ಘಟನೆಯ ಹಿನ್ನೆಲೆ
ಹರ್ಭಜನ್ ಸಿಂಗ್ ಹೇಳುವ ಪ್ರಕಾರ, 2015ರಲ್ಲಿ ತನ್ನ ಸ್ನೇಹಿತನೊಬ್ಬನ ಮೂಲಕ ಬ್ಯುಸಿನೆಸ್ ಮ್ಯಾನ್ ಪರಿಚಯ ಆಗಿದ್ದನಂತೆ. ಆ ಬಳಿಕ ಭಜ್ಜಿ ಜಿ ಮಹೇಶ್ ಎನ್ನುವ ಆ ಉದ್ಯಮಿಗೆ 4 ಕೋ.ರೂ. ಸಾಲ ನೀಡಿದ್ದರಂತೆ. ಸಾಲ ನೀಡಿದ ಕೆಲ ವರ್ಷಗಳ ಬಳಿಕ ಸಿಂಗ್ ಆ ವ್ಯಕ್ತಿಯನ್ನು ಸಾಲ ಪಾವತಿಸುವಂತೆ ಅನೇಕ ಬಾರಿ ಸಂಪರ್ಕಿಸಿದ್ದರು. ಆದರೆ ಆ ವ್ಯಕ್ತಿ ಹಣ ನೀಡಲು ವಿಳಂಬ ಮಾಡುತ್ತಲೇ ಇದ್ದರಂತೆ.
25 ಲಕ್ಷ ರೂ. ಚೆಕ್ ಕತೆ
ಕಳೆದ ತಿಂಗಳು ಮಹೇಶ್ ಅವರು ಹರ್ಭಜನ್ಗೆ 25 ಲಕ್ಷ ರೂ. ಚೆಕ್ ನೀಡಿದ್ದರು. ಆದರೆ ಮಹೇಶ್ ಖಾತೆಯಲ್ಲಿ ಸಾಕಷ್ಟು ಹಣ ಇಲ್ಲದ್ದರಿಂದ ಚೆಕ್ ಬೌನ್ಸ್ ಆಗಿದೆ. ಹೀಗಾಗಿ ಈ ಬಾರಿ ಚೆನ್ನೈಗೆ ಹೋಗುವಾಗ ಭಜ್ಜಿ ಔಪಚಾರಿಕವಾಗಿ ಪೊಲೀಸ್ ದೂರು ದಾಖಲಿಸಲು ನಿರ್ಧರಿಸಿದರು.
ಬೇಲ್ಗಾಗಿ ಕೋರ್ಟ್ ಮೊರೆ
ಬಲ್ಲ ಮಾಹಿತಿಯ ಪ್ರಕಾರ, ಈ ವಂಚನೆಯ ದೂರನ್ನು ಈಗ ನೀಲಂಕಾರೈ ಅಸಿಂಟೆಂಟ್ ಕಮಿಶನರ್ ಆಫ್ ಪೊಲೀಸ್ ವಿಶ್ವೇಶ್ವರಯ್ಯ ಅವರಿಗೆ ರವಾನಿಸಲಾಗಿದೆ. ತನಿಖೆಗಾಗಿ ಮಹೇಶ್ಗೆ ಈಗಾಗಲೇ ಎಸಿಪಿ ಸಮನ್ಸ್ ನೀಡಿದ್ದಾರೆ. ಇತ್ತ ಮಹೇಶ್ ನಿರೀಕ್ಷಿತ ಜಾಮೀನಿಗಾಗಿ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದಾರೆ. ಆದರೆ ಬೇಲ್ ಕೋರಿಕೆ ಇನ್ನೂ ಬಾಕಿ ಉಳಿಸಲಾಗಿದೆ.
ಹಣ ಕೊಟ್ಟಿದ್ದೇನೆ ಎನ್ನುವ ಮಹೇಶ್
ಉದ್ಯಮಿ ಮಹೇಶ್ ತನ್ನ ಅಫಿಡವಿಟ್ನಲ್ಲಿ ಬೇರೆಯೇ ಹೇಳಿಕೊಂಡಿದ್ದಾರೆ. ಅದರಲ್ಲಿ, ತಾನು ಭಜ್ಜಿಯಿಂದ ಹಣ ತೆಗೆದುಕೊಳ್ಳುವುದಕ್ಕೂ ಮುನ್ನ ತಲಂಬೂರ್ನಲ್ಲಿರುವ ಸ್ಥಿರ ಆಸ್ತಿಯನ್ನು ಭಜ್ಜಿಗೆ ಭದ್ರತೆಯಾಗ ನೀಡಿದ್ದೆ. ತಾನೀಗಾಗಲೇ ಭಾರತದ ಸ್ಪಿನ್ನರ್ಗೆ ಬಾಕಿ ಹಣವನ್ನು ನೀಡಿದ್ದೇನೆ ಎಂದು ಮಹೇಶ್ ಅಫಿಡವಿಟ್ನಲ್ಲಿ ಹೇಳಿದ್ದಾರೆ ಎನ್ನಲಾಗಿದೆ.