ಜವಾಬ್ದಾರಿ ತೆಗೆದುಕೊಳ್ಳಲು ತಾನು ಸಿದ್ಧನಿದ್ದೇನೆ
ಭಾರತ ಟಿ20 ತಂಡದ ಹಂಗಾಮಿ ನಾಯಕ ಹಾರ್ದಿಕ್ ಪಾಂಡ್ಯ ತಮಗೆ ಕೊಟ್ಟ ಜವಾಬ್ದಾರಿಯನ್ನು ತಂಡದಲ್ಲಿ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ವಿದೇಶದ ನೆಲಗಳಲ್ಲಿ ಸರಣಿ ಜಯಿಸುತ್ತಿರುವುದು, ಭಾರತ ತಂಡದ ಭವಿಷ್ಯದ ನಾಯಕನ ಪಟ್ಟಕ್ಕೆ ಸುಲಭ ದಾರಿ ಮಾಡಿಕೊಡುತ್ತಿದೆ.
ನ್ಯೂಜಿಲೆಂಡ್ ವಿರುದ್ಧ ಅವರದೇ ನೆಲದಲ್ಲಿ ಟಿ20 ಸರಣಿ ಗೆದ್ದ ಭಾರತ ತಂಡದ ನಾಯಕರಾಗಿರುವ ಹಾರ್ದಿಕ್ ಪಾಂಡ್ಯಗೆ ಪೂರ್ಣಾವಧಿ ನಾಯಕತ್ವ ನೀಡುವಂತೆ ಕೂಗು ಕೇಳಿಬರುತ್ತಿದೆ.
ಭಾರತ ಟಿ20 ತಂಡದ ಪೂರ್ಣಾವಧಿ ನಾಯಕತ್ವವನ್ನು ಹಾರ್ದಿಕ್ ಪಾಂಡ್ಯಗೆ ವಹಿಸುವಂತೆ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ, ಮಾಜಿ ಲೆಜೆಂಡರಿ ಬ್ಯಾಟರ್ ಸುನಿಲ್ ಗವಾಸ್ಕರ್ ಸೇರಿದಂತೆ ಹಲವು ಮಾಜಿ ಕ್ರಿಕೆಟಿಗರು ಬೆಂಬಲಕ್ಕೆ ನಿಂತಿದ್ದಾರೆ.
ಜವಾಬ್ದಾರಿ ತೆಗೆದುಕೊಳ್ಳಲು ತಾನು ಸಿದ್ಧನಿದ್ದೇನೆ
ಈ ಕುರಿತು ಪ್ರತಿಕ್ರಿಯಿಸಿರುವ ಹಾರ್ದಿಕ್ ಪಾಂಡ್ಯ, "ಹಲವು ಮಾಜಿ ಕ್ರಿಕೆಟಿಗರು ನಾಯಕತ್ವ ವಹಿಸಿಕೊಳ್ಳಲು ತನಗೆ ಬೆಂಬಲ ನೀಡಿರುವುದನ್ನು ಕೇಳಿ ಖುಷಿಯಾಗಿದೆ," ಎಂದು ನ್ಯೂಜಿಲೆಂಡ್ ವಿರುದ್ಧದ ಮೂರನೇ ಪಂದ್ಯದ ನಂತರ ತಿಳಿಸಿದರು.
"ಭಾರತ ತಂಡದ ನಾಯಕತ್ವ ಜವಾಬ್ದಾರಿ ತೆಗೆದುಕೊಳ್ಳಲು ತಾನು ಸಿದ್ಧನಿದ್ದೇನೆ ಮತ್ತು ಅದರಿಂದ ಮುಂದಿನ ದಿನಗಳಲ್ಲಿ ಯಾವ ಫಲಿತಾಂಶ ಹೊರಹೊಮ್ಮುತ್ತದೆ ಎಂಬುದನ್ನು ನೋಡುತ್ತೇನೆ," ಎಂದು ಹೇಳಿದರು.
ಟ್ರೋಫಿ ಗೆಲ್ಲಲು ವಿಫಲವಾದ ನಂತರ ರೋಹಿತ್ ಶರ್ಮಾ ಗತಿಯೇನು?
ಭಾರತ ತಂಡವು 2022ರ ಏಷ್ಯಾ ಕಪ್ ಮತ್ತು ಟಿ20 ವಿಶ್ವಕಪ್ನಲ್ಲಿ ಟ್ರೋಫಿ ಗೆಲ್ಲಲು ವಿಫಲವಾದ ನಂತರ ರೋಹಿತ್ ಶರ್ಮಾ ಅವರ ನಾಯಕತ್ವದ ಬಗ್ಗೆ ಪ್ರಶ್ನೆಗಳು ಕೇಳಿಬರುತ್ತಿವೆ. ಇದರ ನಡುವೆ ಆಸ್ಟ್ರೇಲಿಯಾದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಸೆಮಿಫೈನಲ್ ಸೋತ ನಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ತಂಡದ ಆಯ್ಕೆ ಸಮಿತಿಯನ್ನು ವಜಾ ಮಾಡಿದೆ.
ಬಿಸಿಸಿಐ ಇದೀಗ ಇನ್ನೊಂದು ಹೆಜ್ಜೆ ಮುಂದೆ ಹೋಗುವ ಮೂಲಕ, ರೋಹಿತ್ ಶರ್ಮಾ ಅವರಿಂದ ಟಿ20 ನಾಯಕತ್ವ ಕಿತ್ತುಕೊಳ್ಳುತ್ತದೆಯೇ ಎಂಬುದನ್ನು ಕಾದು ನೋಡಬೇಕು. 2024ರ ಟಿ20 ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಭಾರತ ತಂಡದಲ್ಲಿ ಕೆಲವು ಹೊಸ ವಿಧಾನವನ್ನು ಅಳವಡಿಸಿಕೊಳ್ಳುವ ಸಮಯ ಬಂದಿದೆ ಎಂದು ಕೆಲವು ಮಾಜಿ ಕ್ರಿಕೆಟಿಗರು ಅಭಿಪ್ರಾಯಪಟ್ಟಿದ್ದಾರೆ.
ಹಾರ್ದಿಕ್ ಅದ್ಭುತ ನಾಯಕತ್ವದ ಗುಣ ಹೊಂದಿದ್ದಾನೆ: ಗವಾಸ್ಕರ್
35ರ ಹರೆಯದ ರೋಹಿತ್ ಶರ್ಮಾ ಕ್ರಿಕೆಟ್ನ ಎಲ್ಲಾ 3 ಮಾದರಿಗಳಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇದು ಅವರಿಗೆ ಒತ್ತಡವೆನಿಸುತ್ತದೆ ಮತ್ತು ಹಾರ್ದಿಕ್ ಪಾಂಡ್ಯಗೆ ಚುಟುಕು ಕ್ರಿಕೆಟ್ನ ಸಾರಥ್ಯ ವಹಿಸಿದರೆ ತಪ್ಪೇನಿಲ್ಲ ಎಂದು ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ. ಇನ್ನು ಐಪಿಎಲ್ನ ಗುಜರಾತ್ ಟೈಟನ್ಸ್ ನಾಯಕ "ಅದ್ಭುತ ನಾಯಕತ್ವದ ಗುಣಗಳನ್ನು' ಹೊಂದಿದ್ದಾರೆ ಎಂದು ಸುನಿಲ್ ಗವಾಸ್ಕರ್ ಪದೇ ಪದೇ ಹಾರ್ದಿಕ್ ಪಾಂಡ್ಯರನ್ನು ಬೆಂಬಲಿಸಿದ್ದಾರೆ.
ಗೆಲುವಿಗಾಗಿ ತನ್ನದೇ ದಾರಿಯಲ್ಲಿ ಮುನ್ನಡೆಸುತ್ತೇನೆ
ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಸರಣಿಯನ್ನು 1-0 ಅಂತರದಿಂದ ಗೆದ್ದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಾರ್ದಿಕ್ ಪಾಂಡ್ಯ, ತಂಡದ ನಾಯಕತ್ವದ ಜವಾಬ್ದಾರಿ ಸಿಕ್ಕಾಗಲೆಲ್ಲ ಗೆಲುವಿಗಾಗಿ ತನ್ನದೇ ದಾರಿಯಲ್ಲಿ ಮುನ್ನಡೆಸುತ್ತೇನೆ ಎಂದು ಹೇಳಿದರು.
ಭಾರತದ ಏಕದಿನ ಮತ್ತು ಟೆಸ್ಟ್ ತಂಡಗಳ ಭಾಗವಾಗಿಲ್ಲದ ಹಾರ್ದಿಕ್ ಪಾಂಡ್ಯ, ಟಿ20 ಸ್ವರೂಪದ ಮೇಲೆ ಹೆಚ್ಚು ಕೇಂದ್ರೀಕರಿಸಿದ್ದಾರೆ ಮತ್ತು ಕಳೆದ 8 ತಿಂಗಳುಗಳಲ್ಲಿ ನಾಯಕರಾಗಿ ಅವರ ಯಶಸ್ಸು ಗಮನಾರ್ಹವಾಗಿದೆ.
ಗುಜರಾತ್ ಟೈಟನ್ಸ್ ತಂಡವನ್ನು ಚಾಂಪಿಯನ್ಗೆ ಮುನ್ನಡೆಸಿದರು
2022ರ ಐಪಿಎಲ್ಗೆ ಮುಂಚಿತವಾಗಿ ಹೊಸ ಫ್ರಾಂಚೈಸಿ ತಂಡ ಗುಜರಾತ್ ಟೈಟನ್ಸ್ಗೆ ಹಾರ್ದಿಕ್ ಪಾಂಡ್ಯ ನಾಯಕನಾಗಿ ನೇಮಕಗೊಂಡಾಗ ಹಲವರು ಹುಬ್ಬೇರಿಸಿದ್ದರು. ತನ್ನ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವ ಮೂಲಕ ಎಲ್ಲರ ಅಲೋಚನೆಗಳನ್ನು ತಲೆಕೆಳಗೆ ಮಾಡಿದರು ಮತ್ತು ತಮ್ಮಲ್ಲಿರುವ ನಾಯಕತ್ವದ ಗುಣಗಳನ್ನು ತೋರ್ಪಡಿಸಿದರು.
ನಂತರ ಹಾರ್ದಿಕ್ ಪಾಂಡ್ಯ ಜೂನ್ನಲ್ಲಿ ಐರ್ಲೆಂಡ್ನಲ್ಲಿ ಭಾರತ ತಂಡವನ್ನು 2-0 ಅಂತರದ ಸರಣಿ ಗೆಲುವಿನತ್ತ ಮುನ್ನಡೆಸಿದರೆ, ಆಗಸ್ಟ್ನಲ್ಲಿ ವೆಸ್ಟ್ ಇಂಡೀಸ್ನಲ್ಲಿ ನಡೆದ 5 ಪಂದ್ಯಗಳ ಟಿ20 ಸರಣಿಯನ್ನು ಗೆದ್ದ ಭಾರತ ತಂಡದ ನಾಯಕರಾಗಿದ್ದರು.
ಮುಂದಿನ 2024ರ ಟಿ20 ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಭಾರತ ತಂಡದ ಆಯ್ಕೆ ಮಂಡಳಿ ನಾಯಕತ್ವದ ವಿಚಾರದಲ್ಲಿ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ.