ಸಂಗತಿಗಳ ಬಗ್ಗೆ ತುಟಿ ಬಿಚ್ಚಿದ ಚಾಪೆಲ್
ಭಾರತೀಯ ಕ್ರಿಕೆಟ್ ತಂಡದ ಕೋಚಿಂಗ್ ಜವಾಬ್ದಾರಿಯಿಂದ ಕೆಳಗಿಳಿದು ಕೆಲ ವರ್ಷಗಳ ಬಳಿಕ ಗ್ರೆಗ್ ಚಾಪೆಲ್ ಕೆಲ ಸಂಗತಿಗಳ ಬಗ್ಗೆ ತುಟಿ ಬಿಚ್ಚಿದ್ದಾರೆ. ಒಬ್ಬ ಆಟಗಾರನಾಗಿ ರಾಹುಲ್ ದ್ರಾವಿಡ್ ಅವರಲ್ಲಿದ್ದ ಉದ್ದೇಶ ಮತ್ತು ಆ ಉದ್ದೇಶ ಮುಂದೆ ಟೀಮ್ ಇಂಡಿಯಾ ಬಲಿಷ್ಠ ತಂಡವಾಗಿ ಹೊರಹೊಮ್ಮೆಲು ಕಾರಣವಾದ ಬಗೆಯ ಬಗ್ಗೆ ಚಾಪೆಲ್ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಜೊತೆಗೆ ಈಗ ಬಿಸಿಸಿಐ ಅಧ್ಯಕ್ಷರಾಗಿರುವ ಆಗಿನ ನಾಯಕ ಸೌರವ್ ಗಂಗೂಲಿ ಬಗ್ಗೆಯೂ ಮಾತನಾಡಿದ್ದಾರೆ.
ದ್ರಾವಿಡ್ಗೆ ಯಾರೂ ಬೆಂಬಲಿಸಲಿಲ್ಲ
ಗ್ರೆಗ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾಗ ಭಾರತ ತಂಡದಿಂದ ಸೌರವ್ ಗಂಗೂಲಿಯನ್ನು ನಾಯಕತ್ವದಿಂದ ಮತ್ತು ಪ್ಲೇಯಿಂಗ್ XIನಿಂದ ತೆಗೆದು ಹಾಕಲಾಗಿತ್ತು. ಅದೇ ವೇಳೆ ನಾಯಕರಾಗಿದ್ದ ರಾಹುಲ್ ದ್ರಾವಿಡ್ಗೆ ತಂಡದಲ್ಲಿ ಯಾರ ಬೆಂಬಲವೂ ಇರಲಿಲ್ಲ. ಅಲ್ಲದೆ ಕೆಲ ಆಟಗಾರರು ತಂಡದ ಬೆಳವಣಿಗೆಗೆ ಅಡ್ಡಿಯಾಗುವಂತಹ ಪ್ರತಿರೋಧ ಒಡ್ಡುತ್ತಿದ್ದರು. ಇದು ತಂಡದ ಹಿನ್ನಡೆಗೆ ಕಾರಣವಾಗಿತ್ತು ಎಂದು ಗ್ರೆಗ್ ಹೇಳಿದ್ದಾರೆ.
ಗಂಗೂಲಿ ಡ್ರಾಪ್ ಒಂದು ಪಾಠವಾಗಿತ್ತು
'ವಿಶ್ವದಲ್ಲಿ ಭಾರತ ತಂಡ ಅತ್ಯುತ್ತಮ ತಂಡವಾಗಿ ಹೊರ ಹೊಮ್ಮುವಲ್ಲಿ ರಾಹುಲ್ ದ್ರಾವಿಡ್ ನಿಜಕ್ಕೂ ಉತ್ತಮ ಪ್ರಯತ್ನ ಮಾಡಿದ್ದರು, ಕೊಡುಗೆಗಳನ್ನು ನೀಡಿದ್ದರು. ಬೇಜಾರಿನ ಸಂಗತಿಯೆಂದರೆ ತಂಡದಲ್ಲಿರುವ ಎಲ್ಲರಿಗೂ ಆ ಉದ್ದೇಶ ಇರಲಿಲ್ಲ. ಅವರೆಲ್ಲರೂ ತಂಡದಲ್ಲಿ ನೆಲೆಯೂರುವುದಕ್ಕಾಗಿ ಗಮನ ಹರಿಸಿದ್ದರು. ಗಂಗೂಲಿಯನ್ನು ತಂಡದಿಂದ ಕೈ ಬಿಟ್ಟಿದ್ದರಿಂದ ಎಲ್ಲಾ ಆಟಗಾರರು ಅವರವರ ಆಟದತ್ತ ಗಮನ ಹರಿಸಿದ್ದರು. ಯಾಕೆಂದರೆ ಮುಂದೆ ಯಾರೂ ತಂಡದಿಂದ ಹೊರ ಬೀಳಬಹುದು ಎಂಬ ಭಯ ಅವರಲ್ಲಿತ್ತು. ಇದು ಒಂದರ್ಥದಲ್ಲಿ ಇಡೀ ತಂಡದ ಬದಲಾವಣೆಗೆ ಕಾರಣವಾಗಿತ್ತು,' ಎಂದು ಚಾಪೆಲ್ ಹೇಳಿಕೊಂಡಿದ್ದಾರೆ.