್ತಮ ಬೌಲಿಂಗ್ನಿಂದ ದೆಹಲಿಯ ಪ್ರಮುಖ ಆಟಗಾರರು ಮತ್ತು ಹಿರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು.
ಹಿರಿಯರ ವಿರುದ್ಧ ಸಿಡಿದಿದ್ದ ಗಂಭೀರ್
ನೆಟ್ನಲ್ಲಿ ಬೌಲಿಂಗ್ ಮಾಡುತ್ತಿದ್ದ ಸೈನಿಯ ಪ್ರತಿಭೆಯನ್ನು ಗಮನಿಸುವಂತೆ ಎಷ್ಟು ಬಾರಿ ಮನವಿ ಮಾಡಿದ್ದರೂ ದೆಹಲಿ ತಂಡದ ಆಯ್ಕೆದಾರ (ಭಾರತ ಕ್ರಿಕೆಟ್ ತಂಡ ಮಾಜಿ ಆರಂಭಿಕ ಆಟಗಾರ) ಸೈನಿಯ ಬೌಲಿಂಗ್ನತ್ತ ಒಮ್ಮೆ ನೋಡಲೂ ಮುಂದಾಗಿರಲಿಲ್ಲ. ಇದು ಗಂಭೀರ್ ಅವರು ತಾಳ್ಮೆಗೆಡುವಂತೆ ಮಾಡಿತ್ತು. ಈ ಘಟನೆಗೆ ಅನೇಕರು ಸಾಕ್ಷಿಯಾಗಿದ್ದರು.
ಆದರೆ ಹಠತೊಟ್ಟಿದ್ದ ಗಂಭೀರ್ ಅಧಿಕಾರಿಗಳು ಮತ್ತು ಆಯ್ಕೆದಾರರ ವಿರುದ್ಧ ಬಂಡೆದ್ದು, ಸೈನಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ಸಫಲರಾಗಿದ್ದರು. ಸೈನಿ ಅವರ ಅರ್ಹತೆ ಪ್ರಶ್ನಿಸಿ ಡಿಡಿಸಿಎ ಅಧಿಕಾರಿಗಳ ವರ್ಗವೊಂದು ಕರಪತ್ರಗಳನ್ನು ಹಂಚಿತ್ತು.
ಲೆದರ್ ಬಾಲ್ ಆಡಿಯೇ ಗೊತ್ತಿರಲಿಲ್ಲ
2013ರಲ್ಲಿ ದೆಹಲಿಯ ರೋಶನಾರ ಕ್ರಿಕೆಟ್ ಮೈದಾನದಲ್ಲಿ ದೆಹಲಿ ರಣಜಿ ತಂಡದ ನೆಟ್ ಪ್ರಾಕ್ಟೀಸ್ನಲ್ಲಿ ಬೌಲಿಂಗ್ ಮಾಡುವ ಅವಕಾಶ ಸಿಗುವವರೆಗೂ ನವದೀಪ್ ಸೈನಿ ಕೆಂಪು ಲೆದರ್ ಬಾಲ್ನಲ್ಲಿ ಬೌಲಿಂಗ್ ಮಾಡಿಯೇ ಇರಲಿಲ್ಲ.
ಅಲ್ಲಿಯವರೆಗೂ ಸೈನಿ ಟೆನ್ನಿಸ್ ಬಾಲ್ ಟೂರ್ನಿಗಳಲ್ಲಿ ಆಡಿಕೊಂಡು ಪ್ರತಿ ಪಂದ್ಯದಲ್ಲಿ 250-500 ರೂ ಮಾತ್ರ ಸಂಪಾದಿಸುತ್ತಿದ್ದರು. ಗೌತಮ್ ಗಂಭೀರ್ ಕಣ್ಣಿಗೆ ಬೀಳುವವರೆಗೂ ತಾನು ಲೆದರ್ ಬಾಲ್ ಕ್ರಿಕೆಟಿಗನಾಗುತ್ತೇನೆ ಎಂಬ ಕನಸು ಕೂಡ ಅವರಲ್ಲಿ ಇರಲಿಲ್ಲ.
ಬಡ ಕುಟುಂಬದ ಹುಡುಗ
ಹರಿಯಾಣದ ಕರ್ನಾಲ್ನವರಾದ ಸೈನಿ, ಮನೆಯ ಬಡತನದ ಕಾರಣ ಕ್ರಿಕೆಟ್ನ ಆಸಕ್ತಿಯನ್ನು ನೆಚ್ಚಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಕ್ರಿಕೆಟ್ ತರಬೇತಿಯನ್ನು ಪಡೆಯುವುದಂತೂ ಕನಸಿನ ಮಾತಾಗಿತ್ತು. ಸೈನಿಯ ಪೂರ್ವಜರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದವರು.
ದೆಹಲಿಯ ವೇಗದ ಬೌಲರ್ ಸುಮಿತ್ ನರ್ವಾಲ್ ಅವರು ಆಯೋಜಿಸಿದ್ದ ಕರ್ನಾಲ್ ಪ್ರೀಮಿಯರ್ ಲೀಗ್ನಲ್ಲಿ ಹೆಸರು ನೋಂದಾಯಿಸುವಲ್ಲಿ ಸೈನಿ ಯಶಸ್ವಿಯಾಗಿದ್ದರು. ಅಲ್ಲಿ ಸೈನಿಯ ಸಾಮರ್ಥ್ಯ ಕಂಡು ಮೆಚ್ಚಿದ ಸುಮಿತ್ ನರ್ವಾಲ್, ಅವರನ್ನು ದೆಹಲಿಗೆ ಕರೆದುಕೊಂಡು ಬಂದರು.
'ಎ' ತಂಡಕ್ಕೂ ಪ್ರವೇಶ
ರಣಜಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ, ಸೈನಿ ವಿಜಯ್ ಹಜಾರೆ ಟ್ರೋಫಿ, ಸೈಯದ್ ಮುಷ್ತಾಕ್ ಅಲಿ ಟ್ರೋಫಿಗಳಲ್ಲಿ ಅಂತಹ ಗಮನಾರ್ಹ ಸಾಧನೆ ಮಾಡಲಿಲ್ಲ.
ದೇವಧರ್ ಟ್ರೋಫಿಯಲ್ಲಿ ಭಾರತ 'ಎ' ತಂಡ ಮತ್ತು ಇರಾನಿ ಕಪ್ನಲ್ಲಿ ಭಾರತ ಇತರೆ ತಂಡಕ್ಕೆ ಆಯ್ಕೆಯಾಗಿದ್ದರು. ಇತ್ತೀಚೆಗೆ ನಡೆದ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದೊಂದಿಗೆ 3 ಕೋಟಿಗೆ ಒಪ್ಪಂದ ಮಾಡಿಕೊಂಡಿದ್ದರೂ, ಅವರಿಗೆ ಆಡುವ ಅವಕಾಶ ಸಿಕ್ಕಿರಲಿಲ್ಲ
ಅಚಾನಕ್ಕಾಗಿ ಒಲಿದ ಅದೃಷ್ಟ
ನವದೀಪ್ ಸೈನಿ ತಮಗೆ ಇಷ್ಟು ಬೇಗ ಭಾರತ ತಂಡದ ಬಾಗಿಲು ತೆರೆಯುತ್ತದೆ ಎಂದು ಭಾವಿಸಿರಲಿಲ್ಲ. ಹಿರಿಯ ಬೌಲರ್ ಮೊಹಮದ್ ಶಮಿ ಅವರು ಯೋ ಯೋ ಫಿಟ್ನೆಸ್ ಪರೀಕ್ಷೆಯಲ್ಲಿ ವಿಫಲರಾಗಿದ್ದರಿಂದ ಅವರನ್ನು ತಂಡದಿಂದ ಕೈಬಿಟ್ಟು, ಸೈನಿ ಅವರಿಗೆ ಅವಕಾಶ ನೀಡಲಾಗಿದೆ.
ಅಚಾನಕ್ಕಾಗಿ ಒಲಿದ ಅದೃಷ್ಟವನ್ನು ಸೈನಿ ಹೇಗೆ ಬಳಸಿಕೊಳ್ಳುತ್ತಾರೆ ಎಂದು ಕಾದು ನೋಡಬೇಕು. ಆದರೆ, ವೇಗದ ಬೌಲರ್ಗಳಾದ ಉಮೇಶ್ ಯಾದವ್, ಇಶಾಂತ್ ಶರ್ಮಾ, ಶಾರ್ದೂಲ್ ಠಾಕೂರ್ ಅವರ ನಡುವೆ ಸೈನಿ ಅಂತಿಮ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದುಕೊಳ್ಳುವುದು ಕಷ್ಟವಾಗಬಹುದು.