ಟೀಮ್ ಇಂಡಿಯಾ ಆಟಗಾರ ಹನುಮ ವಿಹಾರಿ ಶನಿವಾರ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ವೊಂದಕ್ಕೆ ಇನ್ಸ್ಟಾಗ್ರಾಂ ಬಳಕೆದಾರ ಮಾಡಿದ ಕಾಮೆಂಟ್ ವಿರುದ್ಧ ಕಿಡಿಕಾರಿದ್ದಾರೆ.
ಕಳೆದ ಹಲವಾರು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಕೊರೊನಾಸೋಂಕಿತರಿಗೆ ಹನುಮ ವಿಹಾರಿ ಸಹಾಯವನ್ನು ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ 'ಯಾರು ಸಂಕಷ್ಟದಲ್ಲಿದ್ದಾರೆ ಅಂಥವರಿಗೆ ಸಹಾಯ ಮಾಡಲು ನಾನು ತಯಾರಿದ್ದೇನೆ, ಯಾರಿಗೆ ಸಹಾಯದ ಅಗತ್ಯತೆ ಇದೆಯೋ ಅವರು ನನಗೆ ವೈಯಕ್ತಿಕವಾಗಿ ಸಂದೇಶವನ್ನು ಕಳುಹಿಸಿ ನಾನು ಖಂಡಿತವಾಗಿಯೂ ನಿಮಗೆ ಸಹಾಯ ಮಾಡುತ್ತೇನೆ. ಇಂತಹ ಸಮಯದಲ್ಲಿ ಕಷ್ಟದಲ್ಲಿರುವವರಿಗೆ ನಾವು ಸಹಾಯ ಮಾಡಬೇಕಿದೆ' ಎಂದು ಬರೆದುಕೊಳ್ಳುವುದರ ಮೂಲಕ ನೆರವು ನೀಡಲು ಮುಂದಾಗಿದ್ದರು.
ಹೀಗೆ ಶನಿವಾರ ಅನುಷಾ ಎಂಬ ಯುವತಿಯ ತಂದೆ ಮತ್ತು ಆಕೆಯ ಸಹೋದರ ಕೊರೊನಾ ಸೋಂಕಿನಿಂದ ಬಳಲುತ್ತಿದ್ದು ವೆಂಟಿಲೇಟರ್ನಲ್ಲಿದ್ದಾರೆ, ಹೀಗಾಗಿ ಅವರ ಚಿಕಿತ್ಸೆಗೆ ದಿನಕ್ಕೆ 1.5 ಲಕ್ಷ ರೂಪಾಯಿಗಳು ಖರ್ಚಾಗುತ್ತಿದ್ದು ಇಚ್ಛೆ ಇದ್ದವರು ಸಹಾಯ ಮಾಡಿ ಎಂದು ಹನುಮ ವಿಹಾರಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಾಕಿದ್ದರು. ಈ ಪೋಸ್ಟ್ಗೆ ಇನ್ಸ್ಟಾಗ್ರಾಂ ಬಳಕೆದಾರನೊಬ್ಬ 'ನೀವೊಬ್ಬ ಕ್ರೀಡಾಪಟು ಅಲ್ಲವೇ, ನೀವೇ ದೇಣಿಗೆ ನೀಡಿ' ಎಂದು ವಿಹಾರಿಗೆ ಕಾಮೆಂಟ್ ಮಾಡಿದ್ದ. ಬಳಕೆದಾರನ ಈ ಕಾಮೆಂಟ್ಗೆ ಆಕ್ರೋಶ ವ್ಯಕ್ತಪಡಿಸಿದ ಹನುಮ ವಿಹಾರಿ 'ನಿಮ್ಮಂಥ ಜನ ಈ ದೇಶದಲ್ಲಿರುವುದರಿಂದಲೇ ಭಾರತ ಈ ರೀತಿಯ ಪರಿಸ್ಥಿತಿಯಲ್ಲಿದೆ. ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ' ಎಂದು ಮರು ಉತ್ತರ ನೀಡಿದ್ದಾರೆ. ಸದ್ಯ ಹನುಮವಿಹಾರಿ ನೀಡಿರುವ ಈ ಮರು ಉತ್ತರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.