ಎಲ್ಲೂ ಸಲ್ಲಬಲ್ಲ ರಾಹುಲ್
ರಾಜ್ಕೋಟ್ನಲ್ಲಿ ನಡೆದಿದ್ದ ಭಾರತ-ಆಸ್ಟ್ರೇಲಿಯಾ ದ್ವಿತೀಯ ಏಕದಿನ ಪಂದ್ಯದಲ್ಲಿ ಕೆಎಲ್ ರಾಹುಲ್ 5ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದರು. ಅಷ್ಟೇ ಅಲ್ಲ 52 ಎಸೆತಗಳಿಗೆ 80 ರನ್ ಕೊಡುಗೆಯೂ ನೀಡಿದರು. ರಾಹುಲ್ ಅವರ ಬ್ಯಾಟಿಂಗ್ ಕ್ರಮಾಂಕವನ್ನು ಅಗತ್ಯಕ್ಕೆ ತಕ್ಕಂತೆ ಬದಲಾವಣೆ ಮಾಡಲಾಗುತ್ತಲೇಯಿದೆ. ಆದರೆ ಎಲ್ಲಾ ಕ್ರಮಾಂಕಕ್ಕೂ ರಾಹುಲ್ ಹೊಂದಿಕ್ಕೊಳ್ಳುತ್ತಿದ್ದಾರೆ, ಪ್ರೌಢ ಆಟ ಪ್ರದರ್ಶಿಸುತ್ತಿದ್ದಾರೆ.
ರಾಜ್ಕೋಟ್ನಲ್ಲಿ ರಿಷಬ್ ಪಂತ್ ಅನುಪಸ್ಥಿತಿಯಲ್ಲಿ ವಿಕೆಟ್ ಕೀಪಿಂಗ್ ಜವಾಬ್ದಾರಿ ಕೊಟ್ಟರೆ ಅದನ್ನೂ ರಾಹುಲ್ ಯಶಸ್ವಿಯಾಗಿ ನಿಭಾಯಿಸಿದರು.
ದ್ರಾವಿಡ್ ಅವರದ್ದೂ ಇದೇ ಕತೆ
ಟೀಮ್ ಇಂಡಿಯಾದಲ್ಲಿದ್ದಾಗ ರಾಹುಲ್ ದ್ರಾವಿಡ್ ಕೂಡ ಹೀಗೆಯೇ, ವಹಿಸಿಕೊಟ್ಟ ಎಲ್ಲಾ ಜವಾಬ್ದಾರಿಯನ್ನೂ ನಿಭಾಯಿಸುತ್ತಿದ್ದರು. ಆರಂಭಿಕ ಬ್ಯಾಟ್ಸ್ಮನ್ಗಳು ವಿಫಲಾರಾದಾಗ, ಕೀಪರ್ ಗಾಯಗೊಂಡಾಗ, ಬೆಸ್ಟ್ ಫಿನಿಷರ್ ಇಲ್ಲದಾಗೆಲ್ಲ ರಾಹುಲ್ ದ್ರಾವಿಡ್ ಅವರಿಗೆ ಜವಾಬ್ದಾರಿ ನೀಡಲಾಗುತ್ತಿತ್ತು. ದ್ರಾವಿಡ್ ಎಲ್ಲಾ ಜವಾಬ್ದಾರಿಗಳನ್ನೂ ಹೆಗಲಿಗೇರಿಸಿಕೊಳ್ಳುತ್ತಿದ್ದರು. ಅದೇ ಆಯಾ ಬ್ಯಾಟಿಂಗ್ ಕ್ರಮಾಂಕ, ಕೀಪರ್ ಫಿಟ್ ಇದ್ದಾಗ ಮತ್ತೆ ದ್ರಾವಿಡ್ರನ್ನು ಕೊಂಚ ಕಡೆಗಣಿಸಲಾಗುತ್ತಿತ್ತು.
ಬಾಲ್ಯದಲ್ಲೂ ದ್ರಾವಿಡ್ಗೆ ಹೋಲಿಸುತ್ತಿದ್ದರು
'ದ್ರಾವಿಡ್ ಅವರಂತವರಿಗೆ ಹೋಲಿಸುತ್ತಿರುವುದು ನೋಡಿ ಖುಷಿಯಾಗುತ್ತಿದೆ. ಸಣ್ಣವನಿದ್ದಾಗ, ಕ್ರಿಕೆಟ್ ಆಡುತ್ತಾ ಬೆಳೆಯುತ್ತಿದ್ದಾಗ ಇದೇ ಹೋಲಿಕೆ ಆಗಾಗ ಬರುತ್ತಿದ್ದಿದಿದೆ. ಯಾಕೆಂದರೆ ಅವರು ರಾಹುಲ್ ದ್ರಾವಿಡ್ ನಾನು ಕೂಡ ರಾಹುಲ್. ಇಬ್ಬರೂ ಇದೇ ಕರ್ನಾಟಕದ ಕ್ರಿಕೆಟಿಗರು,' ಎಂದು ದ್ರಾವಿಡ್ ಬಗೆಗಿನ ಹೋಲಿಕೆಗೆ ಕೆಎಲ್ ರಾಹುಲ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಒಂದು ಕ್ಷಣ ದ್ರಾವಿಡ್ ನೆನಪಾದರು
ಕಳೆದ 9 ತಿಂಗಳಿನಿಂದ ಓಪನರ್, ಒನ್ ಡೌನ್, 4ನೇ, 5ನೇ ಬ್ಯಾಟಿಂಗ್ ಕ್ರಮಾಂಕ, ವಿಕೆಟ್ ಕೀಪಿಂಗ್ ಹೀಗೆ ತಂಡದ ಅಗತ್ಯಕ್ಕೆ ತಕ್ಕಂತೆ ರಾಹುಲ್ಗೆ ಬೇರೆ ಬೇರೆ ಕರ್ತವ್ಯಗಳನ್ನು ವಹಿಸಿಕೊಡಲಾಗುತ್ತಿದೆ. ರಾಹುಲ್ ಇವೆಲ್ಲದಕ್ಕೂ ಹೊಂದಿಕೊಂಡು ಯಶಸ್ವಿಯಾಗಿ ಕರ್ತವ್ಯ ನಿಭಾಯಿಸುತ್ತಿದ್ದಾರೆ. ರಾಹುಲ್ ಈಗಿನ ಪರಿಸ್ಥಿತಿ ಆಗ ದ್ರಾವಿಡ್ ಇದ್ದ ಬಗೆಯನ್ನೊಮ್ಮೆ ನೆನಪಿಸಿತು. ಕಣ್ಣಮುಂದೆ 'ಗೋಡೆ' ನಿಂತಿತು.