ಭಾರತ ವಿಶ್ವ ಚಾಂಪಿಯನ್ಸ್ ಆಗಲಾರದು
2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಸಿಸಿರುವ ಗಂಭೀರ್, ಟೀಮ್ ಇಂಡಿಯಾದ ಹಿನ್ನಡೆಗೆ ಕಾರಣ ವಿವರಿಸುತ್ತ, ಎಷ್ಟರವರೆಗೆ ಭಾರತ ತಂಡ ಮಾನಸಿಕ ಅಂಶಗಳನ್ನು ಉತ್ತಮಗೊಳಿಸಿಕೊಳ್ಳುವುದಿಲ್ಲವೋ ಅಲ್ಲಿವರೆಗೂ ಕೊಹ್ಲಿಪಡೆ ವಿಶ್ವಚಾಂಪಿಯನ್ಸ್ ಅನ್ನಿಸಿಕೊಳ್ಳಲಾರದು ಎಂದಿದ್ದಾರೆ.
ಬೇರೆ ತಂಡಗಳ ಗೆಲುವಿನ ಗುಟ್ಟಿದು
'ತಂಡದಲ್ಲಿ ಉತ್ತಮ, ಅತ್ಯುತ್ತಮ ಆಟಗಾರನಾಗಿರುವುದನ್ನು ನೀವು ಪ್ರತ್ಯೇಕವಾಗಿರಿಸುವುದು ನಿರ್ಣಾಯಕ ಆಟಗಳಲ್ಲಿ ನೀವು ಏನು ಮಾಡುತ್ತೀರಿ ಎಂಬುದನ್ನವಲಂಭಿಸಿ. ನಾವು ಒತ್ತಡವನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ, ಬಹುಶಃ ಇತರ ತಂಡಗಳು ಒತ್ತಡವನ್ನು ನಿಭಾಯಿಸುವಲ್ಲಿ ಸಮರ್ಥವಾಗಿವೆ,' ಎಂದು ಗಂಭೀರ್ ಹೇಳಿದ್ದಾರೆ.
ವಿಶ್ವ ಚಾಂಪಿಯನ್ ಆಗುವ ಸಾಮರ್ಥ್ಯವಿದೆ
ಮಾತು ಮುಂದುವರೆಸಿದ ಗಂಭೀರ್, 'ನೀವು ಎಲ್ಲಾ ಸೆಮಿಫೈನಲ್, ಫೈನಲ್ ಪಂದ್ಯಗಳನ್ನು ಗಮನಿಸಿ; ನಾವು ಲೀಗ್ ಹಂತಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇವೆ. ಆದರೆ ಸೆಮಿಫೈನಲ್ ಅಥವಾ ನಾಕೌಟ್ ಹಂತಗಳಲ್ಲಿ ಚೆನ್ನಾಗಿ ಆಡುತ್ತಿಲ್ಲ. ಇದು ಬಹುಶಃ ನಮ್ಮ ಮಾನಸಿಕ ಕಠಿಣತೆಯ ಕಾರಣದಿಂದಿರಬಹುದು. ನಾವಿದರ ಬಗ್ಗೆ ಯಾವಾಗಲೂ ಮಾತನಾಡುತ್ತಿರುತ್ತೇವೆ. ನಮಗೆ ವಿಶ್ವ ಚಾಂಪಿಯನ್ ಆಗುವ ಸಾಮರ್ಥ್ಯವಿದೆ. ಆದರೆ ಕ್ರಿಕೆಟ್ ಮೈದಾನಕ್ಕೆ ಹೋಗಿ ನಾವಿದನ್ನು ಸಾಭೀತುಪಡಿಸದಿದ್ದರೆ ನಾವು ವಿಶ್ವಚಾಂಪಿಯನ್ ಆಗಲಾರೆವು,' ಎಂದರು.
ಈ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಸೋತಿದೆ
ಗಂಭೀರ್ ಹೇಳಿರುವ ಮಾತುಗಳು ನಿಜ ಅನ್ನಿಸುತ್ತದೆ. ಭಾರತ ನಿರ್ಣಾಯಕ ಎನಿಸಿದ ನಾಕೌಟ್ ಪಂದ್ಯಗಳನ್ನೇ ಸೋತ ಅನೇಕ ಉದಾಹರಣೆಗಳಿವೆ. 2017ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿನ ಫೈನಲ್ ಸೋಲು, 2019ರಲ್ಲಿ ವಿಶ್ವಕಪ್ ಸೆಮಿಫೈನಲ್ ಸೋಲು ಸಾಕ್ಷಿ ಹೇಳುತ್ತವೆ. 2013ರಲ್ಲಿ ಭಾರತ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದೇ ಕೊನೆ, ಆ ಬಳಿಕ ಭಾರತ ಯಾವ ಐಸಿಸಿ ಟೂರ್ನಿಗಳನ್ನೂ ಗೆದ್ದಿಲ್ಲ. ಎಂಎಸ್ ಧೋನಿ ನಾಯಕತ್ವದಲ್ಲೂ ಭಾರತ 2014ರ ಟಿ20 ವಿಶ್ವಕಪ್ ಫೈನಲ್, 2015ರ ವಿಶ್ವಕಪ್ ಸೆಮಿಫೈನಲ್ ಮತ್ತು 2016ರ ವಿಶ್ವ ಟಿ20ಯ ಸೆಮಿಫೈನಲ್ನಲ್ಲಿ ಸೋತಿತ್ತು.