ನಾಯಕನೇ ತಂಡದ ಶಕ್ತಿ
ಯೂಸುಫ್ ಪಠಾಣ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಯಶಸ್ಸಿಗೆ ಕಾರಣ ಎಂದಿದ್ದು ಬೇರೆ ಯಾರನ್ನೂ ಅಲ್ಲ. ಅದು ಕೆಕೆಆರ್ ತಂಡದ ನಾಯಕನಾಗಿದ್ದ ಗೌತಮ್ ಗಂಭೀರ್. ತಂಡವನ್ನು ಶಾಂತ ರೀತಿಯಿಂದ ಹಾಗೂ ಸಾಕಷ್ಟು ಶಿಸ್ತುಬದ್ಧವಾಗಿ ಗೌತಮ್ ಗಂಭೀರ್ ಮುನ್ನಡೆಸುತ್ತಿದ್ದರು ಎಂದು ಯೂಸುಫ್ ಪಠಾಣ್ ಹೇಳಿದ್ದಾರೆ.
ಆಟಗಾರರಿಗೆ ನಾಯಕನ ಬೆಂಬಲ
ಲೈವ್ ಸಂವಾದದಲ್ಲಿ ಮೊಹಮದ್ ಕೈಫ್ ಜೊತೆಗೆ ಪಠಾಣ್ ಭಾಗಿಯಾಗಿದ್ದರು, ಈ ಸಂದರ್ಭದಲ್ಲಿ ಗಂಭೀರ್ ನಾಯಕತ್ವದ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಗೌತಮ್ ಗಂಭೀರ್ ಪ್ರತೀ ಆಟಗಾರನಿಗೂ ಬೆಂಬಲವಾಗಿ ನಿಲ್ಲುತ್ತಿದ್ದರು. ಪ್ರತೀ ಸಂದರ್ಭದಲ್ಲೂ ಸರಿಯಾದ ರಣತಂತ್ರವನ್ನು ಸಿದ್ಧಪಡಿಸುತ್ತಿದ್ದರು. ಆತನೋರ್ವ ನಿರ್ಭೀತ ನಾಯಕ ಎಂದು ಗೌತಮ್ ಗಂಭೀರ್ ಬಗ್ಗೆ ಹೇಳಿದ್ದಾರೆ.
2011ರಲ್ಲಿ ನಾಯಕತ್ವ ಕೆಕೆಆರ್ ಸೇರಿಕೊಂಡ ಗಂಭೀರ್
ಗೌತಮ್ ಗಂಭೀರ್ ಆರಂಭದಲ್ಲಿ ಮೂರು ಆವೃತ್ತಿಗಳಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಬಾಗವಾಗಿದ್ದರು. ಆದರೆ 2011ರ ಐಪಿಎಲ್ಗೂ ಮುನ್ನ ನಡೆದ ಹರಾಜಿನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಗಂಭೀರ್ ಅವರನ್ನ ಸೇರ್ಪಡೆಗೊಳಿಸಿ ತಂಡದ ನಾಯಕನನ್ನಾಗಿ ಮಾಡಿತ್ತು. ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯ ಈ ನಿರ್ಧಾರವನ್ನು ಗಂಭೀರ್ ಬಲವಾಗಿ ಸಮರ್ಥಿಸಿಕೊಂಡಿದ್ದರು.
ಎರಡು ಬಾರಿ ಚಾಂಪಿಯನ್ ಪಟ್ಟ
ಗಂಭೀರ್ ಕೆಕೆಆರ್ ತಂಡದ ನಾಯಕತ್ವ ವಹಿಸಿಕೊಂಡ ಎರಡನೇ ವರ್ಷಕ್ಕೆ ಕೊಲ್ಕತ್ತಾ ತಂಡ ಐಪಿಎಲ್ನಲ್ಲಿ ಮೊಟ್ಟ ಮೊದಲಬಾರಿಗೆ ಚಾಂಪಿಯನ್ ಆಗಿತ್ತು. 2012ರಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ಮತ್ತೆರಡು ವರ್ಷಕ್ಕೆ ಮತ್ತೊಂದು ಐಪಿಎಲ್ ಟ್ರೋಫಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪಾಲಾಗಿತ್ತು. ನಾಯಕತ್ವ ಮಾತ್ರವಲ್ಲ ಅದ್ಭುತ ಬ್ಯಾಟಿಂಗ್ನಿಂದಲೂ ಗಂಭೀರ್ ದೊಡ್ಡ ಯಶಸ್ಸು ಸಾಧಿಸಿದ್ದರು.