ನಾಟಿಂಗ್ಹ್ಯಾಮ್ ಆಗಸ್ಟ್ 1: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಐದು ಪಂದ್ಯಗಳ ಈ ಟೆಸ್ಟ್ ಸರಣಿ ಆಗಸ್ಟ್ 4ರಿಂದ ಆರಂಭವಾಗಲಿದೆ. ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಸರಣಿಯ ಆರಂಭಕ್ಕೂ ಮುನ್ನ ಯುವ ಆಟಗಾರ ರಿಷಭ್ ಪಂತ್ ಪ್ರತಿಕ್ರಿಯೆ ನೀಡಿದ್ದು ತನ್ನ ಆಟದಲ್ಲಿನ ಬೆಳವಣಿಗೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಕಳೆದ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ವಿರುದ್ಧ ಭಾರತದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ರಿಷಭ್ ಪಂತ್ ನೀಡಿದ ಪ್ರದರ್ಶನದಿಂದಾಗಿ ಈ ಸರಣಿಯಲ್ಲಿಯೂ ಪಂತ್ ಮೇಲೆ ಭಾರೀ ನಿರೀಕ್ಷೆಗಳು ಇವೆ. ಈ ಸರಣಿಯಲ್ಲಿ ಪಂತ್ ಟೀಮ್ ಇಂಡಿಯಾ ಪಾಲಿಗೆ ದೊಡ್ಡ ಅಸ್ತ್ರವಾಗಿ ಗುರುತಿಸಿಕೊಂಡಿದ್ದಾರೆ. ಈ ನಿರೀಕ್ಷೆಗಳ ಬಗ್ಗೆ ತನ್ನ ಆಟದಲ್ಲಿನ ಬೆಳವಣಿಗೆಯ ಬಗ್ಗೆ ಅವರು ಮಾತನಾಡಿದರು.
"ಇದೊಂದು ಸುಂದರವಾದ ಪ್ರಯಾಣವಾಗಿದೆ. ನನ್ನ ವೃತ್ತಿಬದುಕಿನ ಪ್ರಾರಂಭದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದೇನೆ. ಕ್ರಿಕೆಟಿಗನಾಗಿ ನೀವು ಬೆಳವಣಿಗೆಯನ್ನು ಕಾಣಬೇಕೆಂದರೆ ತಪ್ಪುಗಳಿಂದ ಪಾಠ ಕಲಿಯಬೇಕು. ನಿಮಲ್ಲಿ ಬೆಳವಣಿಗೆಯಾಗಬೇಕು. ಮೈದಾನಕ್ಕೆ ಇಳಿಯಬೇಕು ಹಾಗೂ ಉತ್ತಮವಾಗಿ ಆಡಬೇಕು" ಎಂದು ರಿಶಭ್ ಪಂತ್ ಹೇಳಿಕೆ ನೀಡಿದ್ದಾರೆ.
"ನನ್ನ ತಪ್ಪುಗಳಿಂದ ನಾನು ಪಾಠವನ್ನು ಕಲಿತಿದ್ದೇನೆ. ಅದಾದ ಬಳಿಕ ನನಗೆ ದೊರೆತ ಅವಕಾಶವನ್ನು ನಾನು ಉತ್ತವಾಗಿ ಬಳಸಿಕೊಳ್ಳಲು ಸಾಧ್ಯವಾಯಿತು. ಅದಕ್ಕಾಗಿ ನಾನು ಖುಷಿಪಡುತ್ತೇನೆ. ಹೀಗಾಗಿ ನಾನು ಸಂತೋಷದಿಂದಿದ್ದೇನೆ" ಎಂದು ರಿಷಭ್ ಪಂತ್ ಹೇಳಿಕೊಂಡಿದ್ದಾರೆ. ಬಿಸಿಸಿಐ ಟಿವಿಯಲ್ಲಿ ಮಾತನಾಡಿದ ಪಂತ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ರಿಷಭ್ ಪಂತ್ ತಾನು ಉತ್ತಮ ಕ್ರಿಕೆಟಿಗನಾಗಲು ಎಲ್ಲಾ ಕ್ರಿಕೆಟಿಗರಿಂದಲೂ ಕಲಿಯುತ್ತಿರುವುದಾಗಿ ಹೇಳಿದ್ದಾರೆ. "ನಾನು ರೋಹಿತ್ ಶರ್ಮಾ ಅವರ ಬಳಿಗೆ ತೆರಳಿ ಅವರಿಂದದಲೂ ಸಾಕಷ್ಟು ಮಾಹಿತಿಗಳನ್ನು ಕಲೆಹಾಕುತ್ತಿರುತ್ತೇನೆ. ಕಳೆದ ಪಂದ್ಯದಲ್ಲಿ ಅವರು ಏನೆಲ್ಲಾ ಮಾಡಿದರು ಏನೆಲ್ಲಾ ಮಾಡಬಹುದಾಗಿತ್ತು. ಮುಂದೆ ಏನು ನಾವು ಮಾಡಬೇಕಿದೆ ಹಾಗೂ ಮುಂದಿನ ಪಂದ್ಯಗಳಲ್ಲಿ ನಾವು ಏನೆಲ್ಲಾ ನಿರೀಕ್ಷೆಯನ್ನು ಮಾಡಬಹುದು ಎಲ್ಲವನ್ನು ತಿಳಿದುಕೊಳ್ಳಲು ಬಯಸುತ್ತೇನೆ. ಇದನ್ನು ನನ್ನ ಆಟದಲ್ಲಿ ಸೇರ್ಪಡೆಗಿಳಿಸುವ ಪ್ರಯತ್ನ ನಡೆಸುತ್ತೇಮೆ" ಎಂದಿದ್ದಾರೆ ಪಂತ್.
"ನಾನು ವಿರಾಟ್ ಕೊಹ್ಲಿ ಅವರಿಂದಲೂ ತಾಂತ್ರಿಕವಾಗಿ ಸಾಕಷ್ಟು ಸಲಹೆಯನ್ನು ಪಡೆಯುತ್ತೇನೆ. ವಿಶೇಷವಾಗಿ ಇಂಗ್ಲೆಂಡ್ ವಿರುದ್ಧದ ಸರಣಿಗಾಗಿ ಅವರಿಂದ ಸಾಕಷ್ಟು ಮಾಹಿತಿಗಳನ್ನು ಪಡೆದಿದ್ದೇನೆ" ಎಂದು ರಿಷಭ್ ಪಂತ್ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲಾ ಕ್ರಿಕೆಟಿಗರಿಂದಲೂ ತಾನು ಮಾಹಿತಿಯನ್ನು ಪಡೆದು ತನ್ನ ಆಟದಲ್ಲಿ ಅಳವಡಿಸಿಕೊಳ್ಳಲು ಬಯಸುವುದಾಗಿ ಪಂತ್ ಹೇಳಿದ್ದಾರೆ.
ನಾನು ರವಿ ಶಾಸ್ತ್ರಿ ಅವರೊಂದಿಗೂ ನಾನು ಸಾಕಷ್ಟು ಮಾತನಾಡುತ್ತಿರುತ್ತೇನೆ. ವಿಶ್ವಾದ್ಯಂತ ಅವರು ಸಾಕಷ್ಟು ಕ್ರಿಕೆಟ್ ಆಡಿದ ಅನುಭವ ಹೊಂದಿದ್ದಾರೆ. ಆರ್ ಅಶ್ವಿನ್ ಅವರಿಂದಲೂ ನಾನು ಸಲಹೆಗಳನ್ನು ಪಡೆಯುತ್ತೇಬೆ. ಬೌಲರ್ ಆಗಿ ಅವರು ಎದುರಾಳಿ ಬ್ಯಾಟ್ಸ್ಮನ್ ಯಾವ ರೀತಿಯಾಗಿ ಆಲೋಚಿಸುತ್ತಾನೆ ಎಂಬುದನ್ನು ಚೆನ್ನಾಗಿ ಬಲ್ಲವರಾಗಿದ್ದಾರೆ" ಎಂದು ರಿಷಭ್ ಪಂತ್ ಬಿಸಿಸಿಐ ಟಿವಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.
ಇಂಗ್ಲೆಂಟ್ ವಿರುದ್ಧದ ಟೆಸ್ಟ್ ಸರಣಿಗೆ ಮುನ್ನ ಒಂದು ತಿಂಗಳ ವಿರಾಮದ ಅವಧಿಯಲ್ಲಿದ್ದ ಸಂದರ್ಭದಲ್ಲಿ ಟೀಮ್ ಇಂಡಿಯಾದ ಯುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಕೊರೊನಾವೈರಸ್ಗೆ ತುತ್ತಾಗಿದ್ದರು. ಹೀಗಾಗಿ ಸುಮಾರು ಹತ್ತು ದಿನಗಳ ಕಾಲ ಐಸೋಲೇಶನ್ಗೆ ಒಳಗಾಗಿದ್ದರು. ಸದ್ಯ ರಿಷಭ್ ಪಂತ್ ಸಂಪೂರ್ಣವಾಗಿ ಗುಣಮುಖವಾಗಿದ್ದು ಇಂಗ್ಲೆಂಡ್ ವಿರುದ್ಧದ ಸರಣಿಗೆ ಸಜ್ಜಾಗಿದ್ದಾರೆ. ಕೌಂಟಿ ಸೆಲೆಕ್ಟ್ ತಂಡದ ವಿರುದ್ಧದ ಅಭ್ಯಾಸ ಪಂದ್ಯದ ಸಂದರ್ಭದಲ್ಲಿಯೇ ರಿಷಭ್ ಪಂತ್ ಟೀಮ್ ಇಂಡಿಯಾವನ್ನು ಸೇರಿಕೊಂಡಿದ್ದು ಬಳಿಕ ತಂಡದ ಜೊತೆಗೆ ಅಭ್ಯಾಸದಲ್ಲಿಯೂ ಭಾಗಿಯಾಗಿದ್ದಾರೆ.