ಟಿ20 ಮಾದರಿಯಿಂದ ರೋಹಿತ್, ವಿರಾಟ್ ಹೊರಕ್ಕೆ
ಮೂಲಗಳ ಪ್ರಕಾರ ರೋಹಿತ್ ಶರ್ಮಾ ಇನ್ನು ಮುಂದೆ ಟಿ20 ಮಾದರಿಯಲ್ಲಿ ಭಾರತ ತಂಡದಲ್ಲಿ ಆಡುವುದಿಲ್ಲ. ವಿರಾಟ್ ಕೊಹ್ಲಿಯವರನ್ನು ಕೂಡ ಟಿ20 ಕ್ರಿಕೆಟ್ನಿಂದ ಹೊರಗಿಡಲು ನಿರ್ಧರಿಸಲಾಗಿದೆ. ಏಕದಿನ ವಿಶ್ವಕಪ್ ಮುಂದಿರುವುದರಿಂದ ಒತ್ತಡವನ್ನು ಕಡಿಮೆ ಮಾಡುವ ನೆಪದಲ್ಲಿ ಇಬ್ಬರು ಹಿರಿಯ ಆಟಗಾರರನ್ನು ತಂಡದಿಂದ ತೆರೆಮರೆಗೆ ಸರಿಸಲು ಮುಂದಾಗಿದೆ ಬಿಸಿಸಿಐ.
ಟಿ20 ನಾಯಕತ್ವ ಬದಲಾವಣೆ ಬಗ್ಗೆ ಬಿಸಿಸಿಐ ಅಧಿಕೃತ ಘೋಷಣೆ ಮಾಡಿಲ್ಲವಾದರೂ, ಹಾರ್ದಿಕ್ ಪಾಂಡ್ಯ ತಂಡದ ನಾಯಕನಾಗಿ ಮುಂದುವರೆಯುವುದು ಖಚಿತವಾಗಿದೆ. ಏಕದಿನ ಮಾದರಿಗೆ ಕೂಡ ಉಪನಾಯಕನ ಸ್ಥಾನದಿಂದ ಕೆಎಲ್ ರಾಹುಲ್ರನ್ನು ಕೈಬಿಟ್ಟು ಹಾರ್ದಿಕ್ ಪಾಂಡ್ಯರನ್ನು ಉಪನಾಯಕರನ್ನಾಗಿ ಮಾಡಿದೆ.
IND vs NZ: ಏಕದಿನ ಕ್ರಿಕೆಟ್ನಲ್ಲಿ ಈತನಿಗೆ ಇನ್ನೂ ಅವಕಾಶ ನೀಡಬೇಕಿದೆ; ವಾಸಿಂ ಜಾಫರ್
ನಾಯಕನಾಗಿ ಪಾಂಡ್ಯ ಉತ್ತಮ ಪ್ರದರ್ಶನ
"ಹಾರ್ದಿಕ್ ಪಾಂಡ್ಯ ಟಿ20 ಮಾದರಿಯಲ್ಲಿ ನಾಯಕನಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಯಸ್ಸಿನಲ್ಲಿ ಚಿಕ್ಕವನಾದರೂ ಸಾಕಷ್ಟು ಸುಧಾರಿಸಿದ್ದಾರೆ. ರೋಹಿತ್ ಶರ್ಮಾ ನಂತರ ಭಾರತ ತಂಡದ ನಾಯಕತ್ವಕ್ಕೆ ಪಾಂಡ್ಯಗಿಂದ ಉತ್ತಮ ಆಯ್ಕೆಯಿಲ್ಲ. ಆತನಿಗೆ ಬೆಂಬಲ ನೀಡಬೇಕು" ಎಂದು ಬಿಸಿಸಿಐ ಅಧಿಕಾರಿ ಹೇಳಿದ್ದಾರೆ.
ಟಿ20 ವಿಶ್ವಕಪ್ ಮುಕ್ತಾಯದ ಬಳಿಕ ನಡೆದ ಟಿ20 ಸರಣಿಗಳಲ್ಲಿ ಹಾರ್ದಿಕ್ ಪಾಂಡ್ಯ ನಾಯಕರಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಟಿ20 ವಿಶ್ವಕಪ್ ನಂತರ ಪಾಂಡ್ಯ ನಾಯಕತ್ವದಲ್ಲಿ ಆಡಿರುವ ಎರಡು ಟಿ20 ಸರಣಿಯನ್ನು ಭಾರತ ಗೆದ್ದಿದೆ.
ಟೆಸ್ಟ್ ತಂಡಕ್ಕೆ ಕೆಎಲ್ ರಾಹುಲ್ ನಾಯಕ
ಮುಂದಿನ ದಿನಗಳಲ್ಲಿ ಭಾರತದ ಟೆಸ್ಟ್ ತಂಡದ ನಾಯಕನಾಗಿ ಕೆಎಲ್ ರಾಹುಲ್ ಮತ್ತು ರಿಷಬ್ ಪಂತ್ ರೇಸ್ನಲ್ಲಿದ್ದಾರೆ. ಪಂತ್ ಸದ್ಯ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಅವರು ಯಾವಾಗ ಕ್ರಿಕೆಟ್ಗೆ ಮರಳಲಿದ್ದಾರೆ ಎಂದು ಹೇಳುವುದು ಕಷ್ಟವಾಗಿದೆ.
ಕೆಎಲ್ ರಾಹುಲ್ ತಂಡದ ನಾಯಕನಾಗಿ ಆಯ್ಕೆಯಾದರು, ಅವರು ಬಿಸಿಸಿಐಗೆ ನಂಬಿಕೆ ಬರುವಂತಹ ಪ್ರದರ್ಶನ ನೀಡಬೇಕಿದೆ. ಬಾಂಗ್ಲಾದೇಶದ ವಿರುದ್ಧದ ಸರಣಿಯಲ್ಲಿ ರಾಹುಲ್ ನಾಯಕತ್ವದಲ್ಲಿ ಭಾರತ ಸರಣಿ ಗೆದ್ದರು, ನಾಯಕನಾಗಿ ಕೆಎಲ್ ರಾಹುಲ್ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಏಕದಿನ ವಿಶ್ವಕಪ್ ನಂತರ ಬಿಸಿಸಿಐ, ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಜೊತೆ ಚರ್ಚೆ ನಡೆಸಿ ಈ ಬಗ್ಗೆ ತೀರ್ಮಾನಿಸಲಿದೆ.
ರೋಹಿತ್ ಶರ್ಮಾ ಈಗಾಗಲೇ 36 ವರ್ಷ ವಯಸ್ಸಿನವರಾಗಿದ್ದಾರೆ. ಅವರು ಇನ್ನೂ ಹೆಚ್ಚು ದಿನಗಳ ಕಾಲ ಕ್ರಿಕೆಟ್ ಆಡುವ ಸಾಧ್ಯತೆಯಿಲ್ಲ. 2023ರ ಏಕದಿನ ವಿಶ್ವಕಪ್ ಗೆದ್ದರೆ, ರೋಹಿತ್ ಶರ್ಮಾ ನಿವೃತ್ತಿ ಘೋಷಿಸುವ ಸಾಧ್ಯತೆ ಕೂಡ ಇದ್ದು, ಬಿಸಿಸಿಐ ಈಗಿನಿಂದಲೇ ಎಲ್ಲದಕ್ಕೂ ಸಜ್ಜಾಗುತ್ತಿದೆ.