ನವದೆಹಲಿ, ಸೆ. 22: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಆಕರ್ಷಕ ಆಟವಾಡಿದ ನಾಯಕ ವಿರಾಟ್ ಕೊಹ್ಲಿ ಅವರು ಕ್ರಿಕೆಟ್ ನ ಮೂರು ಮಾದರಿಯಲ್ಲಿ 50 ಪ್ಲಸ್ ರನ್ ಸರಾಸರಿ ಹೊಂದಿರುವ ಆಟಗಾರನಾಗಿ ಮಿಂಚುತ್ತಿದ್ದಾರೆ. ಅದರೆ ಕೊಹ್ಲಿ ನಾಯಕತ್ವದ ಬಗ್ಗೆ ಅನೇಕ ಬಾರಿ ಪ್ರಶ್ನೆಗಳು ಎದ್ದಿವೆ. ಟೀಂ ಇಂಡಿಯಾದ ಮಾಜಿ ನಾಯಕ, ಸಂಸದ ಗೌತಮ್ ಗಂಭೀರ್ ಮತ್ತೊಮ್ಮೆ ಕೊಹ್ಲಿ ವಿರುದ್ಧ ದನಿ ಎತ್ತಿದ್ದಾರೆ.
"ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಕೊಹ್ಲಿ ಯಶಸ್ವಿಗೆ ಎಂಎಸ್ ಧೋನಿ ಹಾಗೂ ರೋಹಿತ್ ಶರ್ಮ ಅವರೇ ಕಾರಣ. ಈ ಇಬ್ಬರು ಆಟಗಾರರು ತಂಡದಲ್ಲಿ ಇದ್ದಿದ್ದರಿಂದ ಕೊಹ್ಲಿ ಮೇಲಿನ ಹೊರೆ ಕಡಿಮೆಯಾಯಿತು" ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.
'ಗೋಡೆ' ದ್ರಾವಿಡ್ ಜೊತೆ ರವಿ ಶಾಸ್ತ್ರಿ: ಟ್ರೋಲ್ ಹೈಕ್ಳಿಗೆ ಮೃಷ್ಟಾನ್ನ!
"ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಇನ್ನಷ್ಟು ಪಳಗಬೇಕಿದೆ. ಇಂಗ್ಲೆಂಡ್ನಲ್ಲಿ ನಡೆದ ಕಳೆದ ವಿಶ್ವಕಪ್ನಲ್ಲಿ ಕೊಹ್ಲಿ ನಾಯಕನಾಗಿ ತಂಡವನ್ನು ಉತ್ತಮವಾಗಿ ಮುನ್ನಡೆಸಿದರು. ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಕೊಹ್ಲಿ ಕ್ಯಾಪ್ಟನ್ ಆಗಿ ಯಶಸ್ಸು ಸಾಧಿಸಲು ರೋಹಿತ್ ತಂಡದಲ್ಲಿರುವುದಕ್ಕೆ ಸಹಕಾರಿಯಾಗಿದೆ"
"ಐಪಿಎಲ್ನಲ್ಲಿ ನಾಯಕನಾಗಿ ರೋಹಿತ್ ಶರ್ಮಾ ಅವರು ಮುಂಬೈ ಇಂಡಿಯನ್ಸ್ ತಂಡವನ್ನು ಸಮರ್ಥವಾಗಿ ಮುನ್ನಡೆಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಐಪಿಎಲ್ ಕಪ್ ಗೆಲ್ಲಿಸಿಕೊಟ್ಟ ಧೋನಿ ಸಾಧನೆ ಅನನ್ಯ. ಇವರಿಬ್ಬರಿಗೆ ಹೋಲಿಸಿದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕೊಹ್ಲಿ ಸಾಧನೆ ಬಗ್ಗೆ ಎಲ್ಲರಿಗೂ ತಿಳಿದಿದೆ" ಎಂದು ಗಂಭೀರ್ ಹೇಳಿದ್ದಾರೆ.
"ಕೆಎಲ್ ರಾಹುಲ್ ಗೆ ಸಾಕಷ್ಟು ಅವಕಾಶಗಳನ್ನು ನೀಡಲಾಗಿದ್ದು, ವಿಫಲವಾಗಿದ್ದಾರೆ. ರೋಹಿತ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿದರೆ ಆಡುವ ಹನ್ನೊಂದರಲ್ಲಿ ಆಯ್ಕೆ ಮಾಡಬೇಕಾಗುತ್ತದೆ. ತಂಡಕ್ಕೆ ಆಯ್ಕೆಯಾಗಿ ಬೆಂಚ್ ನಲ್ಲಿ ಕೂರಿಸಿದರೆ ನಷ್ಟ ಖಂಡಿತ" ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.