ಸಂಸದ, ಟೀಮ್ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್ ಪಿಎಂ ಪರಿಹಾರ ನಿಧಿಗೆ ತಮ್ಮ ಎರಡು ವರ್ಷದ ವೇತನ ದೇಣಿಗೆ ನೀಡುವುದಾಗಿ ತಿಳಿಸಿದ್ದಾರೆ. ಗಂಭೀರ್ ಸಂಸದರ ಒಂದು ತಿಂಗಳ ವೇತನದ ಜೊತೆಗೆ ಸಂಸದರ ನಿಧಿಯಿಂದ ಒಂದು ಕೋಟಿ ರೂ ನೀಡಿದ್ದರು. ವೈದ್ಯಕೀಯ ಪರಕರಗಳ ಖರೀದಿಗಾಗಿ ದೆಹಲಿ ಸರ್ಕಾರಕ್ಕೆ 50ಲಕ್ಷ ರೂ ದೇಣಿಗೆ ನೀಡಿದ್ದರು.
ಹೆಚ್ಚೆಚ್ಚು ಜನರು ದೇಣಿಗೆ ನೀಡಲು ಮುಂದೆ ಬರಬೇಕು ಎಂದು ಎಲ್ಲರಲ್ಲಿ ವಿನಂತಿಸಿಕೊಂಡಿದ್ದಾರೆ. ಬಾಲಿವುಡ್ ನಟ ಶಾರೂಕ್ ಖಾನ್ ತಮ್ಮ ಒಡೆತನದ ರೆಡ್ ಚಿಲ್ಲಿಸ್ ಎಂಟರ್ಟೈನ್ಮೆಂಟ್ , ಕೊಲ್ಕತ್ತ ನೈಟ್ರೈಡರ್ಸ್ ಹಾಗೂ ಮೀರ್ ಫೌಂಡೇಷನ್ ವತಿಯಿಂದ ಮಹಾರಾಷ್ಟ್ರ ಹಾಗೂ ಪಶ್ಚಿಮ ಬಂಗಾಳ ಸರ್ಕಾರಗಳಿಗೆ 50 ಸಾವಿರ ಸುರಕ್ಷತಾ ಕಿಟ್ ನೀಡುವುದಾಗಿ ತಿಳಿಸಿದ್ದಾರೆ.
ಇನ್ನು ಕಾಮನ್ವೆಲ್ತ್ ಗೇಮ್ ಸ್ವರ್ಣ ಪದಕ ವಿಜೇತೆ ಅಪೂರ್ವಿ ಚಂಡಾಲಾ 5 ಲಕ್ಷ ರೂ ದೇಣಿಗೆ ನೀಡುವುದಾಗಿ ತಿಳಿಸಿದ್ದಾರೆ. ಮೂರು ಲಕ್ಷ ರೂ ಪಿಎಂ ಕೇರ್ಸ್ಗೆ ನೀಡಿದರೆ 2 ಲಕ್ಷ ರೂ ಅನ್ನು ರಾಜಸ್ಥಾನ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಿದ್ದಾರೆ.
ಭಾರತೀಯ ಕ್ರಿಕೆಟಿಗರು ಕೂಡ ಈ ಸಂದರ್ಭದಲ್ಲಿ ಆರ್ಥಿಕ ನೆರವನ್ನು ನೀಡಲು ಮುಂದೆ ಬಂದಿದ್ದಾರೆ. ಟಿಮ್ ಇಂಡಿಯಾ ನಾಯಕ ಕೊಹ್ಲಿ ಸೇರಿದಂತೆ ರೋಹಿತ್ ಶರ್ಮಾ, ಅಜಿಂಕ್ಯಾ ರೆಹಾನೆ, ಸುರೇಶ್ ರೈನಾ ಸೇರಿದಂತೆ ಅನೇಕರು ಪಿಎಂ ಕೇರ್ಸ್ ಮತ್ತು ಆಯಾ ರಾಜ್ಯಗಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಧನಸಹಾಯವನ್ನು ಮಾಡಿದ್ದಾರೆ.