ಸರಿಯಾದ ಆಲ್ ರೌಂಡರ್ ಹುಡುಕಾಟದಲ್ಲಿದೆ ಟೀಮ್ ಇಂಡಿಯಾ
ಟೀಮ್ ಇಂಡಿಯಾ ಹಿಂದಿನಿಂದಲೂ ಕೂಡ ಮಧ್ಯಮ ಕ್ರಮಾಂಕದಲ್ಲಿ ಜವಾಬ್ದಾರಿಯುತ ಆಟವನ್ನು ಆಡಬಲ್ಲ ಮತ್ತು ಅಗತ್ಯವಿದ್ದಾಗ ಕೆಲ ಓವರ್ ಬೌಲಿಂಗ್ ಮಾಡಬಲ್ಲ ಆಲ್ ರೌಂಡರ್ ಹುಡುಕಾಟದಲ್ಲಿದೆ. ತಂಡದಲ್ಲಿ ಹಾರ್ದಿಕ್ ಪಾಂಡ್ಯ ಇದ್ದರೂ ಕೂಡ ಇತ್ತೀಚಿನ ಹಲವಾರು ಸರಣಿ ಮತ್ತು ಟೂರ್ನಿಗಳಲ್ಲಿ ಹಾರ್ದಿಕ್ ಪಾಂಡ್ಯಾ ಯಾವುದೇ ಓವರ್ ಬೌಲಿಂಗ್ ಕೂಡ ಮಾಡಿರಲಿಲ್ಲ. ಹೀಗಾಗಿ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಆಯ್ಕೆಯ ಕುರಿತು ಪ್ರಶ್ನೆಗಳು ಎದ್ದಿದ್ದವು. ಈ ರೀತಿ ಪ್ರಶ್ನೆಗಳು ಎದ್ದ ನಂತರ ಹಾರ್ದಿಕ್ ಪಾಂಡ್ಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಕೆಲ ಪಂದ್ಯಗಳಲ್ಲಿ ಬೌಲಿಂಗ್ ಮಾಡಿದರೂ ಕೂಡ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಈ ಕಾರಣದಿಂದಾಗಿಯೇ ಹಾರ್ದಿಕ್ ಪಾಂಡ್ಯ ಜಾಗಕ್ಕೆ ನೂತನ ಆಟಗಾರರನ್ನು ಕರೆತರುವ ಉದ್ದೇಶದಿಂದ ನ್ಯೂಜಿಲೆಂಡ್ ವಿರುದ್ಧದ ಟಿ ಟ್ವೆಂಟಿ ಸರಣಿಗೆ ಪ್ರಕಟಿಸಲಾದ ತಂಡದಲ್ಲಿ ಹಾರ್ದಿಕ್ ಪಾಂಡ್ಯರಿಗೆ ಸ್ಥಾನ ನೀಡದೇ ಹೊರಗಿಡಲಾಗಿದೆ.
ಪಾಂಡ್ಯ ಬದಲಾಗಿ ವೆಂಕಟೇಶ್ ಐಯ್ಯರ್ ಆಯ್ಕೆ
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ದ್ವಿತೀಯ ಹಂತದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರ ಭರ್ಜರಿ ಪ್ರದರ್ಶನ ನೀಡುವುದರ ಮೂಲಕ ಎಲ್ಲರ ಗಮನವನ್ನು ಸೆಳೆದದ್ದು ವೆಂಕಟೇಶ್ ಐಯ್ಯರ್. ಹೌದು, ತಮ್ಮ ಸ್ಫೋಟಕ ಬ್ಯಾಟಿಂಗ್ನಿಂದಾಗಿ ಕ್ರಿಕೆಟ್ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದ ವೆಂಕಟೇಶ ಐಯ್ಯರ್ ಐಪಿಎಲ್ ಟೂರ್ನಿಯ ಕೆಲ ಪಂದ್ಯಗಳಲ್ಲಿ ಬೌಲಿಂಗ್ ಮಾಡಿ ಗಮನ ಸೆಳೆದಿದ್ದರು. ಹೀಗಾಗಿಯೇ ಬಿಸಿಸಿಐ ನ್ಯೂಜಿಲೆಂಡ್ ವಿರುದ್ಧದ ಟಿ ಟ್ವೆಂಟಿ ಸರಣಿಗೆ ವೆಂಕಟೇಶ್ ಐಯ್ಯರ್ ಅವರಿಗೆ ಅವಕಾಶ ನೀಡಿದೆ ಎನ್ನಲಾಗುತ್ತಿದೆ.
ಮುಂದಿನ ಟಿ ಟ್ವೆಂಟಿ ವಿಶ್ವಕಪ್ಗಾಗಿ ಈಗಿನಿಂದಲೇ ಯೋಜನೆ ರೂಪಿಸುತ್ತಿದೆ ಟೀಮ್ ಇಂಡಿಯಾ
2022ಕ್ಕೆ ಆಸ್ಟ್ರೇಲಿಯಾ ನೆಲದಲ್ಲಿ ನಡೆಯಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗಾಗಿ ಸಮತೋಲನವಾದ ಟೀಮ್ ಇಂಡಿಯಾವನ್ನು ಕಟ್ಟುವಲ್ಲಿ ಬಿಸಿಸಿಐ ನಿರತವಾಗಿದೆ. ಸದ್ಯ ತಂಡಕ್ಕೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿರುವ ಆಲ್ ರೌಂಡರ್ ಆಟಗಾರನ ಸ್ಥಾನಕ್ಕಾಗಿ ಸರಿಯಾದ ಆಟಗಾರನಿಗಾಗಿ ಹುಡುಕಾಡುತ್ತಿದ್ದ ಬಿಸಿಸಿಐ ವೆಂಕಟೇಶ ಐಯ್ಯರ್ ಅವರನ್ನು ಆಯ್ಕೆ ಮಾಡಿಕೊಂಡಿದೆ. ಹೀಗೆ ಅವಕಾಶ ಪಡೆದಿರುವ ವೆಂಕಟೇಶ್ ಐಯ್ಯರ್ ನ್ಯೂಜಿಲೆಂಡ್ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿ ಕಣಕ್ಕಿಳಿದು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನೀಡಿದ್ದ ರೀತುಯ ಪ್ರದರ್ಶನವನ್ನು ನೀಡಿ, ಒತ್ತಡದ ಸಂದರ್ಭದಲ್ಲಿ ಉತ್ತಮ ಬೌಲಿಂಗ್ ಮಾಡಿದರೆ ಮುಂದಿನ ದಿನಗಳಲ್ಲಿ ವೆಂಕಟೇಶ್ ಐಯ್ಯರ್ ಟೀಮ್ ಇಂಡಿಯಾದ ಪ್ರಮುಖ ಸದಸ್ಯರಾಗಲಿದ್ದಾರೆ ಹಾಗೂ ಇದೇ ಸಮಯಕ್ಕೆ ಹಾರ್ದಿಕ್ ಪಾಂಡ್ಯ ಮುಂದಿನ ದಿನಗಳಲ್ಲಿಯೂ ಅವಕಾಶ ವಂಚಿತರಾಗುವುದಂತೂ ಖಚಿತ.