14ನೇ ಆವೃತ್ತಿಯ ಐಪಿಎಲ್ನಲ್ಲಿ ಮೊದಲ ಪಂದ್ಯವನ್ನು ಗೆದ್ದುಕೊಂಡ ನಂತರ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಇಯಾನ್ ಮಾರ್ಗನ್ ತಂಡದ ಓರ್ವ ಆಟಗಾರನ ನಿಸ್ವಾರ್ಥ ಮನೋಭಾವ ಹಾಗೂ ಹುರುಪಿನ ವ್ಯಕ್ತಿತ್ವವನ್ನು ಪ್ರಶಂಸಿಸಿದ್ದಾರೆ.
ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕನಿಂದ ಹೀಗೆ ವಿಶೇಷವಾಗಿ ಪ್ರಶಂಸಿಲ್ಪಟ್ಟ ಆಟಗಾರ ಅನುಭವಿ ಹರ್ಭಜನ್ ಸಿಂಗ್. ತಂಡದಲ್ಲಿ ಉಳಿದ ಎಲ್ಲಾ ಆಟಗಾರರಿಗಿಂತ ಅತ್ಯಂತ ಹುರುಪಿನಿಂದ ಇರುವ ಆಟಗಾರ ಹರ್ಭಜನ್ ಸಿಂಗ್ ಎಂದಿದ್ದಾರೆ ಇಯಾನ್ ಮಾರ್ಗನ್. ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 10 ರನ್ಗಳ ಅಂತರದ ಗೆಲುವು ಸಾಧಿಸಿದ ನಂತರ ಅವರು ಈ ಮಾತು ಹೇಳಿದ್ದಾರೆ.
ಐಪಿಎಲ್ 2021: ಕೊಲ್ಕತ್ತಾ ವಿರುದ್ಧದ ಸೋಲಿಗೆ ಕಾರಣ ಹೇಳಿದ ಡೇವಿಡ್ ವಾರ್ನರ್
ಈ ಬಾರಿಯ ಐಪಿಎಲ್ನಲ್ಲಿ ಕೊಲ್ಕತ್ತಾ ತಂಡದ ಪಾಲಾದ ಹರ್ಭಜನ್ ಸಿಂಗ್ ಆರಂಭಿಕ ಪಂದ್ಯದಲ್ಲಿ ಆಡುವ ಅವಕಾಶವನ್ನು ಗಳಿಸಿಕೊಂಡರು. ಹರ್ಭಜನ್ ಸಿಂಗ್ ಬೌಲಿಂಗ್ ಮಾಡುವ ಮೂಲಕ ಕೊಲ್ಕತ್ತಾ ನೈಟ್ ರೈಡರ್ಸ್ ಬೌಲಿಂಗ್ ಆರಂಭಿಸಿತು. ಆರಂಭಿಕ ಓವರ್ನಲ್ಲಿ 8 ರನ್ ನೀಡಿದರು ಭಜ್ಜಿ. ಆದರೆ ಈ ಓವರ್ ಬೌಲಿಂಗ್ ಮಾಡಿದ ನಂತರ ಹರ್ಭಜನ್ ಸಿಂಗ್ ಬೌಲಿಂಗ್ ದಾಳಿಗೆ ಇಳಿಯಲಿಲ್ಲ. ಆದರೆ ಪಂದ್ಯದ ಮಧ್ಯೆ ಇತರ ಆಟಗಾರರಿಗೆ ಅನುಭವವನ್ನು ಹಂಚಿಕೊಳ್ಳುವ ಮೂಲಕ ತಂಡವನ್ನು ಬೆಂಬಲಿಸಿದರು.
"ಭಜ್ಜಿ ನಿಜಕ್ಕೂ ಉತ್ತಮ ಆರಂಭವನ್ನು ನೀಡಿದರು, ಆದರೆ ನಂತರ ಅವರು ದಾಳಿಯನ್ನು ನಡೆಸಲಿಲ್ಲ. ಆದರೆ ಪಂದ್ಯದಲ್ಲಿ ಹುಡುಗರೊಂದಿಗೆ ತನ್ನ ಅನುಭವವನ್ನು ಹಂಚಿಕೊಳ್ಳುವ ಮೂಲಕ ತಮ್ಮ ನಿಸ್ವಾರ್ಥ ಮನೋಭಾವವನ್ನು ಅವರು ವ್ಯಕ್ತಪಡಿಸಿದರು" ಎಂದು ಇಯಾನ್ ಮಾರ್ಗನ್ ಹೇಳಿದ್ದಾರೆ.
ಐಪಿಎಲ್ 2021: ಹೈದರಾಬಾದ್ ವಿರುದ್ಧ 10 ರನ್ಗಳ ಗೆಲುವು ಸಾಧಿಸಿದ ಕೊಲ್ಕತ್ತಾ
"ಎದುರಾಳಿ ತಂಡದ ಬ್ಯಾಟಿಂಗ್ ವಿಶ್ಲೇಷಣೆ ಮಾಡಿದ ನಂತರ ನಾವು ಆರಂಭಿಕ ಓವರ್ಅನ್ನು ಹರ್ಭಜನ್ ಸಿಂಗ್ ಅವರಿಂದ ಮಾಡಿಸುವುದಾಗಿ ಯೋಜನೆ ಹಾಕಿಕೊಂಡಿದ್ದೆವು. ಈ ಸಂದರ್ಭದಲ್ಲಿ ವಿಕೆಟ್ ಪಡೆಯಲು ಅವಕಾಶವನ್ನು ಕೂಡ ಅವರು ಸೃಷ್ಟಿಸಿದ್ದರು. ಆದರೆ ದುರದೃಷ್ಟವಶಾತ್ ಅದು ಡ್ರಾಪ್ ಆಯಿತು. ಆದರೆ ಬಳಿಕ ಅವರು ಅದ್ಭುತವಾಗಿ ತನ್ನ ಪಾತ್ರವನ್ನು ನಿರ್ವಹಿಸಿದರು. ತಮ್ಮ ಅನುಭವವನ್ನು ಯುವಕರೊಂದಿಗೆ ಹಂಚಿಕೊಳ್ಳುತ್ತಾ ಅಗತ್ಯವಿರುವ ಕಡೆ ಬೆಂಬಲಿಸಿದರು. ಅವರು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಶಿಬಿರಕ್ಕೆ ಬಂದಂದಿನಿಂದ ಎಲ್ಲರಿಗಿಂತಲೂ ಹೆಚ್ಚಿನ ಉತ್ಸಾಹವನ್ನು ತೋರಿದ್ದಾರೆ. ಅವರು ಅದನ್ನು ಮುಂದುವರಿಸಬಹುದು. ಬೌಲಿಂಗ್ಅನ್ನು ಕೂಡ ಅವರು ಇದ್ದ ರೀತಿಯಲ್ಲೇ ಅದ್ಭುತವಾಗಿ ಮುಂದುವರಿಸುವ ನಿರೀಕ್ಷೆಯಿದೆ" ಎಂದು ಇಯಾನ್ ಮಾರ್ಗನ್ ಹೇಳಿದ್ದಾರೆ.